ಮಂಡ್ಯ ರಾಜಕೀಯ : ದೇವೇಗೌಡರ ಟಾರ್ಗೆಟ್ ಕ್ಷೇತ್ರ ಶ್ರೀರಂಗಪಟ್ಟಣ!
Recommended Video

ಮಂಡ್ಯ, ಜನವರಿ 24 : ಕರ್ನಾಟಕದ ಅತ್ಯಂತ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ. ಇಡೀ ಪಟ್ಟಣವು ಕಾವೇರಿ ನದಿಯಿಂದಾಗಿರುವ ದ್ವೀಪದ ಪುಟ್ಟ ನಗರ. ಧಾರ್ಮಿಕ, ಸಾಂಸ್ಕೃತಿಕ ವಿಚಾರಗಳಿಂದಾಗಿ ಪ್ರವಾಸಿಗರು ಅತಿ ಹೆಚ್ಚು ಭೇಟಿ ನೀಡುವ ಕ್ಷೇತ್ರ.
ಶ್ರೀರಂಗಪಟ್ಟಣ ನೈಸರ್ಗಿಕವಾಗಿ ರಾಜ್ಯದ ಅತ್ಯಂತ ಸಂಪದ್ಭರಿತ ತಾಲೂಕುಗಳಲ್ಲಿ ಒಂದಾಗಿದೆ. ರಂಗನಾಥಸ್ವಾಮಿ ದೇವಾಲಯ, ರಂಗನತಿಟ್ಟು ಪಕ್ಷಿಧಾಮ, ನಿಮಿಷಾಂಬಾ ದೇವಾಲಯ, ಬಲಮುರಿ, ಎಡಮುರಿ, ದಾರಿಯಾದೌಲತ್ ಅರಮನೆ ಮುಂತಾದವುಗಳು ಕ್ಷೇತ್ರದ ಪ್ರಮುಖ ಪ್ರವಾಸಿ ಸ್ಥಳಗಳು.
ಶ್ರೀರಂಗಪಟ್ಟಣ ಮಂಡ್ಯ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದು. ಕ್ಷೇತ್ರ ಜೆಡಿಎಸ್ನ ಭದ್ರಕೋಟೆ. 1957ರಿಂದ 2013ರ ವರೆಗೂ ನಡೆದಿರುವ 14 ವಿಧಾನಸಭಾ ಚುನಾವಣೆಯಲ್ಲಿ 3 ಬಾರಿ ಕಾಂಗ್ರೆಸ್, 2 ಬಾರಿ ಪಕ್ಷೇತರರು, ಇನ್ನುಳಿದ 9 ಬಾರಿ ಜೆಡಿಎಸ್/ ಜನತಾದಳ / ಜನತಾಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
2018ರ ಚುನಾವಣೆಯಲ್ಲಿಯೂ ರಾಜ್ಯದ ಅತ್ಯಂತ ಕುತೂಹಲ ಕೆರಳಿಸಿರುವ ಕ್ಷೇತ್ರ. 2013ರ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಜೆಡಿಎಸ್ನ ರಮೇಶ್ ಬಾಬು ಬಂಡಿಸಿದ್ದೇಗೌಡ ಗೆಲುವು ಸಾಧಿಸಿದ್ದರು. ಆದರೆ, ಪ್ರಸ್ತುತ ಅವರು ಪಕ್ಷದಿಂದ ಅಮಾನತುಗೊಂಡಿದ್ದಾರೆ. ಆದ್ದರಿಂದ, ಕ್ಷೇತ್ರವನ್ನು ಉಳಿಸಿಕೊಳ್ಳಲು ಜೆಡಿಎಸ್ ತಂತ್ರ ರೂಪಿಸಬೇಕಿದೆ...

ಅಮಾನತ್ತಾಗಿರುವ ಹಾಲಿ ಶಾಸಕ
ರಮೇಶ್ ಬಾಬು ಬಂಡಿಸಿದ್ದೇಗೌಡ ಜೆಡಿಎಸ್ನಿಂದ ಗೆದ್ದಿದ್ದರು. 2016ರಲ್ಲಿ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಚೆಲುವರಾಯಸ್ವಾಮಿ ಹಾಗು ಜಮೀರ್ ಅಹಮದ್ ಖಾನ್ ಜೊತೆಗೆ ಅಡ್ಡಮತದಾನ ಮಾಡಿ ಪಕ್ಷದಿಂದ ಅಮಾನತ್ತುಗೊಂಡಿದ್ದಾರೆ. ಈಗ ಅವರು ಕಾಂಗ್ರೆಸ್ ಪಕ್ಷದ ಕದ ತಟ್ಟುತ್ತಿದ್ದಾರೆ . ಮುಂದಿನ ಚುನಾವಣೆಗೆ ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿದೆ.

ಎರಡು ಕುಟುಂಬಗಳ ಪ್ರತಿಷ್ಠೆ
ಶ್ರೀರಂಗಪಟ್ಟಣ ಕ್ಷೇತ್ರ ಸುಮಾರು 45 ವರ್ಷಗಳಿಂದ ಎರಡು ಕುಟುಂಬಗಳ ನಡುವಿನ ಜಿದ್ದಾಜಿದ್ದಿನ ಕಣವಾಗಿದೆ. ಎ.ಎಸ್.ಬಂಡಿಸಿದ್ದೇಗೌಡ ಮತ್ತು ಅವರ ಕುಟುಂಬ ಜೆಡಿಎಸ್ / ಜನತಾದಳ / ಜನತಾಪಕ್ಷ ಗಳನ್ನೂ ಪ್ರತಿನಿಧಿಸಿದರೆ, ಎ.ಸಿ.ಶ್ರೀಕಂಠಯ್ಯ ಮತ್ತು ಅವರ ಕುಟುಂಬ ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸುತ್ತದೆ.

ಚುನಾವಣೆಯಲ್ಲಿ ಸೋಲು-ಗೆಲುವು
ಬಂಡಿಸಿದ್ದೇಗೌಡರ ವಿರುದ್ಧ ಶ್ರೀಕಂಠಯ್ಯ ಸ್ಪರ್ಧಿಸುತ್ತಿದ್ದರೆ, ಇವರುಗಳ ಕಾಲಾನಂತರ ವಿಜಯಲಕ್ಷ್ಮಿ ಬಂಡಿಸಿದ್ದೇಗೌಡರ ವಿರುದ್ಧ ಪಾರ್ವತಮ್ಮ ಶ್ರೀಕಂಠಯ್ಯ ಸ್ಪರ್ಧಿಸಿದ್ದರು. 2008ರ ನಂತರ ರಮೇಶ್ ಬಾಬು ಬಂಡಿಸಿದ್ದೇಗೌಡ ವಿರುದ್ಧ ರವೀಂದ್ರ ಶ್ರೀಕಂಠಯ್ಯ ಸ್ಪರ್ಧಿಸುತ್ತಿದ್ದಾರೆ. ಬಂಡಿಸಿದ್ದೇಗೌಡ ಕುಟುಂಬ 6 ಬಾರಿ ಗೆಲುವಿನ ಸಿಹಿ ಕಂಡಿದ್ದರೆ, ಶ್ರೀಕಂಠಯ್ಯ ಕುಟುಂಬ ಪ್ರಬಲ ಸ್ಪರ್ಧೆ ಒಡ್ಡಿ, 1 ಬಾರಿ ಗೆಲುವು ಕಂಡಿದೆ.

ಬದಲಾದ ರಾಜಕೀಯ ಚಿತ್ರಣ
ಇಷ್ಟು ವರ್ಷಗಳಕಾಲ ಜೆಡಿಎಸ್ /ಜನತಾದಳ ನಿಂದ ಸ್ಪರ್ಧಿಸುತ್ತಿದ್ದ ರಮೇಶ್ ಬಾಬು ಬಂಡಿಸಿದ್ದೇಗೌಡ ಜೆಡಿಎಸ್ ತೊರೆದು ಕಾಂಗ್ರೆಸ್ ನಿಂದ ಈ ಬಾರಿ ಸ್ಪರ್ಧಿಸುತ್ತಿದ್ದಾರೆ. ಹಾಗೆಯೇ, ಇಷ್ಟು ವರ್ಷ ಕಾಂಗ್ರೆಸ್ನಿಂದ ಸ್ಪರ್ಧಿಸುತ್ತಿದ್ದ ರವೀಂದ್ರ ಶ್ರೀಕಂಠಯ್ಯ ಈ ಬಾರಿ ಜೆಡಿಎಸ್ ಅಭ್ಯರ್ಥಿ.

ಎಸ್.ಎಂ.ಕೃಷ್ಣ ಬೆಂಬಲಿಗ
ರವೀಂದ್ರ ಶ್ರೀಕಂಠಯ್ಯ ಅವರು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಬೆಂಬಲಿಗರು. ಕೃಷ್ಣ ಕಾಂಗ್ರೆಸ್ ತೊರೆದು ಬಿಜಿಪಿ ಸೇರಿದಾಗ, ತಾವೂ ಕಾಂಗ್ರೆಸ್ ತೊರೆದರು. ಕೃಷ್ಣರ ಅನುಮತಿಯಂತೆ ಕೆಲ ಕಾಲ ತಟಸ್ಥರಾಗಿದ್ದರು. ಇತ್ತೀಚಿಗೆ ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ.

ಸೋಲಿಗೆ ಅಂಬರೀಶ್ ಕಾರಣ
2013ರ ಚುನಾವಣೆಯಲ್ಲಿ ರವೀಂದ್ರ ಶ್ರೀಕಂಠಯ್ಯ ಸೋಲಿಗೆ ಮಾಜಿ ಸಚಿವ ಅಂಬರೀಶ್ ಕಾರಣ. ಚುನಾವಣೆಯಲ್ಲಿ ಅಂಬರೀಶ್, ರವೀಂದ್ರ ಶ್ರೀಕಂಠಯ್ಯಗೆ ಕಾಂಗ್ರೆಸ್ ಟಿಕೆಟ್ ತಪ್ಪಿಸಿ, ತಮ್ಮ ಆಪ್ತ ಸಚ್ಚಿದಾನಂದನ ಮಾವ ಲಿಂಗರಾಜುವಿಗೆ ಬಿ ಫಾರ್ಮ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು. ಲಿಂಗರಾಜು ಕಾಂಗ್ರೆಸ್ ನಿಂದ ಸ್ಪರ್ಧಿಸಿದರೂ ಹೀನಾಯವಾಗಿ ಸೋಲು ಕಂಡರು. ರವೀಂದ್ರ ಪಕ್ಷೇತರರಾಗಿ ಸ್ಪರ್ಧಿಸಿ ಕೇವಲ 13624 ಮತಗಳ ಅಂತರದಿಂದ ರಮೇಶ್ ಬಂಡಿಸಿದ್ದೇಗೌಡ ವಿರುದ್ಧ ಸೋತರು. 2008ರಲ್ಲಿ ಅಂಬರೀಶ್ ಸಹ ಕಾಂಗ್ರೆಸ್ ನಿಂದ ಸ್ಪರ್ಧಿಸಿ ರಮೇಶ್ ಬಂಡಿಸಿದ್ದೇಗೌಡರ ವಿರುದ್ಧ ಸೋತಿದ್ದರು.

ಕೆ.ಎಸ್.ನಂಜುಂಡೇಗೌಡ
ಶ್ರೀರಂಗಪಟ್ಟಣದ ಮತ್ತೋರ್ವ ಪ್ರಮುಖ ಅಭ್ಯರ್ಥಿ, ಹೋರಾಟಗಾರ, ರೈತ ನಾಯಕ ಕೆ.ಎಸ್.ನಂಜುಂಡೇಗೌಡ. ಕಳೆದ 6 ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಿ ಪ್ರಬಲ ಸ್ಪರ್ಧೆ ನೀಡಿದರೂ ಗೆಲುವಿನ ಹೊಸ್ತಿಲನ್ನು ದಾಟಲಾಗಲಿಲ್ಲ.
ಈ ಬಾರಿ ಇವರಿಗೆ ಬಿಜೆಪಿ ಮಣೆ ಹಾಕುವಲ್ಲಿ ಯಶಸ್ಸು ಕಂಡಿದೆ. 6 ಬಾರಿ ಸೋತರೂ ಹೋರಾಟದ ಹುಮ್ಮಸ್ಸು ಕಡಿಮೆಯಾಗಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ನಂಜುಂಡೇಗೌಡರು ಕಠಿಣ ಸ್ಪರ್ಧೆ ನೀಡಿದರೂ ಗೆಲ್ಲುವ ಮಾತು ದೂರ. ಇಲ್ಲೇನಿದ್ದರೂ ಜೆಡಿಎಸ್ ಹಾಗು ಕಾಂಗ್ರೆಸ್ ನಡುವೆ ನೇರ ಹಣಾಹಣಿ.

ಯಾರಿಗೆ ಸಿಗಲಿದೆ ಗೆಲುವು?
ಶಾಸಕ ರಮೇಶ್ ಬಾಬುವಿನ ಸ್ವಭಾವ ಹಾಗು ನಡವಳಿಕೆಗೆ ಜನರು ಬೇಸರ ವ್ಯಕ್ತ ಪಡಿಸಿದ್ದಾರೆ. ರವೀಂದ್ರರ ಸ್ವಂತ ಕಾರ್ಯಕರ್ತರ ಪಡೆ ಜೊತೆಗೆ ಜೆಡಿಎಸ್ನ ಸಾಂಪ್ರದಾಯಿಕ ಮತಗಳು ಒಂದಾದರೆ, ಜೆಡಿಎಸ್ನ ರವೀಂದ್ರ ಶ್ರೀಕಂಠಯ್ಯಗೆ ಗೆಲುವು ಸುಲಭವಾಗಬಹುದು. ಮೇಲಾಗಿ ಬಂಡಾಯ ಶಾಸಕರನ್ನು ಸೋಲಿಸಬೇಕಿರುವ ಹಠ ಹಾಗು ಅನಿವಾರ್ಯತೆ ದೇವೇಗೌಡರಿಗೆ ಹೆಚ್ಚಿರುವುದು ರವೀಂದ್ರಗೆ ವರವಾಗಬಹುದು.












Click it and Unblock the Notifications