"ಕರ್ನಾಟಕ ಸರ್ಕಾರ ಅಭಿವೃದ್ಧಿ ಮಾಡ್ತಿಲ್ಲ" ಎಂದು ಮತ್ತೆ ಗುಡುಗಿದ ಕಾಂಗ್ರೆಸ್ ಪ್ರಭಾವಿ ಶಾಸಕ!
ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಾಂಗ್ರೆಸ್ ಶಾಸಕ ರಾಜು ಕಾಗೆ ಅವರು ಮತ್ತೆ ಗುಡುಗಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳಿಗೆ ವೇಗ ಸಿಗ್ತಿಲ್ಲ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ ಎನ್ನುವ ಅಸಮಾಧಾನವನ್ನು ರಾಜು ಕಾಗೆ ಅವರು ವ್ಯಕ್ತಪಡಿಸಿದ್ದಾರೆ. ಈ ಹೇಳಿಕೆಯ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಹಿಂದೆಯೂ ಕಾಂಗ್ರೆಸ್ ಶಾಸಕ ರಾಜು ಕಾಗೆ ಅವರು ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ರಾಜ್ಯ ಸರ್ಕಾರ ಹಾಗೂ ಸಚಿವರು ನಮ್ಮ ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಇದೇ ರೀತಿ ಮುಂದುವರಿದರೆ, ಸಮಸ್ಯೆ ಆಗಲಿದೆ ಎಂದಿದ್ದರು. ಇದೀಗ ಮತ್ತೊಮ್ಮೆ ರಾಜ್ಯ ಸರ್ಕಾರದ ವಿರುದ್ಧ ಸ್ವಪಕ್ಷ ನಾಯಕರೇ ಗುಡುಗಿರುವುದಕ್ಕೆ ಬಿಜೆಪಿ ಹಾಸ್ಯ ಮಾಡಿದೆ.
ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಸ್ವಪಕ್ಷ ನಾಯಕರು ಪದೇ ಪದೆ ತಿರುಗಿ ಬೀಳುವುದು ಮುಂದುವರಿದಿದೆ. ವಿಜಯನಗರ ಶಾಸಕ ಎಚ್.ಆರ್ ಗವಿಯಪ್ಪ ಅವರು ಸಹ ರಾಜ್ಯ ಸರ್ಕಾರದ ವಿರುದ್ಧ ತಿರುಗಿ ಬಿದಿದ್ದರು. ಅದರ ಬೆನ್ನಲ್ಲೇ ಕೋಲಾರ ಹಾಗೂ ಮಾಲೂರಿನಲ್ಲೂ ಕಾಂಗ್ರೆಸ್ನಲ್ಲಿ ವಿರೋಧ ವ್ಯಕ್ತವಾಗಿದ್ದವು. ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಮಧ್ಯಪ್ರವೇಶದ ನಂತರ ಶಾಸಕ ಗವಿಯಪ್ಪ ಅವರು ಯುಟರ್ನ್ ತೆಗೆದುಕೊಂಡಿದ್ದರು. ಆದರೆ, ರಾಜು ಕಾಗೆ ಅವರು ಕಾಂಗ್ರೆಸ್ನ ವಿರುದ್ಧವೇ ಮಾತನಾಡುವುದನ್ನು ಮುಂದುವರಿಸಿದ್ದಾರೆ. ಇದು ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಿಗೆ ಅಸ್ತ್ರವಾಗಿದೆ.

ಇದೀಗ ಸಮಾರಂಭವೊಂದರಲ್ಲಿ ಮಾತನಾಡಿರುವ ಕಾಂಗ್ರೆಸ್ ಶಾಸಕ ರಾಜು ಕಾಗೆ ಅವರು ರಾಜ್ಯದ ಅಭಿವೃದ್ಧಿ ವಿಚಾರವಾಗಿ ಮಾತನಾಡಿ ಪರೋಕ್ಷವಾಗಿ ಕಾಂಗ್ರೆಸ್ ಸರ್ಕಾರದ ಮೇಲೆಯೇ ಅಸಮಾಧಾನ ಹೊರ ಹಾಕಿದ್ದಾರೆ. ಬಹಿರಂಗ ಸಮಾರಂಭದಲ್ಲಿ ಅವರು ಮಾತನಾಡಿರುವ ಮಾತುಗಳು ಭಾರೀ ಚರ್ಚೆಗೆ ಕಾರಣವಾಗಿದೆ. ಇಲ್ಲಿನ ಬಸವೇಶ್ವರ ಏತ ನೀರಾವರಿ ಯೋಜನೆಯ ಬಗ್ಗೆ ಮಾತನಾಡಿರುವ ಅವರು, ಈ ಯೋಜನೆ ಪೂರ್ಣವಾಗಿಲ್ಲ ಎಂದಿದ್ದಾರೆ. ಮುಂದುವರಿದು ಬಸವೇಶ್ವರ ಏತ ನೀರಾವರಿ ಜಾರಿ ಮಾಡಬೇಕು ಅಂತ ಅಧಿವೇಶನದಲ್ಲಿ ನೂರಾರು ಸಲ ಹೋರಾಟ ಮಾಡಿದ್ದೀನಿ. ಆದರೆ, ಅದು ಸಹಕಾರ ಆಗಿಲ್ಲ. ನಮ್ಮ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಮುಂದೆ ಬಂದರೆ ಮಾತ್ರ ನಾವು ಬದುಕುವುದಕ್ಕೆ ಸಾಧ್ಯ. ನಾವು ಬದುಕಬೇಕು ಎಂದಾದರೆ, ಸರ್ಕಾರ ಮುಂದೆ ಬರಬೇಕು ಎಂದಿದ್ದಾರೆ. ಈ ಮಾತುಗಳು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.

ಟ್ವೀಟ್ ಮಾಡಿ ಕಾಂಗ್ರೆಸ್ಗೆ ಬಿಜೆಪಿ ತರಾಟೆ
ರಾಜು ಕಾಗೆ ಅವರು ಮಾತನಾಡಿರುವ ವಿಡಿಯೋವನ್ನು ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ಬಿಜೆಪಿ ಹಂಚಿಕೊಂಡಿದೆ. ಕಾಂಗ್ರೆಸ್ ಸರ್ಕಾರವನ್ನು ಈ ಮೂಲಕ ಬಿಜೆಪಿ ತರಾಟೆಗೆ ತೆಗೆದುಕೊಂಡಿದೆ. ರೈತ ವಿರೋಧಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧವೇ ಕಾಂಗ್ರೆಸ್ ಶಾಸಕ ರಾಜು ಕಾಗೆ ಅವರು ಸಿಡಿದೆದಿದ್ದಾರೆ. ನಮ್ಮ ಸಿದ್ದರಾಮಯ್ಯ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ. ಸುಮಾರು 27 ಸಾವಿರ ಹೆಕ್ಟೇರ್ ಜಮೀನಿನ ರೈತರು ಇಂದೋ ನಾಳೆ ನೀರು ಬರಬಹುದು ಎಂದು ಬಕಪಕ್ಷಿಯಂತೆ ಕಾಯುತ್ತಿದ್ದಾರೆ ಎಂದು ಸ್ವಪಕ್ಷದ ಸರ್ಕಾರವನ್ನೇ ಪ್ರಶ್ನಿಸಿದ್ದಾರೆ ಎಂದು ಬಿಜೆಪಿ ಹೇಳಿದೆ. ಮುಂದುವರಿದು ಕರ್ನಾಟಕವನ್ನು ಬರ್ಬಾದ್ ಮಾಡುತ್ತಾ ಅಭಿವೃದ್ಧಿ ಶೂನ್ಯದಲ್ಲಿ ಸಾಗುತ್ತಿರುವ ಕಾಂಗ್ರೆಸ್ ಸರ್ಕಾರ ಫ್ರಸ್ಟ್ರೇಷನ್ಗೆ ಒಳಗಾಗಿದೆ ಎಂದೂ ಬಿಜೆಪಿ ಹೇಳಿದೆ.












Click it and Unblock the Notifications