ಕೊರೊನಾ; 28 ದಿನ ವೇತನ ಸಹಿತ ರಜೆ ಕೊಡಲು ಸರ್ಕಾರ ಆದೇಶ
ಬೆಂಗಳೂರು, ಮಾರ್ಚ್ 5: ಜಗತ್ತಿನಾದ್ಯಂತ ತಲ್ಲಣ ಸೃಷ್ಟಿಸಿರುವ ಕೊರೊನಾ ವೈರಸ್ ಸೋಂಕು ಭಾರತದಲ್ಲಿಯೂ ಕಾಣಿಸಿಕೊಂಡು ತೀವ್ರ ಆತಂಕಕ್ಕೆ ಕಾರಣವಾಗಿದೆ. ಇದುವರೆಗೆ ಕರ್ನಾಟಕದಲ್ಲಿ ಕೊರೊನಾ ಸೋಂಕು ಪೀಡಿತರು ಕಂಡು ಬರದಿದ್ದರೂ ರಾಜ್ಯ ಆರೋಗ್ಯ ಇಲಾಖೆ ವ್ಯಾಪಕ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.
Recommended Video
ಇದರ ಬೆನ್ನಲ್ಲೇ ಕೊರೊನಾ ವೈರಸ್ ಸೋಂಕಿನ ಬಗ್ಗೆ ರಾಜ್ಯ ಕಾರ್ಮಿಕ ಇಲಾಖೆ ಹೊಸ ಸುತ್ತೋಲೆ ಬಿಡುಗಡೆ ಮಾಡಿದೆ. ಒಂದು ವೇಳೆ ರಾಜ್ಯದಲ್ಲಿ ಯಾವುದೇ ಕಾರ್ಮಿಕರಿಗೆ ಕೊರೊನಾ ಸೋಂಕು ಕಂಡು ಬಂದರೆ ಕೆಲಸ ನೀಡಿರುವ ಸಂಸ್ಥೆಗಳು ಆ ಕಾರ್ಮಿಕನಿಗೆ 28 ದಿನಗಳ ವೇತನ ಸಹಿತ ರಜೆ ನೀಡಬೇಕು ಎಂದು ಸುತ್ತೋಲೆ ಹೊರಡಿಸಿದೆ.
ವಿಶ್ವವನ್ನೇ ಬೆಚ್ಚಿ ಬೀಳಿಸಿದ ಕೊರೊನಾ ವೈರಸ್ ಬಗ್ಗೆ ವಿಜ್ಞಾನಿಗಳು ಹೇಳುವುದೇನು?
ಕೊರೊನಾ ಶಂಕೆ ಪ್ರಕರಣಗಳನ್ನು ತಪಾಸಣೆ ಮಾಡಲು ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಪ್ರಯೋಗಾಲಯ ಸಿದ್ದವಿದ್ದು, ಕಾರ್ಮಿಕರು ಭಯಪಡದೆ ತಪಾಸಣೆ ಮಾಡಿಸಿಕೊಳ್ಳಬೇಕು. ಅಂತವರಿಗೆ ವೇತನ ಸಹಿತ ರಜೆ ಸಿಗುತ್ತದೆ ಎಂದು ಕಾರ್ಮಿಕ ಇಲಾಖೆ ಹೇಳಿದೆ. ಕೆಲವೊಂದು ನಿಯಮಗಳನ್ನು ಈ ಕುರಿತು ಜಾರಿಗೊಳಿಸಿದೆ.
28 ದಿನ ಆಸ್ಪತ್ರೆಯಲ್ಲಿ ಇರಬೇಕಾಗುತ್ತದೆ
ಕಾರ್ಮಿಕರಿಗೆ ಕೊರೊನಾ ವೈರಸ್ ಸೋಂಕು ಕಂಡು ಬಂದರೆ, ಇಎಸ್ಐ ಅನ್ವಯವಾಗುವ ಸಂಸ್ಥೆಗಳ ಕಾರ್ಮಿಕರು ಆಸ್ಪತ್ರೆಗಳಲ್ಲಿ ವೈದ್ಯಾಧಿಕಾರಿ ಪ್ರಮಾಣಪತ್ರ ಸಲ್ಲಿಸಿ ಚಿಕಿತ್ಸೆಗೆ ಸೂಚಿಸಿದ ಆಸ್ಪತ್ರೆಗಳಲ್ಲಿ ದಾಖಲಾಗಬೇಕು. ಕೋರೊನಾ ವೈರಸ್ ಸೋಂಕು ಖಚಿತಪಟ್ಟರೇ ಅಂತವರು ಕನಿಷ್ಠ 28 ದಿನ ಆಸ್ಪತ್ರೆಯಲ್ಲಿ ಇರಬೇಕಾಗುತ್ತದೆ.
