ನಿವೃತ್ತ ಶಿಕ್ಷಕರ ಮೇಲೆ ಕಣ್ಣಿಟ್ಟ ಕಾಂಗ್ರೆಸ್! ಕೈ ನಾಯಕರ ಹೊಸ ತಂತ್ರವೇನು?
ಮೈಸೂರು, ಫೆಬ್ರವರಿ 18: ಕಾಂಗ್ರೆಸ್ ತಳಮಟ್ಟದಲ್ಲಿ ಪಕ್ಷವನ್ನು ಗಟ್ಟಿ ಮಾಡುವ ಕೆಲಸಕ್ಕೆ ಮುಂದಾಗಿದೆ. ಹೀಗಾಗಿ ಎಲ್ಲ ಕ್ಷೇತ್ರಗಳತ್ತ ಗಮನಹರಿಸುತ್ತಿದ್ದು ಸಂಘಟನೆ ಮಾಡುವ ಮೂಲಕ ರಾಜ್ಯದಲ್ಲಿ ಮುಂದಿನ ಚುನಾವಣೆ ವೇಳೆಗೆ ಮತದಾರರನ್ನು ಹಿಡಿದಿಟ್ಟುಕೊಳ್ಳುವ ಕೆಲಸಕ್ಕೆ ಕೈ ಹಾಕುತ್ತಿದೆ. ಅದರಂತೆ ಇದೀಗ ನಿವೃತ್ತ ಶಿಕ್ಷಕರತ್ತ ದೃಷ್ಟಿ ಹರಿಸಿದ್ದು ತಾಲೂಕು ಮಟ್ಟದಲ್ಲಿ ಘಟಕಗಳನ್ನು ರಚಿಸಿ ಅದಕ್ಕೆ ಪದಾಧಿಕಾರಿಗಳ ನೇಮಕ ಮಾಡುವ ಪ್ರಕ್ರಿಯೆ ಜೋರಾಗಿದೆ.
ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕು ಕಾಂಗ್ರೆಸ್ ನಿವೃತ್ತ ಶಿಕ್ಷಕರ ಘಟಕದ ಜತೆಗೆ ಸಾಲಿಗ್ರಾಮ ತಾಲೂಕಿನಲ್ಲಿಯೂ ನೂತನ ಘಟಕ ರಚನೆ ಮಾಡಿ ಶೀಘ್ರದಲ್ಲಿಯೇ ಪದಾಧಿಕಾರಿಗಳನ್ನು ನೇಮಕ ಮಾಡಲು ಮುಂದಾಗಿರುವುದು ಕಂಡು ಬರುತ್ತಿದೆ. ಈ ಸಂಬಂಧ ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೆಗೌಡ ಆಕ್ಟೀವ್ ಆಗಿದ್ದು, ತಾಲೂಕು ಮಟ್ಟದಲ್ಲಿ ಪಕ್ಷದ ಬಲವರ್ಧನೆಗೆ ಮುಂದಾಗಿದ್ದಾರೆ. ತಾಲೂಕು ಬ್ಲಾಕ್ ಕಾಂಗ್ರೆಸ್ ಮತ್ತು ನಿವೃತ್ತ ಶಿಕ್ಷಕರ ಕಾಂಗ್ರೆಸ್ ಘಟಕದ ವತಿಯಿಂದ ಪಟ್ಟಣದ ಮುಳ್ಳೂರು ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಗಾಂಧಿ ಶಾಂತಿ ಪುರಸ್ಕಾರ ಸಮಾರಂಭ ಆಯೋಜಿಸಿ ಅದರಲ್ಲಿ ಶಿಕ್ಷಕರನ್ನು ಸನ್ಮಾನಿಸಲಾಗಿದೆ.

