ತಲೆಗೆ ಟೋಪಿ ಧರಿಸಿ, ಕಸಗೂಡಿಸುವ ಮೂಲಕ 'ಪ್ರಜಾಧ್ವನಿ' ಯಾತ್ರೆ ಆರಂಭಿಸಿದ ಕಾಂಗ್ರೆಸ್ ನಾಯಕರು
ಬೆಳಗಾವಿ, ಜನವರಿ 11: ಕರ್ನಾಟಕ ಚುನಾವಣೆಗೆ ರಾಜಕೀಯ ಪಕ್ಷಗಳು ಈಗಾಗಲೇ ಸಿದ್ದತೆ ನಡೆಸಿವೆ. ಯಾತ್ರೆ, ರ್ಯಾಲಿ ಹಾಗೂ ಸಾರ್ವಜನಿಕ ಸಭೆಗಳನ್ನು ಹಮ್ಮಿಕೊಳ್ಳುತ್ತಿವೆ. ಈ ಮೂಲಕ ಜನರನ್ನು ತಮ್ಮತ್ತ ಸೆಳೆಯಲು ಯತ್ನ ನಡೆಸಿವೆ. ಬಿಜೆಪಿ ಜನಸಂಕಲ್ಪ ಯಾತ್ರೆಗೆ ಮೊರೆ ಹೋದರೆ, ಜೆಡಿಎಸ್ ಪಂಚರತ್ನ ಯಾತ್ರೆ ನಡೆಸುತ್ತಿದೆ. ಕಾಂಗ್ರೆಸ್ ಪ್ರಜಾದ್ವನಿ ಯಾತ್ರೆಯನ್ನು ಇಂದಿನಿಂದ ಆರಂಭಿಸಿದೆ.
ಬೆಳಗಾವಿಯಿಂದ ಶುರುವಾಯ್ತು ಪ್ರಜಾಧ್ವನಿ ಯಾತ್ರೆ
ಕಾಂಗ್ರೆಸ್ನ ರಾಜ್ಯ ಘಟಕವು ಪ್ರಜಾಧ್ವನಿ ಯಾತ್ರೆಯನ್ನು ಬೆಳಗಾವಿಯಿಂದ ಇಂದು (ಬುಧವಾರ) ಆರಂಭಿಸಿದೆ. ಯಾತ್ರೆಯಲ್ಲಿ ಕಾಂಗ್ರೆಸ್ನ ಬಹುತೇಕ ನಾಯಕರು ಭಾಗವಹಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, 'ನವ ಕರ್ನಾಟಕ ನಿರ್ಮಾಣದ ಸಂಕಲ್ಪದೊಂದಿಗೆ ಹಮ್ಮಿಕೊಂಡಿರುವ 'ಪ್ರಜಾ ಧ್ವನಿ' ಬಸ್ ಯಾತ್ರೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್ ಸಿಂಗ್ ಸುರ್ಜೇವಾಲಾ, ವಿಧಾನಸಭೆ ವಿಪಕ್ಷ ನಾಯಕರಾದ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಅವರು ಬೆಳಗಾವಿಯ ವೀರಸೌಧದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿಯವರಿಗೆ ನಮನ ಸಲ್ಲಿಸುವ ಮೂಲಕ ಚಾಲನೆ ನೀಡಿದರು' ಎಂದು ತಿಳಿಸಿದೆ.
'ವಿಧಾನ ಪರಿಷತ್ ವಿಪಕ್ಷ ನಾಯಕರಾದ ಬಿ.ಕೆ.ಹರಿಪ್ರಸಾದ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾದ ಎಂ.ಬಿ.ಪಾಟೀಲ, ಕಾರ್ಯಾಧ್ಯಕ್ಷರಾದ ಸತೀಶ ಜಾರಕಿಹೊಳಿ, ಸಲೀಂ ಅಹ್ಮದ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು' ಎಂದು ಕೆಪಿಸಿಸಿ ತಿಳಿಸಿದೆ. ಟ್ವೀಟ್ನೊಂದಿಗೆ ಹಲವು ಫೋಟೊಗಳನ್ನೂ ಹಂಚಿಕೊಂಡಿದೆ.
ಡಿಕೆಶಿ-ಸಿದ್ದರಾಮಯ್ಯ ಜಂಟಿ ಯಾತ್ರೆ
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಜಂಟಿಯಾಗಿ ಈ ಯಾತ್ರೆಯನ್ನು ಕೈಗೊಂಡಿದ್ದಾರೆ. ಈ ಬಸ್ ಯಾತ್ರೆಯಲ್ಲಿ ಕಾಂಗ್ರೆಸ್ನ ಉಳಿದ ನಾಯಕರು ಭಾಗಿಯಾಗಲಿದ್ದಾರೆ. ಆಡಳಿತ ವಿರೋಧಿ ಅಲೆಯನ್ನು ಬಳಸಿಕೊಂಡು ಈಗಿನ ಬಿಜೆಪಿ ಸರ್ಕಾರದ ಬಗ್ಗೆ ತಿಳುವಳಿಗೆ ಮೂಡಿಸುವುದಾಗಿ ಕೈ ನಾಯಕರು ಹೇಳಿಕೊಂಡಿದ್ದಾರೆ. ಈ ಮೊದಲು ಡಿಕೆಶಿ ಹಾಗೂ ಸಿದ್ದರಾಮಯ್ಯ ಜಂಟಿಯಾಗಿ ಯಾತ್ರೆಯನ್ನು ಕೈಗೊಳ್ಳುವುದಿಲ್ಲವೆಂದು ಹೇಳಲಾಗಿತ್ತು. ಆದರೆ, ರಾಷ್ಟ್ರ ನಾಯಕರ ಆದೇಶದ ಮೇರೆಗೆ ಈ ಇಬ್ಬರೂ ನಾಯಕರು ಜಂಟಿಯಾಗಿ ಯಾತ್ರೆಯನ್ನು ಮುನ್ನೆಡೆಸುತ್ತಿದ್ದಾರೆ. ಆ ಮೂಲಕ ನಾವಿಬ್ಬರೂ ಒಂದು ಎನ್ನುವ ಸಂದೇಶವನ್ನು ರಾಜ್ಯಕ್ಕೆ ರವಾನಿಸಲು ಹೊರಟಿದ್ದಾರೆ.
ಹೊರಗಿನವರೂ ಪಕ್ಷಕ್ಕೆ ಬರಬಹುದು ಎಂದ ಡಿಕೆಶಿ
ಕಾಂಗ್ರೆಸ್ನಿಂದ ದೂರವಾಗಿ ಬೇರೆ ಪಕ್ಷಗಳಿಗೆ ಹೋಗಿರುವ ನಾಯಕರು ಪಕ್ಷಕ್ಕೆ ಮತ್ತೆ ಮರಳಿ ಬರಬಹುದು. ಅವರಿಗೆ ಉತ್ತಮ ಸ್ಥಾನಮಾನ ನೀಡಲಾಗುವುದು ಎಂದು ಡಿಕೆಶಿ ತಿಳಿಸಿದ್ದಾರೆ. ಈ ವಿಚಾರವಾಗಿ ಮಾತನಾಡಿರುವ ಅವರು, 'ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬರುತ್ತದೆ. ಬಿಜೆಪಿ ಸೋಲುತ್ತದೆ. ಆ ಕಾರಣ ನೀವು ಗೆಲ್ಲುವ ಪಕ್ಷದೊಂದಿಗೆ ಇರಿ. ನಿಮಗೆ ಉತ್ತಮ ಸ್ಥಾನಮಾನವನ್ನು ನಾವು ನೀಡುತ್ತೇವೆ. ಮುನಿಸಿಕೊಂಡು ನಮ್ಮಿಂದ ದೂರ ಹೋದವರು ಪಕ್ಷಕ್ಕೆ ಮತ್ತೆ ಮರಳಬಹುದು' ಎಂದು ಹೇಳಿದ್ದರು.
ಜನವರಿಯೊಳಗೆ ಅಭ್ಯರ್ಥಿಗಳ ಪಟ್ಟಿ ಸಿದ್ದ
ಕರ್ನಾಟಕ ವಿಧಾನಸಭೆ ಚುನಾವಣೆಗೆ ಜನವರಿಯೊಳಗೆ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ದಪಡಿಸಲಾಗುವುದು ಎಂದು ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಈಗಾಗಾಲೇ ಪ್ರತಿ ಕ್ಷೇತ್ರದಲ್ಲಿ ಹಲವರು ಅರ್ಜಿ ಹಾಕಿದ್ದಾರೆ. ಗೆಲ್ಲುವ ಪ್ರತಿನಿಧಿಗಳಿಗೆ ನಾವು ಟಿಕೆಟ್ ನೀಡಲಿದ್ದೇವೆ ಎಂಬ ಮಾತನ್ನು ಡಿಕೆಶಿ ಹೇಳಿದ್ದಾರೆ. ಸಂಕ್ರಾಂತಿ ಮುಗಿದ ನಂತರ ರಾಜ್ಯ ರಾಜಕಾರಣದಲ್ಲಿ ಹಲವು ಬದಲಾವಣೆಗಳಾಗಲಿವೆ. ಪಕ್ಷಕ್ಕೆ ಹಲವು ಮುಖಂಡರು ಸೇರ್ಪಡೆಗಳ್ಳಲಿದ್ದಾರೆ. ನನ್ನೊಂದಿಗೆ ಅವರು ಮಾತನಾಡಿದ್ದಾರೆ ಎಂದು ತಿಳಿಸಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಸೆಣಸಾಟ ನಡೆಸಲಿವೆ. ಮೈಸೂರು ಭಾಗದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ನೇರ ಸ್ಪರ್ಧೆ ಇದೆ. ಮಧ್ಯ ಕರ್ನಾಟಕ, ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಹಾಗೂ ಕರಾವಳಿ ಕರ್ನಾಟಕದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇದೆ.