ಗುತ್ತಿಗೆದಾರರು ಸಾವೇ ಗತಿ ಎಂಬ ಹಂತಕ್ಕೆ ಬಂದಿದ್ದಾರೆ: ಮತ್ತೊಬ್ಬ ಗುತ್ತಿಗೆದಾರನ ಆತ್ಮಹತ್ಯೆ ಕುರಿತು ಕಾಂಗ್ರೆಸ್ ಹೇಳಿದ್ದೇನು?
ಬೆಂಗಳೂರು, ಡಿಸೆಂಬರ್ 31: ತುಮಕೂರು ಜಿಲ್ಲೆಯಲ್ಲಿ ಗುತ್ತಿಗೆದಾರರೊಬ್ಬರು ಆತ್ಮಹತ್ಯೆ ಮಾಡಿಕೊಂಡ ವಿಚಾರವೀಗ ರಾಜ್ಯ ರಾಜಕಾರಣದಲ್ಲಿ ಕೋಲಾಹಲವನ್ನೇ ಸೃಷ್ಟಿಸಿದೆ. ಗುತ್ತಿಗೆದಾರರ ಆತ್ಮಹತ್ಯೆಗೆ ರಾಜ್ಯ ಸರ್ಕಾರವೇ ಕಾರಣ ಎಂಬ ಆರೋಪಗಳು ಕೇಳಿಬಂದಿವೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, 'ಸಾಲ ಮಾಡಿ ಕಾಮಗಾರಿಗೆ ಬಂಡವಾಳ ಹೂಡಿದ್ದ ಗುತ್ತಿಗೆದಾರ ಪ್ರಸಾದ್ ಅವರಿಗೆ ಬಿಲ್ ಬಿಡುಗಡೆ ಮಾಡದೆ ಸತಾಯಿಸುತ್ತಿದ್ದ ಕಾರಣ ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ. ಭ್ರಷ್ಟ ಬಿಜೆಪಿ ಸರ್ಕಾರದಿಂದಾಗಿ ಗುತ್ತಿಗೆದಾರರು ನಮಗೆ ಸಾವೇ ಗತಿ ಎಂಬ ಹಂತಕ್ಕೆ ಬಂದಿದ್ದಾರೆ. ಬಸವರಾಜ ಬೊಮ್ಮಾಯಿ ಅವರೇ, ಇನ್ನೆಷ್ಟು ಬಲಿಗಾಗಿ ಕಾಯುತ್ತಿರುವಿರಿ' ಎಂದು ಪ್ರಶ್ನಿಸಿದೆ.
'ಅಮಿತ್ ಶಾ ಅವರೇ, ಗುತ್ತಿಗೆದಾರರ 40 ಪರ್ಸೆಂಟ್ ಕಮಿಷನ್ ಆರೋಪದ ಬಗ್ಗೆ ತಾವು ತುಟಿ ಬಿಚ್ಚದೆ ಇರುವುದೇಕೆ? ಆತ್ಮಹತ್ಯೆ ದಾರಿ ಹಿಡಿದಿರುವ ಗುತ್ತಿಗೆದಾರರೊಂದಿಗೆ ಸಮಾಲೋಚನೆ ನಡೆಸುವುದಿಲ್ಲವೇ? ಆತ್ಮಹತ್ಯೆ ಮಾಡಿಕೊಂಡ ಸಂತೋಷ್ ಪಾಟೀಲ್, ಪ್ರಸಾದ್ ಕುಟುಂಬಕ್ಕೆ ಸಾಂತ್ವಾನ ಹೇಳುವುದಿಲ್ಲವೇ? ಗುತ್ತಿಗೆದಾರರ ಆರೋಪದ ಬಗ್ಗೆ ತನಿಖೆಗೆ ಇಷ್ಟವಿಲ್ಲವೇ?' ಎಂದು ಕೆಪಿಸಿಸಿ ಆಕ್ರೋಶ ವ್ಯಕ್ತಪಡಿಸಿದೆ.

