ಹೆಬ್ಬಾಳ ಫ್ಲೈ ಓವರ್ ಅಗಲೀಕರಣ ವಿಳಂಬದಿಂದ ಟ್ರಾಫಿಕ್ ಜಾಮ್: ಕಾಂಗ್ರೆಸ್ ಶಾಸಕರ ಪ್ರತಿಭಟನೆ
ಬೆಂಗಳೂರು, ನವೆಂಬರ್ 21: ಹೆಬ್ಬಾಳ ಫ್ಲೈ ಓವರ್ ಅಗಲೀಕರಣ ವಿಳಂಬದಿಂದ ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಕಾಂಗ್ರೆಸ್ ಶಾಸಕರು ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು.
ಫ್ಲೈಓವರ್ ಕಾಮಗಾರಿ ವಿಳಂಬದಿಂದಾಗಿ ಸಾವಿರಾರು ಜನರು ಸಂಚಾರ ದಟ್ಟಣೆಯಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಹಲವಾರು ಬಾರಿ ಬೇಡಿಕೆ ಸಲ್ಲಿಸಿದರೂ, ಭರವಸೆಗಳು ಸಿಕ್ಕರೂ ಆರಂಭವಾಗಿಲ್ಲ ಎಂದು ಪ್ರತಿಭಟನೆಯಲ್ಲಿ ಕಾಂಗ್ರೆಸ್ ಶಾಸಕರು ಆರೋಪ ಮಾಡಿದರು. ಶಾಸಕರಾದ ಕೃಷ್ಣ ಬೈರೇಗೌಡ ಬೈರತಿ ಸುರೇಶ್, ರಾಮಲಿಂಗಾ ರೆಡ್ಡಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಇನ್ನೂ ಪ್ರತಿಭಟನೆಯಲ್ಲಿ ಶಾಸಕ ರಾಮಲಿಂಗಾರೆಡ್ಡಿ ಮಾತನಾಡಿ, ಇದು ಸಾಂಕೇತಿಕ ಪ್ರತಿಭಟನೆಯಾಗಿದೆ. ಈ ಬಾರಿ ರಸ್ತೆ ಪಕ್ಕದಲ್ಲಿ ಕೂತಿದ್ದೇವೆ. ಕೆಲಸ ಶುರು ಮಾಡದೇ ಇದ್ರೆ ರಸ್ತೆಯಲ್ಲಿ ಕೂರುತ್ತೇವೆ. ಬಿಜೆಪಿ ಅಂದ್ರೆ ಭ್ರಷ್ಟ ಜನತಾ ಪಕ್ಷ ಎಂದು ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.

ಬಿಜೆಪಿ ಅಂದರೆ ಬುರುಡೆ ಜನತಾ ಪಕ್ಷ ಅಂತ ಹಿಂದೇನೆ ಹೇಳಿದ್ದೆ. ಇವ್ರು ಸುಳ್ಳು ಹೇಳೋದರಲ್ಲಿ ನಿಸ್ಸೀಮರು. ಸುಳ್ಳು ಹೇಳುವ ಸ್ಪರ್ಧೆ ಇಟ್ಟರೆ ಮೋದಿ ಮೊದಲ ಸ್ಥಾನಕ್ಕೆ ಬರ್ತಾರೆ. ಎರಡನೇ ಸ್ಥಾನ ಅಮಿತ್ ಶಾ. ಈಗ ಬೊಮ್ಮಾಯಿ ಕೂಡ ಸೇರಿಕೊಂಡಿದ್ದಾರೆ ಎಂದು ಕಿಡಿಕಾರಿದರು. ಇವರು ಅಭಿವೃದ್ಧಿ ಬಗ್ಗೆ ಏನೂ ಮಾಡಲ್ಲ. ರಸ್ತೆ ಗುಂಡಿಗೆ 20 ಜನ ಸತ್ತರೂ ಇವರಿಗೆ ಪರಿಜ್ಞಾನ ಇಲ್ಲ. ಜನ ಏನ್ ಅಂದುಕೊಳ್ತಾರೆ ಅನ್ನೋ ಚಿಂತೆ ಇಲ್ಲ. ಹೈಕೋರ್ಟ್ ರಸ್ತೆ ಗುಂಡಿ ಮುಚ್ಚೋಕೆ ಮಾನಿಟರ್ ಮಾಡ್ತಿದಾರೆ. ಹೈಕೋರ್ಟ್ ಅವರೇ ಬೇಜಾರಾಗಿದ್ದಾರೆ. ಇವರು ಭಂಡರು ಅಂತ ಹೈಕೋರ್ಟ್ ಕೂಡ ಮನಸ್ಸಿನಲ್ಲಿ ತೀರ್ಮಾನ ಮಾಡಿದ್ದಾರೆ ಎಂದರು.
ಶಾಸಕ ಕೃಷ್ಣ ಬೈರೇಗೌಡ ಅವರು ಮಾತನಾಡಿ, ಬೆಂಗಳೂರಿನ ಯಾವುದೇ ಫ್ಲೈ ಓವರ್ ಗೆ ಹೋದ್ರು ಟ್ರಾಫಿಕ್ ಸಮಸ್ಯೆ ಇದೆ. ಬೆಂಗಳೂರು ಅಂದ್ರೆ ಟ್ರಾಫಿಕ್ ಸಮಸ್ಯೆ ಅನ್ನುವಂತಾಗಿದೆ. ಹೀಗಾಗಿ ಬೆಂಗಳೂರು ಬರುವವರು ಬೇರೆ ಬೇರೆ ಸಿಟಿಗಳಿಗೆ ಹೋಗ್ತಿದ್ದಾರೆ. ಇದು ಒಂದು ಕಡೆಯಾದರೆ ರಸ್ತೆ ಗುಂಡಿ, ನೆರೆ ಸಮಸ್ಯೆಯಿಂದ ಹೈರಾಣಾಗಿದ್ದಾರೆ. ಈ ಸಮಸ್ಯೆಗಳನ್ನು ಪರಿಹರಿಸಬೇಕಾದ ಬಿಜೆಪಿ, ಬೆಂಗಳೂರು ಚಿನ್ನದ ಮೊಟ್ಟೆ ಇಡುವ ಕೋಳಿ ಅಂದುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಈ ಕೋಳಿಗೆ ಏನಾದ್ರೂ ಆಹಾರ ಹಾಕಬೇಕಲ್ಲ ಸ್ವಾಮಿ. ಆದರೆ ಈ ಬಿಜೆಪಿ ಸರ್ಕಾರದ ಚಿನ್ನದ ಮೊಟ್ಟೆ ಇಡುವ ಕೋಳಿಯ ಕಾಲು ಕತ್ತರಿಸಿದ್ದಾರೆ, ರೆಕ್ಕೆ ಕತ್ತರಿಸಿದ್ದಾರೆ. ಈಗ ಕುತ್ತಿಗೆಯನ್ನೇ ಕತ್ತರಿಸಲು ಹೋಗ್ತಿದ್ದಾರೆ. ಅದರ ಹೊಟ್ಟೆ ಬಗೆದು ಕರುಳು ತೆಗೆಯಲು ಬಿಜೆಪಿ ಮುಂದಾಗಿದೆ. ಹೆಬ್ಬಾಳ ಟ್ರಾಫಿಕ್ ಸಮಸ್ಯೆ ನೋಡ್ಕೊಂಡು ಓಡಾಡುವಂತ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಆರ್ ಪುರ, ಗೊರಗುಂಟೇ ಪಾಳ್ಯ, ಹೆಬ್ಬಾಳ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಟ್ರಾಫಿಕ್ ಸಮಸ್ಯೆಯಿಂದ ಜನರು ಹೈರಾಣಾಗಿದ್ದಾರೆ. ಇದರಿಂದಾಗಿ ನಮ್ಮ ನಗರಕ್ಕೆ ಬರಬೇಕಿದ್ದ ಹಲವಾರು ಐಟಿ ಕಂಪನಿಗಳು ಬೇರೆ ರಾಜ್ಯಗಳಿಗೆ ಶಿಫ್ಟ್ ಆಗುತ್ತಿದೆ. ನಮ್ಮ ಸರ್ಕಾರ ಕುಂಬಕರ್ಣನ ನಿದ್ದೆಯಲ್ಲಿದೆ. ಹಳೆ ಕಲ್ಲು ಹೊಸ ಬಿಲ್ಲು ಎಂಬ ರೀತಿ ಕೆಲಸ ಮಾಡ್ತಿದೆ. ಬಿಜೆಪಿ ಸಚಿವರೇ ಇನ್ಸ್ಪೆಕ್ಟರ್ ಪೋಸ್ಟಿಂಗ್ಗೆ ದುಡ್ಡು ನೀಡಬೇಕು ಎಂದು ಕೇಳಿದ್ದಾರೆ. ಟ್ರಾಫಿಕ್ ಜಾಮ್ ತಪ್ಪಿಸಿಕೊಳ್ಳಬೇಕಾ? ಜಲ ಪ್ರಳಯದಿಂದ ತಪ್ಪಿಸಿಕೊಳ್ಳಬೇಕಾ? ಗುಂಡಿಗಳನ್ನು ತಪ್ಪಿಸಿಕೊಳ್ಳಬೇಕಾ? ಎಂದು ಪ್ರಶ್ನಿಸಿದರು.











Click it and Unblock the Notifications