ಬಜೆಟ್ಗೆ ಮುನ್ನಾ ಜೆಡಿಎಸ್-ಕಾಂಗ್ರೆಸ್ ಜಂಟಿ ಶಾಸಕಾಂಗ ಸಭೆ
ಬೆಂಗಳೂರು, ಫೆಬ್ರವರಿ 04: ಬಜೆಟ್ ಅಧಿವೇಶನಕ್ಕೆ ಮುಂಚೆ ಕಾಂಗ್ರೆಸ್ ಮತ್ತು ಜೆಡಿಎಸ್ ಜಂಟಿ ಶಾಸಕಾಂಗ ಸಭೆ ನಡೆಸುತ್ತಿದ್ದು, ಫೆಬ್ರವರಿ 6 ಅಥವಾ 7 ರಂದು ಸಭೆ ನಡೆಸಲಾಗುತ್ತಿದೆ.
ಬಜೆಟ್ ಅಧಿವೇಶನದ ಬಗ್ಗೆ ಚರ್ಚೆ ಮತ್ತು ಬಜೆಟ್ಗೆ ಅನುಮೋದನೆ ನೀಡುವ ಬಗ್ಗೆ ಹಾಗೂ ಬಿಜೆಪಿ ಏನಾದರೂ ಅವಿಶ್ವಾಸ ನಿರ್ಣಯ ಮಂಡಿಸಿದರೆ ತಮ್ಮ ಪರವಾಗಿ ನಿಲ್ಲುವಂತೆ ಎರಡೂ ಪಕ್ಷದ ಶಾಸಕರಿಗೆ ಎಚ್ಚರಿಕೆ ನೀಡುವ ಸಲುವಾಗಿ ಜಂಟಿ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ.
ಸಮ್ಮಿಶ್ರ ಸರ್ಕಾರ ಆದ ಬಳಿಕ ಮೊದಲ ಬಾರಿಗೆ ಕಾಂಗ್ರೆಸ್-ಜೆಡಿಎಸ್ ಜಂಟಿಯಾಗಿ ಶಾಸಕಾಂಗ ಸಭೆ ಕರೆದಿದ್ದು, ಎರಡೂ ಪಕ್ಷಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಚರ್ಚೆ ಮೂಲಕ ಇತ್ಯರ್ಥ ಮಾಡಿಕೊಳ್ಳುವ ಮೂಲ ಉದ್ದೇಶಿದಂದ ಈ ಜಂಟಿ ಸಭೆ ಕರೆಯಲಾಗಿದೆ ಎನ್ನಲಾಗಿದೆ.

ಈ ಜಂಟಿ ಶಾಸಕಾಂಗ ಸಭೆಗೆ ಕಡ್ಡಾಯವಾಗಿ ಹಾಜರಾಗಬೇಕು ಎಂದು ಕಾಂಗ್ರೆಸ್ ತನ್ನೆಲ್ಲಾ ಶಾಸಕರಿಗೆ ನೊಟೀಸ್ ನೀಡಿದೆ. ಅತೃಪ್ತ ಶಾಸಕರಿಗೂ ನೊಟೀಸ್ ನೀಡಲಾಗಿದೆ. ಅವರು ಸಭೆಗೆ ಬರದಿದ್ದಲ್ಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಲಾಗಿದೆ.
ಬಿಜೆಪಿಯು ಬಜೆಟ್ಗೆ ವಿರುದ್ಧ ಮತಹಾಕುವ ಜೊತೆಗೆ ಕಾಂಗ್ರೆಸ್-ಜೆಡಿಎಸ್ ಕೆಲವು ಶಾಸಕರಿಂದಲೂ ಬಜೆಟ್ ವಿರುದ್ಧವಾಗಿ ಮತಚಲಾಯಿಸುವಂತೆ ಮಾಡಿ ಅವಿಶ್ವಾಸ ನಿರ್ಣಯ ಮಂಡಿಸಲು ಚಿಂತನೆ ನಡೆಸಿದೆ ಎನ್ನಲಾಗಿದೆ. ಹಾಗಾಗಿ ಬಜೆಟ್ಗೆ ಅನುಮೋದನೆ ನೀಡುವ ಬಗ್ಗೆ ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ವಿಫ್ ಹೊರಡಿಸುವ ಸಾಧ್ಯತೆ ಇದೆ.
ಕುಮಾರಸ್ವಾಮಿ, ಸಿದ್ದರಾಮಯ್ಯ, ದೇವೇಗೌಡ, ಕೆ.ಸಿ.ವೇಣುಗೋಪಾಲ್ ಅವರು ಶಾಸಕಾಂಗ ಸಭೆಯಲ್ಲಿ ಒಟ್ಟಿಗೆ ಭಾಗಿಯಾಗಲಿದ್ದು, ಎರಡೂ ಕಡೆಯ ಶಾಸಕರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಸೂಚಿಸುವ ಕಾರ್ಯ ಅಂದು ಆಗಲಿದೆ.
ಜಂಟಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಬಿಸಿ-ಬಿಸಿ ಚರ್ಚೆಗಳು ನಡೆಯುವ ಊಹೆ ಇದ್ದು, ಜಂಟಿ ಸಭೆಯು ಭಿನ್ನಾಭಿಪ್ರಾಯಗಳನ್ನು ಬಗೆಹರಿಸುತ್ತದೆಯೋ ಅಥವಾ ಇನ್ನಷ್ಟು ಸಮಸ್ಯೆಗಳನ್ನು ತಂದೊಡ್ಡುತ್ತದೆಯೋ ಕಾದು ನೋಡಬೇಕಿದೆ.












Click it and Unblock the Notifications