ಈ ವೇಳೆ ಮಾತನಾಡಿದ ದೊಡ್ಡಸ್ವಾಮೆಗೌಡ ಅವರು ಸಮಾಜವನ್ನು ಸರಿದಾರಿಗೆ ತರುವ ಶಿಕ್ಷಕರ ಮಾರ್ಗದರ್ಶನದಲ್ಲಿ ಪಕ್ಷವನ್ನು ಬಲಪಡಿಸಲು ಎಲ್ಲರೂ ಮುಂದಾಗೋಣ ಎಂದು ಕರೆ ನೀಡಿದ್ದಾರೆ. ಅಲ್ಲದೆ, ಉತ್ತಮವಾಗಿ ಸಂಘಟನೆ ಮಾಡುವ ನಿವೃತ್ತ ಶಿಕ್ಷಕರನ್ನು ಗುರುತಿಸಿ ಪದಾಧಿಕಾರಿಗಳ ಸ್ಥಾನ ನೀಡಿ ಅವರುಗಳ ಶಕ್ತಿ ಮತ್ತು ಸಂಪರ್ಕವನ್ನು ಬಳಕೆ ಮಾಡಿಕೊಳ್ಳಬೇಕೆಂದು ಕರೆ ನೀಡಿದ ಅವರು ನಾನು ಈ ಘಟಕದ ಹಿಂದೆ ಬೆನ್ನೆಲುಬಾಗಿ ನಿಲ್ಲುತ್ತೇನೆಂದು ಭರವಸೆ ನೀಡಿದ್ದು, ಕೆಪಿಸಿಸಿ ನಿವೃತ್ತ ಶಿಕ್ಷಕರ ಘಟಕ ಆರಂಭಿಸುವಂತೆ ಸೂಚನೆ ನೀಡಿದ್ದಾರೆ.
ನಿವೃತ್ತ ಶಿಕ್ಷಕರಿಗೆ ಗಾಂಧಿ ಶಾಂತಿ ಪ್ರಶಸ್ತಿ ಪ್ರದಾನ
ಪ್ರಪ್ರಥಮವಾಗಿ ಕೆ.ಆರ್.ನಗರದಲ್ಲಿ ಘಟಕ ಆರಂಭಿಸಿ ಪದಾಧಿಕಾರಿಗಳನ್ನು ನೇಮಕ ಮಾಡಿದ್ದು ಇದು ಅತ್ಯಂತ ಸಂತಸದ ವಿಚಾರ ಎಂದಿದ್ದಾರೆ. ತಳ ಮಟ್ಟದಿಂದ ಸಂಪರ್ಕ ಹೊಂದಿರುವ ನಿವೃತ್ತ ಶಿಕ್ಷಕರನ್ನು ಸದ್ಬಳಕೆ ಮಾಡಿಕೊಂಡು ಪಕ್ಷ ಸಂಘಟನೆ ಮಾಡುವುದರ ಜೊತೆಗೆ ಸರ್ಕಾರದ ಕಾರ್ಯಕ್ರಮಗಳನ್ನು ಜನರ ಮನೆಬಾಗಿಲಿಗೆ ತಲುಪಿಸಲು ಪಕ್ಷದ ಪದಾಧಿಕಾರಿಗಳು ಕೆಲಸ ಮಾಡಬೇಕೆಂದು ಸಲಹೆ ನೀಡಿದ್ದಾರೆ.
ಇನ್ನು ಸಮಾರಂಭಕ್ಕೆ ಆಗಮಿಸಿದ್ದ ಕಾಂಗ್ರೆಸ್ ಶಾಸಕ ಡಿ. ರವಿಶಂಕರ್ ಮಾತನಾಡಿ ಪಕ್ಷ ಸಂಘಟನೆಯ ಹಿತ ದೃಷ್ಟಿಯಿಂದ ಕೆಪಿಸಿಸಿ ಈ ಹೊಸ ಚಿಂತನೆ ನಡೆಸಿ ನಿವೃತ್ತ ಶಿಕ್ಷಕರ ಘಟಕ ಆರಂಭಿಸಿರುವುದು ಉತ್ತಮವಾದ ಯೋಚನೆಯಾಗಿದ್ದು ಮುಂದಿನ ದಿನಗಳಲ್ಲಿ ಈ ಸಂಘಟನೆ ಉತ್ತಮವಾಗಿ ಕೆಲಸ ಮಾಡಬೇಕೆಂದು ಆಶಿಸಿದ್ದಾರೆ. ಇದೇ ವೇಳೆ ನಿವೃತ್ತ ಶಿಕ್ಷಕರಾದ ಕೆ.ಪಿ. ಸೋಮಶೇಖರಯ್ಯ, ರಾಜನಾಯಕ, ಎಂ.ಎಲ್. ವಿಶ್ವನಾಥ್, ಡಿ.ಜೆ. ರಮೇಶ್, ಸಿ. ಎಚ್. ಪರಶುರಾಮ್, ಕೃಷ್ಣಯ್ಯ ಅವರುಗಳಿಗೆ ಗಾಂಧಿ ಶಾಂತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ನಿವೃತ್ತ ಶಿಕ್ಷಕರು ಕೈಗೆ ಆಸರೆ ಆಗ್ತಾರಾ?
