ಕೊರೊನಾ: ರಾಜ್ಯ ಸರಕಾರ ಎಡವುತ್ತಿರುವುದು ಈ 3 ವಿಚಾರದಲ್ಲಿ, ತುರ್ತಾಗಿ ಗಮನಕೂಡಬೇಕಿದೆ
ಮಾರಣಾಂತಿಕ ಕೊರೊನಾ ವೈರಸ್ ಇನ್ನಷ್ಟು ಹರಡದಂತೆ ತಡೆಯಲು ಒಂಬತ್ತು ಜಿಲ್ಲೆಗಳನ್ನು ಲಾಕ್ ಡೌನ್ ಮಾಡಲಾಗಿದೆ. ಈ ಜಿಲ್ಲೆಗಳಲ್ಲಿ 144 ಸೆಕ್ಷನ್ ಜಾರಿಯಾಗಿರುವುದು ಒಂದೆಡೆಯಾದರೆ, ವಾಣಿಜ್ಯ ವ್ಯವಹಾರಕ್ಕೂ ಬ್ರೇಕ್ ಹಾಕಲಾಗಿದೆ. ಇದರ ಜೊತೆಗೆ, ಹೊರ ರಾಜ್ಯದ ಗಡಿಭಾಗಗಳನ್ನು ಬಂದ್ ಮಾಡಲಾಗಿದೆ.
ಸರಕಾರ ಎಷ್ಟೇ ಕ್ರಮ ತೆಗೆದುಕೊಂಡರೂ ಅದನ್ನು ಪಾಲಿಸಬೇಕಾದವರು ಸಾರ್ವಜನಿಕರು. ಭಾನುವಾರದ ಒಂದು ದಿನದ ಜನತಾ ಕರ್ಫ್ಯೂವಿನ ನಂತರ, ಈ ವೈರಸ್ ವಿಚಾರದಲ್ಲಿ ಜನ ಎಚ್ಚೆತ್ತುಕೊಂಡಿದ್ದಾರಾ ಎನ್ನುವ ಪ್ರಶ್ನೆ ಕಾಡುವುದು, ಸೋಮವಾರದ ಸಾರ್ವಜನಿಕರ ದಿನಚರಿ.
ಎಂದಿನ ದಿನದಂತೆ ವಹಿವಾಟು ಇಲ್ಲದಿದ್ದರೂ, ಸರಕಾರದ ಹೇಳಿದಂತೆ ಕಂಪ್ಲೀ ಲಾಕ್ ಡೌನ್ ಏನೂ ಆಗಿಲ್ಲ ಎನ್ನುವುದು ಬೀದಿಬೀದಿ ಅಲೆದಾಗ ಕಾಣುವ ವಾಸ್ತವತೆ. ಅಗತ್ಯ ವಸ್ತುಗಳನ್ನು ಬಿಟ್ಟರೆ ಮಿಕ್ಕೆಲ್ಲವನ್ನೂ ಬಂದ್ ಮಾಡಲು ಸರಕಾರ ಆದೇಶವನ್ನು ನೀಡಿತ್ತು.
ರಾಜ್ಯ ಸರಕಾರ ಇಷ್ಟು ಹೊತ್ತಿಗಾಗಲೇ ಒಂದು ಸೂಕ್ತ ಮತ್ತು ದಿಟ್ಟ ಯೋಜನೆಗಳನ್ನು ಹಾಕಿಕೊಳ್ಳಬೇಕಾಗಿತ್ತು. ಇಬ್ಬರು ಸಚಿವರ ನಡುವಿನ ಸಂವಹನದ ಕೊರತೆ ಇಂತಹ ಕ್ಲಿಷ್ಟ ಸಂದರ್ಭದಲ್ಲೂ ಅಲ್ಲಲ್ಲಿ ಕಾಣುತ್ತಿವೆ. ಈ ಹೊತ್ತಿನವರೆಗೂ (ಮಾ 23, ಸಂಜೆ 4.30) ಇಡೀ ರಾಜ್ಯ ಲಾಕ್ ಡೌನ್ ಮಾಡುವ ಅಧಿಕೃತ ಆದೇಶ ಸರಕಾರದಿಂದ ಹೊರಬಿದ್ದಿಲ್ಲ. ಸರಕಾರ ತುರ್ತಾಗಿ ಈ ಮೂರು ವಿಚಾರದಲ್ಲಿ ಗಮನ ಹರಿಸಬೇಕಾಗಿದೆ.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿಕೆ
"ಕೋವಾರೆಂಟ್ ಗೆ ಒಳಗಾದವರನ್ನ ಸಂಪೂರ್ಣವಾಗಿ ಗುರುತಿಸೋ ಕೆಲಸ ಮುಂದುವರೆದಿದೆ. ಕೆಲವರು ಉಲ್ಲಂಘನೆ ಮಾಡುತ್ತಿದ್ದಾರೆ. ಮನೆ ಹೊರಗೆ, ಹೊರಗೆ ಓಡಾಡುತ್ತಿರುವವರಿಗೆ ನೋಟೀಸ್, ಕೋ ವಾರಂಟ್ ನಲ್ಲಿ ಇರುವವರ ಮನೆ ಬಾಗಿಲಿಗೆ ನೋಟೀಸ್ ನೀಡಲಾಗುವುದು" ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ರಾಜ್ಯ ರಸ್ತೆ ಸಾರಿಗೆ ಸಂಸ್ಥೆ
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ತನ್ನ ಸೇವೆಯನ್ನು ಹಿಂದಕ್ಕೆ ಪಡೆದುಕೊಂಡಿದೆ. ಆ ಮೂಲಕ, ಈ ಹೊತ್ತಿಗೆ ಬೇಕಾಗಿರುವ ಸೂಕ್ತವಾದ ನಿರ್ಧಾರವನ್ನು ಸರಕಾರ ತೆಗೆದುಕೊಂಡಿದೆ. ರಾಜ್ಯದಿಂದ ಹೊರಡುವ ಮತ್ತು ರಾಜ್ಯಕ್ಕೆ ಬರುವ ಇತರ ರಾಜ್ಯಗಳ ಬಸ್ ಸಂಚಾರವೂ ರದ್ದುಗೊಂಡಿದೆ. ವೈರಸ್ ತಡೆಯಲು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಬಹುಮುಖ್ಯ, ಹಾಗಾಗಿ ಸಂಸ್ಥೆ ಉತ್ತಮ ನಿರ್ಧಾರವನ್ನೇ ತೆಗೆದುಕೊಂಡಿದೆ.

ಬಿಎಂಟಿಸಿ ಇಂತಹ ನಿರ್ಧಾರವನ್ನು ತೆಗೆದುಕೊಂಡಿಲ್ಲ
ಆದರೆ, KSRTC ರೀತಿಯಲ್ಲಿ ಬಿಎಂಟಿಸಿ ಇಂತಹ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಪೂರ್ಣ ಪ್ರಮಾಣದಲ್ಲಿ ಸಂಚಾರ ಇಲ್ಲದಿದ್ದರೂ, ಶೇ. 20-30ರಷ್ಟು ಬಸ್ ರಸ್ತೆಯಲ್ಲಿ ಓಡಾಡುತ್ತಿವೆ. ಸರಕಾರ ಏನೋ ಕಂಪ್ಲೀಟ್ ಶಟ್ ಡೌನ್ ಆರ್ಡರ್ ಅನ್ನು ಕೊಟ್ಟಿದೆ. ಆದರೆ, ಖಾಸಗಿ ಸಂಸ್ಥೆಗಳು ಇದನ್ನು ಪಾಲಿಸಬೇಕಲ್ಲ. ಹಾಗಾಗಿ, ಈ ಉದ್ಯೋಗಿಗಳು ಬೇರೆ ದಾರಿಯಿಲ್ಲದೇ, ಸಿಕ್ಕಿದ ಬಿಎಂಟಿಸಿ ಬಸ್ಸುಗಳಲ್ಲೇ ಸಂಚರಿಸುತ್ತಿದ್ದಾರೆ. ಇದರಿಂದ ಬಸ್ಸುಗಳು ತುಂಬಿ ತುಳುಕುವುದಿಲ್ಲವೇ. ಹಾಗಾಗಿ, ಬಿಎಂಟಿಸಿ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸುವ ವಿಚಾರದಲ್ಲಿ ಸರಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕಿದೆ.

ಖಾಸಗಿ ಬಸ್ಸುಗಳು, ಟೆಂಪೋ ಟ್ರಾವೆಲರ್ ಗಳು ಓಡಾಡುತ್ತಿವೆ
ಸರಕಾರೀ ಬಸ್ಸು ಸಂಚಾರ ರದ್ದು ಆಗಿರುವುದರಿಂದ, ಖಾಸಗಿ ಬಸ್ಸುಗಳು, ಟೆಂಪೋ ಟ್ರಾವೆಲರ್ ಗಳು ಓಡಾಡುತ್ತಿವೆ. ಜನರನ್ನು ತುಂಬಿಸಿ ತುಂಬಿಸಿ ಕರೆದುಕೊಂಡು ಹೋಗುತ್ತಿವೆ. ಆ ಮೂಲಕ, ಇಂತಹ ಸಂದರ್ಭದಲ್ಲೂ ನಾಲ್ಕು ಕಾಸು ಮಾಡಿಕೊಳ್ಳುವ ಕನಿಷ್ಠ ಬುದ್ದಿಯನ್ನು ತೋರಿಸುತ್ತಿವೆ. ತುಮಕೂರು ರಸ್ತೆಯಲ್ಲಿ ಖಾಸಗಿ ವಾಹನಗಳು ಓಡಾಡುವ ದೃಶ್ಯಗಳು ಕಾಣಿಸುತ್ತಿವೆ.












Click it and Unblock the Notifications