ಕರ್ನಾಟಕ ಕಾಂಗ್ರೆಸ್ ನಾಯಕರ ವಿರುದ್ಧ ಭಾರದ್ವಾಜ್ ಬಾಂಬ್
ನವದೆಹಲಿ, ಮಾ. 30 : 'ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ಬಿ.ಎಸ್.ಯಡಿಯೂರಪ್ಪ ಮತ್ತು ಜನಾರ್ದನ ರೆಡ್ಡಿ ಅವರ ವಿರುದ್ಧ ಕ್ರಮ ಕೈಗೊಳ್ಳದಂತೆ ಕರ್ನಾಟಕದ ಕೆಲವು ಕಾಂಗ್ರೆಸ್ ನಾಯಕರು ಲಾಬಿ ಮಾಡಿದ್ದರು' ಎಂದು ಮಾಜಿ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಹೊಸ ಬಾಂಬ್ ಸಿಡಿಸಿದ್ದಾರೆ.
ಕರ್ನಾಟಕದ ಮಾಜಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಆಂಗ್ಲ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿದ್ದು, ಅದರಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಕರ್ನಾಟಕದಲ್ಲಿ ಈಗ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದಕ್ಕೆ ಅಲ್ಲಿನ ನಾಯಕರ ಶ್ರಮಪಟ್ಟಿಲ್ಲ ಎಂದು ಅವರು ಆರೋಪಿಸಿದ್ದಾರೆ. [ಸೋನಿಯಾ ನಂತರ ಚಿದು ಮೇಲೆ ಭಾರದ್ವಾಜ್ ಪ್ರಹಾರ]

ಕಾಂಗ್ರೆಸ್ ನಾಯಕರು ಲಾಬಿ ಮಾಡಿದ್ದರು : 'ಕರ್ನಾಟಕದಲ್ಲಿ ರಾಜ್ಯಪಾಲರಾಗಿದ್ದ ಅವಧಿಯಲ್ಲಿ ಗಣಿ ಅಕ್ರಮಕ್ಕೆ ಸಂಬಂಧ ಪಟ್ಟಂತೆ ಪ್ರಾಸಿಕ್ಯೂಷನ್ಗೆ ಅನುಮತಿ ಕೊಟ್ಟಿದ್ದೆ. ಆ ಸಮಯದಲ್ಲಿ ಕಾಂಗ್ರೆಸ್ ಪ್ರಮುಖ ನಾಯಕರು ಬಿಜೆಪಿ ಜೊತೆ ಆತ್ಮೀಯ ಸಂಬಂಧ ಹೊಂದಿದ್ದರು' ಎಂದು ಎಚ್.ಆರ್.ಭಾರದ್ವಾಜ್ ಹೇಳಿದ್ದಾರೆ. [ಮಾಜಿ ರಾಜ್ಯಪಾಲ ಭಾರದ್ವಾಜ್ ಮತ್ತು ವಿವಾದಗಳ ಹಿನ್ನೋಟ]
'ಬಳ್ಳಾರಿಯ ರೆಡ್ಡಿ ಸಹೋದರರು ಮತ್ತು ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ಕೊಡಬೇಡಿ ಎಂದು ಒತ್ತಡ ಹೇರಿದ್ದರು. ಆದರೆ, ರಾಜ್ಯಪಾಲನಾಗಿ ನನ್ನ ಕರ್ತವ್ಯ ನಿರ್ವಹಿಸಿದ್ದೇನೆ ಎಂದು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿರುವ ಅವರು 2011ರಲ್ಲಿ ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದೆ' ಎಂದು ಹೇಳಿದ್ದಾರೆ.
ನಾಯಕರು ಶ್ರಮ ಪಟ್ಟಿಲ್ಲ : 'ಕರ್ನಾಟಕದಲ್ಲಿ ಈಗ ಸುಭದ್ರವಾದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿರಬಹುದು. ಆದರೆ, ಅದಕ್ಕಾಗಿ ಅಲ್ಲಿನ ನಾಯಕರು ಶ್ರಮ ಪಟ್ಟಿಲ್ಲ. ರಾಜ್ಯಪಾಲನಾಗಿ ನಾನು ತೆಗೆದುಕೊಂಡ ಕಠಿಣ ಕ್ರಮದಿಂದಾಗಿ ಅಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದಿದೆ' ಎಂದು ತಿಳಿಸಿದ್ದಾರೆ. 'ಯಾವುದೇ ಒತ್ತಾಯ ಮತ್ತು ಲಾಬಿಗೆ ಮಣಿಯದೇ ನಾನು ರಾಜ್ಯಪಾಲರ ಕರ್ತವ್ಯವನ್ನು ಸಮರ್ಥವಾಗಿ ಮಾಡಿದ್ದೇನೆ ಎಂದು ಎಚ್.ಆರ್.ಭಾರದ್ವಾಜ್ ಸ್ಪಷ್ಟನೆ ನೀಡಿದ್ದಾರೆ.
2009ರಿಂದ ಕರ್ನಾಟಕ ರಾಜ್ಯಪಾಲರಾಗಿದ್ದ ಎಚ್.ಆರ್.ಭಾರದ್ವಾಜ್ ಅವರು 2014ರಲ್ಲಿ ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ್ದರು. ಸದ್ಯ, ಗುಜರಾತ್ ಮೂಲದ ವಜುಭಾಯಿ ವಾಲಾ ಕರ್ನಾಟಕದ ರಾಜ್ಯಪಾಲರಾಗಿದ್ದಾರೆ.












Click it and Unblock the Notifications