ಜಿಲ್ಲಾ ನಿವೃತ್ತ ಶಿಕ್ಷಕರ ಕಾಂಗ್ರೆಸ್ ಘಟಕದ ಅಧ್ಯಕ್ಷ ಜವರೇಗೌಡ, ಉಪಾಧ್ಯಕ್ಷರಾದ ಮೋಹನಕುಮಾರ್, ಕೆಂಚಪ್ಪ, ತಾಲೂಕು ಘಟಕದ ಅಧ್ಯಕ್ಷ ಸಿದ್ದರಾಜು, ಪ್ರಧಾನ ಕಾರ್ಯದರ್ಶಿ ಕೆ.ಬಿ.ಪುಟ್ಟರಾಜೇಗೌಡ, ಪದಾಧಿಕಾರಿಗಳಾದ ಮಾಯಯ್ಯ, ಎಂ.ಎಸ್.ಸ್ವಾಮಿ, ರಾಮೇಗೌಡ, ಕೃಷ್ಣ, ದೊಡ್ಡಯ್ಯ, ಸಾಲಿಗ್ರಾಮ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯಶಂಕರ್, ವಕ್ತಾರ ಸೈಯ್ಯದ್ ಜಾಬೀರ್, ನಗರ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ.ರಮೇಶ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್.ಮಹೇಶ್, ಜಿ.ಪಂ.ಮಾಜಿ ಸದಸ್ಯ ಶಿವರಾಂ, ಪುರಸಭೆ ಸದಸ್ಯ ನಟರಾಜು, ಎಪಿಎಂಸಿ ಮಾಜಿ ನಿರ್ದೇಶಕ ಎಲ್.ಪಿ.ರವಿಕುಮಾರ್ ಮತ್ತಿತರರು ಭಾಗವಹಿಸಿದ್ದರು.
ನಿವೃತ್ತ ಶಿಕ್ಷಕರ ಪೈಕಿ ಎಲ್ಲರೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಘಟಕಕ್ಕೆ ಸೇರ್ಪಡೆಗೊಳ್ಳುತ್ತಾರಾ? ಇಲ್ಲಿಯೂ ವಿವಿಧ ಪಕ್ಷಗಳನ್ನು ಬೆಂಬಲಿಸುವವರು ಇಲ್ಲದಿಲ್ಲ. ಆದರೆ ಎಲ್ಲ ಘಟಕಗಳನ್ನು ರಚಿಸುವಂತೆ ನಿವೃತ್ತ ಶಿಕ್ಷಕರ ಘಟಕಗಳನ್ನು ರಚಿಸಿ ಆ ಮೂಲಕ ಎಲ್ಲರನ್ನು ಒಂದೇ ವೇದಿಕೆಗೆ ತರುವ ಕೆಲಸ ಕಾಂಗ್ರೆಸ್ ಪಕ್ಷದಿಂದ ಆಗುತ್ತಿದೆ. ಇದು ಮುಂದಿನ ದಿನಗಳಲ್ಲಿ ಯಾವ ರೀತಿಯಲ್ಲಿ ಪಕ್ಷಕ್ಕೆ ಅನುಕೂಲವಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications