Lok Sabha Election 2024: ಕರ್ನಾಟದಲ್ಲಿ ಕಾಂಗ್ರೆಸ್ ಗೆಲ್ಲುವ ಸ್ಥಾನಗಳೆಷ್ಟು ಗೊತ್ತಾ?
ಬೆಂಗಳೂರು, ಮಾರ್ಚ್ 05: ವಿಧಾನಸಭಾ ಚುಣಾವಣೆಯಲ್ಲಿ ಗೆಲುವು ಕಂಡ ಕಾಂಗ್ರೆಸ್ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುವ ನಿಟ್ಟಿನಲ್ಲಿ ತಯಾರಿ ನಡೆಸಿದೆ. ಮುಂಬರುವ ಲೊಕಸಭಾ ಚುನಾವಣೆಯಲ್ಲಿ ನಮ್ಮ ಕೈ ಗಟ್ಟಿ ಮಾಡಬೇಕು. ರಾಜ್ಯದಲ್ಲಿ 20 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ನಮಗಿದೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳನ್ನು ಯಾವುದೇ ಪಕ್ಷಗಳು ತೆಗೆದು ಹಾಕಲು ಸಾಧ್ಯವಿಲ್ಲ. ಇಂದಿರಾಗಾಂಧಿ ಅವರ ಕಾಲದಲ್ಲಿ ಬಡವರಿಗೆ ಭೂಮಿ ನೀಡುವ, ಅರಸು ಅವರ ಕಾಲದಲ್ಲಿ ಜನತಾ ಮನೆಗಳು ನೀಡುವ ಯೋಜನೆ ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ಯಾವ ಪಕ್ಷಗಳು ನೀಡಲು ಸಾಧ್ಯವಿಲ್ಲ. ಕಾಂಗ್ರೆಸ್ ಶಕ್ತಿ ಈ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ಈ ದೇಶದ ಇತಿಹಾಸ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ವರ್ಗಗಳ ಜನ ಅಧಿಕಾರಕ್ಕೆ ಬಂದಂತೆ.

ಪಕ್ಷ ಬೇಧ, ಜಾತಿ ಬೇಧ ಮರೆತು ಎಲ್ಲರಿಗೂ ಅನುಕೂಲವಾಗಲು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ತೀರ್ಥಹಳ್ಳಿಯ ಶಾಸಕ ಅರಗ ಜ್ಞಾನೇಂದ್ರ ಅವರು ಗ್ಯಾರಂಟಿ ಯೋಜನೆಗಳನ್ನು 420 ಯೋಜನೆ ಎಂದು ಕರೆದರು. ಬಿಜೆಪಿ ನಾಯಕರಲ್ಲೇ ಗ್ಯಾರಂಟಿ ಯೋಜನೆಗಳ ಬಗ್ಗೆ ದ್ವಂದ್ವವಿದೆ. ಕಾರ್ಕಳ ಶಾಸಕ ಸುನೀಲ್ ಕುಮಾರ್ 'ಗ್ಯಾರಂಟಿ ಯೋಜನೆಗಳಿಂದ ಜನರ ಬದುಕು ಸದೃಡವಾಗಿದೆ' ಎಂದು ಹೇಳಿದ್ದಾರೆ.
ಅಶೋಕಣ್ಣ ಮತ್ತು ದಳದವರು ತಾಕತ್ತಿದ್ದರೆ ಅವರ ಪಕ್ಷಗಳ ಕಾರ್ಯಕರ್ತರು ಸೇರಿದಂತೆ ಜನರಿಗೆ ಗ್ಯಾರಂಟಿ ಯೋಜನೆಗಳನ್ನು ತಿರಸ್ಕರಿಸಿ ಎಂದು ಕರೆ ಕೊಡಿ. ಉಚಿತ ಯೋಜನೆಗಳು ಬೇಡ, ವಿದ್ಯುತ್ ಬಿಲ್ ಕಟ್ಟುತ್ತೇನೆ ಎಂದು ಬರೆದು ಕೊಡಲು ಹೇಳಿ. ಜನ ತಿರಸ್ಕರಿಸಲು ಒಪ್ಪುತ್ತಾರೆಯೇ? ಎಂದು ಸವಾಲು ಹಾಕಿದರು.
ಹೆಚ್ಚು ಆದಾಯ ಬರುವ ದೇವಸ್ಥಾನಗಳ ಆದಾಯದಿಂದ ಶೇ 10 ರಷ್ಟು ಹಣ ಪಡೆದು ಅರ್ಚಕರಿಗೆ ಸಹಾಯ ಮಾಡುವ ಕಾನೂನು ತರಲು ಹೊರಟೆವು. ಸಣ್ಣ, ಸಣ್ಣ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಈ ಹಣ ಬಳಸಿಕೊಳ್ಳುವ ಅವಕಾಶ ನೀಡಲು ಹೋದರೆ ಬಿಜೆಪಿಯವರು ಅಡ್ಡಗಾಲು ಹಾಕಿದರು. ಗ್ರಾಮೀಣ ಭಾಗದ ಆಂಜನೇಯ, ಬಸವಣ್ಣ ದೇವಸ್ಥಾನಗಳ ಅಭಿವೃದ್ಧಿಗೆ ಅಡ್ಡಗಾಲು ಹಾಕಿದರು. ಎರಡು ತಿಂಗಳು ಕಳೆದ ಮೇಲೆ ಮತ್ತೊಮ್ಮೆ ಈ ಮಸೂದೆಯನ್ನು ಮಂಡಿಸಿ ಒಪ್ಪಿಗೆ ಪಡೆದು ಅನುಷ್ಠಾನಕ್ಕೆ ತರುತ್ತೇವೆ.

ನಾವು ಬದುಕಿನ ಮೇಲೆ ರಾಜಕಾರಣ ಮಾಡುತ್ತೇವೆ ಹೊರತು ಭಾವನೆಗಳ ಮೇಲೆ ರಾಜಕಾರಣ ಮಾಡುವುದಿಲ್ಲ. ನಮ್ಮ ರಾಜಕರಣದಲ್ಲಿ ಧರ್ಮವಿದೆ ಹೊರತು. ಧರ್ಮದಲ್ಲಿ ರಾಜಕಾರಣವಿಲ್ಲ. ನಮಗೂ ಅವರಿಗೂ ಇರುವ ವ್ಯತ್ಯಾಸ ಇಷ್ಟೇ. ನಾವು ತಂದಿರುವ ಗ್ಯಾರಂಟಿ ಯೋಜನೆಗಳು ಎಲ್ಲಾ ಜಾತಿ, ಧರ್ಮಗಳಿಗೆ ಅನುಕೂಲ ಮಾಡಿಕೊಟ್ಟಿವೆ. ನಾವು ಜಾತಿ ಮೇಲೆರಾಜಕಾರಣ ಮಾಡುವುದಿಲ್ಲ, ನೀತಿ ಮೇಲೆ ರಾಜಕಾರಣ ಮಾಡುತ್ತೇವೆ.
ನಾವು ಬಡತನದ ಮೇಲೆ ಯುದ್ದ ಮಾಡುತ್ತೇವೆ ಹೊರತು, ಬಡವರ ಮೇಲೆ ಯುದ್ದ ಮಾಡುವುದಿಲ್ಲ. ಕಮಲ ಕೆರೆಯಲ್ಲಿ ಇದ್ದರೆ ಚೆನ್ನ, ಈ ಧಾನ, ಧರ್ಮ ಮಾಡುವ ಕೈ ಅಧಿಕಾರದಲ್ಲಿ ಇದ್ದರೆ ಚೆನ್ನ. ನಿಮ್ಮ ಭೂಮಿಗಳನ್ನು ಮಾರಿಕೊಳ್ಳಬೇಡಿ. ಪೆರಿಫೆರಲ್ ವರ್ತುಲ ರಸ್ತೆ ಬರುತ್ತಿದೆ. ಇನ್ನೂ ಅನೇಕ ಬಡಾವಣೆಗಳು ಬೆಳೆಯುತ್ತಿವೆ. ಸರ್ಕಾರದಿಂದ ಶೇ 40 ರಷ್ಟು ನಿವೇಶನ ಹಂಚಿಕೆ ಮಾಡಿದರೂ ಕೋಟ್ಯಂತರ ರೂಪಾಯಿ ಹಣ ನಿಮ್ಮದಾಗಲಿದೆ. ಚಿಲ್ಲರೆ ಹಣಗಳಿಗೆ ಜಮೀನು ಮಾರಲು ಹೋಗಬೇಡಿ. ನಿಮ್ಮ ಆರೋಗ್ಯ, ಶಿಕ್ಷಣ, ಉದ್ಯೋಗಕ್ಕೆ ಬೇಕಾದ ಎಲ್ಲಾ ಯೋಜನೆಗಳನ್ನು ನಾವು ರೂಪಿಸಿ ಕೊಡುತ್ತೇವೆ.
ನೆಲಮಂಗಲ ಕ್ಷೇತ್ರ ಬೆಂಗಳೂರಿನ ಹೆಬ್ಬಾಗಿಲು. ಮುನಿಯಪ್ಪ ಅವರು, ಶ್ರೀನಿವಾಸಯ್ಯ ಅವರು ಈ ಭಾಗಕ್ಕೆ ಮೆಟ್ರೋ ಮತ್ತು ಕಾವೇರಿ ನೀರು ನೀಡಲೇಬೇಕು ಎಂದು ಹೇಳಿದ್ದಾರೆ. ಈ ಯೋಜನೆಗಳಿಗೆ ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ. ಹೊಸೂರು ರಸ್ತೆ, ಕೋಲಾರ ದ್ವಿಪಥ ರಸ್ತೆ, ದೇವನಹಳ್ಳಿ ಸೇತುವೆ, ನೆಲಮಂಗಲ ಸೇತುವೆ ಈ ಎಲ್ಲಾ ಯೋಜನೆಗಳನ್ನು ನೀಡಿದ್ದು ಮನಮೋಹನ್ ಸಿಂಗ್ ಅವರ ಸರ್ಕಾರ. ಜನರ ಬದುಕಿನಲ್ಲಿ ಏನಾದರೂ ಬದಲಾವಣೆಯಾಗಿದ್ದರೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಾತ್ರ ಎಂದು ಹೇಳಿದರು.












Click it and Unblock the Notifications