ಡಿ.ಕೆ.ಶಿವಕುಮಾರ್ ಆಕ್ರೋಶ
ಗುತ್ತಿಗೆದಾರರ ಸಾವಿನ ವಿಚಾರದ ಕುರಿತು ಟ್ವೀಟ್ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ''ಸಂತೋಷ್ ಪಾಟೀಲ್ ಅವರಿಂದ ಹಿಡಿದು ಇಂದು ದೇವರಾಯನದುರ್ಗದ ಗುತ್ತಿಗೆದಾರ ಪ್ರಸಾದ್ ಅವರ ಸಾವಿನವರೆಗೆ ಬಿಜೆಪಿಯ ಭ್ರಷ್ಟಾಚಾರ ಹೆಮ್ಮರವಾಗಿ ಬೆಳೆದು ನಿಂತಿದೆ. 40 ಪರ್ಸೆಂಟ್ ಕಮಿಷನ್ನ ದುರಾಸೆ ಮತ್ತೊಬ್ಬ ಅಮಾಯಕ ಗುತ್ತಿಗೆದಾರನ ಕುತ್ತಿಗೆಗೆ ಕುಣಿಕೆಯಾಗಿರುವುದು ಬಿಜೆಪಿಯ ನೀಚ ರಾಜಕಾರಣದ ಪರಮಾವಧಿ" ಎಂದು ವಾಗ್ದಾಳಿ ನಡೆಸಿದ್ದಾರೆ.
"40 ಪರ್ಸೆಂಟ್ ಕಮಿಷನ್ ದಾಹಕ್ಕೆ ಗುತ್ತಿಗೆದಾರರ ಸರಣಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿದೆ. ರಾಜ್ಯದ ಜನರ ಮುಂದೆ ಬಿಜೆಪಿ ಅಸಲಿಯತ್ತು ಬಯಲಾಗಿದ್ದರೂ ರಾಜ್ಯ ಸರ್ಕಾರ ಇನ್ನೂ ತನ್ನ 40% ಕಮಿಷನ್ ದಂಧೆ ಮುಂದುವರೆಸುತ್ತಿರುವುದು ವಿಪರ್ಯಾಸ. ಬಿಜೆಪಿಯ ಭ್ರಷ್ಟಾಚಾರಕ್ಕೆ ಅಂದು ಸಂತೋಷ್ ಪಾಟೀಲ್, ಇಂದು ಪ್ರಸಾದ್, ಮುಂದಿನ ಬಲಿ ಇನ್ಯಾರೋ?" ಎಂದು ಪ್ರಶ್ನಿಸಿದ್ದಾರೆ.

"ಮುಖ್ಯಮಂತ್ರಿಗಳೇ ರಾಜ್ಯದಲ್ಲಿ ಜನ ಸಂಕಲ್ಪ ಯಾತ್ರೆ ಮಾಡುತ್ತಿದ್ದೀರೋ ಅಥವಾ ಜನರ ಶವಯಾತ್ರೆ ಮಾಡುತ್ತಿದ್ದೀರೋ? ಪ್ರಸಾದ್ ಅವರ ಆತ್ಮಹತ್ಯೆ ಪ್ರಕರಣದ ಬಗ್ಗೆ ಕೂಲಂಕುಷವಾಗಿ ತನಿಖೆಯಾಗಬೇಕು. ಅವರ ಸಾವಿಗೆ ಕಾರಣರಾದವರಿಗೆ ಶಿಕ್ಷೆಯಾಗಬೇಕು? ಇಲ್ಲವಾದಲ್ಲಿ ನಿಮ್ಮ ಸರ್ಕಾರದ ಅಧಃಪತನ ಖಚಿತ" ಎಂದು ಡಿಕೆಶಿ ತಿಳಿಸಿದ್ದಾರೆ.
ತುಮಕೂರು ಜಿಲ್ಲೆಯ ದೇವರಾಯನದುರ್ಗದಲ್ಲಿ 50 ವರ್ಷದ ಟಿ.ಎನ್. ಪ್ರಸಾದ್ ಎಂಬ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.












Click it and Unblock the Notifications