ಬಕ್ರೀದ್ ಸಂಭ್ರಮಕ್ಕೆ ಕೊರೊನಾ ಅಡ್ಡಿ: ಆಡು ಕುರಿಗಳಿಗೆ ಕುಸಿದ ಡಿಮ್ಯಾಂಡ್!
ಇದೇ ಶುಕ್ರವಾರ ಮುಸಲ್ಮಾನರಿಗೆ ಬಕ್ರೀದ್ ಹಬ್ಬದ ಸಂಭ್ರಮ. ಆದರೆ ಕೊರೊನಾ ಸೋಂಕು ಈ ಹಬ್ಬದ ಸಂಭ್ರಮಕ್ಕೆ ತಣ್ಣೀರೆರಚಿದೆ. ಮುಖ್ಯವಾಗಿ ಬಕ್ರೀದ್ ಹಬ್ಬಕ್ಕೆ ಮಾರಾಟಕ್ಕೆ ಬಂದಿರುವ ನೂರಾರು ಆಡು ಕುರಿಗಳನ್ನು ಕೇಳುವವರೇ ಇಲ್ಲದಂತಾಗಿದೆ. ಇದು ರಾಜ್ಯಾದ್ಯಂತ ಸದ್ಯದ ಪರಿಸ್ಥಿತಿ.
ಹೌದು. ಬಕ್ರೀದ್ ಹಬ್ಬ ಬಂತೆಂದರೆ ಉಡುಪಿಯ ಬೀಡಿನಗುಡ್ಡೆ ಸಹಿತ ಪ್ರತೀ ಊರ ಮೈದಾನದಲ್ಲೂ ಕಣ್ಣು ಹಾಯಿಸಿದಷ್ಟೂ ಆಡು ಕುರಿಗಳೇ ತುಂಬಿರುತ್ತವೆ. ವ್ಯಾಪಾರವೂ ಭರಾಟೆಯಾಗಿ ನಡೆಯುತ್ತದೆ. ಬಕ್ರೀದ್ ಮುಸಲ್ಮಾನರಿಗೆ ತ್ಯಾಗ ಬಲಿದಾನಗಳ ಹಬ್ಬ. ಈ ಹಬ್ಬದ ಸಂದರ್ಭ ಸಂಬಂಧಿಕರಿಗೆ, ನೆರೆಹೊರೆಯವರಿಗೆ ಮುಸಲ್ಮಾನರು ಆಡು ಅಥವಾ ಕುರಿ ಮಾಂಸವನ್ನು ದಾನ ಮಾಡುತ್ತಾರೆ. ತಮ್ಮ ತಮ್ಮ ಮನೆಗಳಲ್ಲೂ ಭರ್ಜರಿ ಆಡಿನ ಬಿರಿಯಾನಿ ಮಾಡಿ ಬಂಧುಗಳಿಗೆ ಸಂಬಂಧಿಕರಿಗೆ ಹಂಚುತ್ತಾರೆ. ಆದರೆ ಈ ಬಾರಿ ಆ ಸಂಭ್ರಮಕ್ಕೆ ಅಡ್ಡಿಯಾಗಿದೆ.
ಬಕ್ರೀದ್ ಸಾಮೂಹಿಕ ಪ್ರಾರ್ಥನೆಗೆ ಸರ್ಕಾರದ ಮಾರ್ಗಸೂಚಿ!
ಆಡು ಕುರಿಗಳಿಗೆ ಗಿರಾಕಿಗಳೇ ಇಲ್ಲ
ಈ ಬಾರಿ ಕೊರೊನಾ ಕಾರಣದಿಂದಾಗಿ ಬಕ್ರೀದ್ ಹಬ್ಬದ ಸಂಭ್ರಮ ಕಾಣಿಸುತ್ತಿಲ್ಲ. ಕೊರೊನಾ ಲಾಕ್ ಡೌನ್ ನಿಂದ ಜನರು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಎಲ್ಲರ ಕಿಸೆಯನ್ನೂ ಈ ಸೋಂಕು ಖಾಲಿ ಮಾಡಿದೆ. ಹೀಗಾಗಿ ಆಡು ಕುರಿಗಳಿಗೆ ಗಿರಾಕಿಗಳೇ ಇಲ್ಲ.