ಪ್ರಮಾಣ ಪತ್ರ ನೀಡಬೇಕು
ಸೋಂಕಿನ ಶಂಕೆಯ ಮೇಲೆ ಇಎಸ್ಐ ಆಸ್ಪತ್ರೆಗಳಿಗೆ ಬರುವ ಕಾರ್ಮಿಕರಿಗೆ ಇಎಸ್ಐ ಆಸ್ಪತ್ರೆಯ ವೈದ್ಯರು ಸೂಕ್ತ ತಪಾಸಣೆ ಮಾಡಿ ಮುಂದಿನ ಕ್ರಮ ಕೈಗೊಳ್ಳಬೇಕು. ಕಾರ್ಮಿಕನಿಗೆ ಪ್ರಮಾಣ ಪತ್ರ ನೀಡಬೇಕು. ಸಂಬಂಧಿಸಿದ ಸಂಸ್ಥೆ ಕಾರ್ಮಿಕನಿಗೆ ವೇತನ ಸಹಿತ 28 ದಿನಗಳ ರಜೆ ಮಂಜೂರು ಮಾಡಬೇಕು ಎಂದು ಸುತ್ತೋಲೆ ತಿಳಿಸಿದೆ.
ಕೊರೊನಾ ವೈರಸ್ ಬಗ್ಗೆ 12 ವರ್ಷದ ಹಿಂದೆಯೇ ಸುಳಿವು ನೀಡಿತ್ತಾ ಆ ಪುಸ್ತಕ?
ಕಾಯ್ದೆ ಅನ್ವಯ ಆಗದ ಸಂಸ್ಥೆ
ಒಂದು ವೇಳೆ ಇಎಸ್ಐ ಕಾಯ್ದೆ ಅನ್ವಯ ಆಗದ ಸಂಸ್ಥೆಗಳಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದರೇ, ಆ ಸಂಸ್ಥೆಗಳು ಕರ್ನಾಟಕ ಅಂಗಡಿ ಹಾಗೂ ವಾಣಿಜ್ಯ ಸಂಸ್ಥೆಗಳ ಕಲಂ 15 (3) ಪ್ರಕಾರ ಕೊರೊನಾ ಸೋಂಕು ಕಂಡು ಬಂದಿದ್ದರೆ ವೇತನ ಸಹಿತ 28 ದಿನ ರಜೆ ಮಂಜೂರು ಮಾಡಬೇಕು ಎಂದು ಸುತ್ತೋಲೆ ಆದೇಶಿಸಿದೆ.
ಕರ್ನಾಟಕದಲ್ಲಿ ಕೊರೊನಾ ಪತ್ತೆಗೆ ಎರಡು ಲ್ಯಾಬ್ಗಳು ಆರಂಭ
ಜಿಲ್ಲಾಧಿಕಾರಿಗಳು ಅಗತ್ಯ ಕ್ರಮ
ಕೊರೊನಾ ದೃಡಪಟ್ಟ ವ್ಯಕ್ತಿಯ ಚಿಕಿತ್ಸೆಯ ನಿಗಾವನ್ನು ಜಿಲ್ಲಾಧಿಕಾರಿಗಳು ವಹಿಸಬೇಕು. ಕೊರೊನಾ ಶಂಕಿತ ವ್ಯಕ್ತಿ ಯಾರ ಸಂಪರ್ಕಕ್ಕೂ ಬಾರದಂತೆ ಜಿಲ್ಲಾಧಿಕಾರಿಗಳು ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಕಾರ್ಮಿಕ ಇಲಾಖೆ ಆದೇಶಿಸಿದೆ.