ರದ್ದುಗೊಂಡಿದ್ದ ಹಜ್ ಯಾತ್ರೆ
ಇನ್ನು ಹಬ್ಬದ ಸಂಭ್ರಮ ಕಡಿಮೆ ಆಗಲು ಇನ್ನೊಂದು ಪ್ರಮುಖ ಕಾರಣ, ಈ ಬಾರಿಯ ಹಜ್ ಯಾತ್ರೆ ರದ್ದುಗೊಂಡಿರುವುದು. ಕೊರೊನಾ ಕಾರಣದಿಂದಾಗಿ ಈ ವರ್ಷ ಹಜ್ ಯಾತ್ರೆ ಭಾರತೀಯರಿಗೆ ಇಲ್ಲದಂತಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಜನರು ಹಜ್ ಯಾತ್ರೆ ಕೈಗೊಳ್ಳುತ್ತಿದ್ದುದಕ್ಕೂ ಬ್ರೇಕ್ ಬಿದ್ದಿರುವುದು ಬಕ್ರೀದ್ ಸಂಭ್ರಮ ಮರೆಯಾಗಲು ಕಾರಣವಾಗಿದೆ.
ಬಕ್ರೀದ್; ಸಾಮೂಹಿಕ ಪ್ರಾರ್ಥನೆಗೆ ನಿರ್ಬಂಧ
ಈ ಬಾರಿ ಸರಳವಾಗಿ ಹಬ್ಬ ಆಚರಿಸಲು ತೀರ್ಮಾನ
ಬಕ್ರೀದ್ ದಿನ ಮುಸಲ್ಮಾನರ ಪವಿತ್ರ ತೀರ್ಥ ಕ್ಷೇತ್ರ ಮೆಕ್ಕಾದಲ್ಲಿ ವಿಶೇಷ ಧಾರ್ಮಿಕ ಆಚರಣೆಗಳು ಸಂಪನ್ನಗೊಳ್ಳುತ್ತವೆ. ವಿಶ್ವದ ಮೂಲೆಮೂಲೆಗಳಿಂದ ಬಂದ ಮುಸಲ್ಮಾನರು ಅಂದು ಈ ತ್ಯಾಗ ಬಲಿದಾನಗಳ ಹಬ್ಬಕ್ಕೆ ವಿಶೇಷ ನಮಾಝ್, ಪ್ರಾರ್ಥನೆ ಮಾಡಿ ಧಾರ್ಮಿಕ ವಿಧಿಗಳಲ್ಲಿ ಭಾಗವಹಿಸುತ್ತಾರೆ. ಇದೇ ಕಾರಣಕ್ಕೆ ಈ ಹಬ್ಬವನ್ನು ಹಜ್ ಪೆರ್ನಾಲ್ ಎಂದೂ ಮುಸಲ್ಮಾನರು ಕರೆಯುತ್ತಾರೆ. ಈ ಬಾರಿ ಹಜ್ ಇಲ್ಲದ ಕಾರಣಕ್ಕೆ ಮುಸಲ್ಮಾನರು ಹಬ್ಬವನ್ನು ಸರಳವಾಗಿ ಆಚರಿಸಲು ತೀರ್ಮಾನಿಸಿದ್ದಾರೆ.
ಸಾಮೂಹಿಕ ಪ್ರಾರ್ಥನೆಗೂ ಅವಕಾಶವಿಲ್ಲ
ಹಬ್ಬ ಕಳೆಗುಂದಲು ಮತ್ತೂ ಒಂದು ಕಾರಣ ಸ್ಥಳೀಯ ಮಸೀದಿಗಳಲ್ಲೂ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಇಲ್ಲದಿರುವುದು ಹಾಗೂ ಮಸೀದಿಗಳಲ್ಲಿ ನಿರ್ಬಂಧ ಇರುವುದು. ಇನ್ನು ಈ ಹಬ್ಬದ ಸಂಭ್ರಮವನ್ನು ಹೆಚ್ಚು ಮಾಡುವುದು ಹೊಸ ಬಟ್ಟೆ. ಈ ಬಾರಿ ಅದೂ ಇಲ್ಲ. ಸಾಂಕ್ರಾಮಿಕ ಹಬ್ಬದ ಸಂದರ್ಭ ಹೊಸ ಬಟ್ಟೆ ಖರೀದಿ ಮಾಡದೆ ಸರಳವಾಗಿ ಆಚರಿಸಲು ಮುಸಲ್ಮಾನರು ತೀರ್ಮಾನಿಸಿದ್ದಾರೆ. ಹೀಗಾಗಿ ಈ ವರ್ಷದ ಬಕ್ರೀದ್ ಅಥವಾ ಈದುಲ್ ಅಝ್ ಹಾ ಹಬ್ಬದ ಮುನ್ನಾದಿನದ ಸಂಭ್ರಮವೂ ಕಳೆಗುಂದಲು ಕಾರಣವಾಗಿದೆ.