ಮಹದಾಯಿ ಸಮಸ್ಯೆಗೆ ಕಾಂಗ್ರೆಸ್ ಕಾರಣ: ಬಸವರಾಜ ಬೊಮ್ಮಾಯಿ
ಮೈಸೂರು, ಡಿಸೆಂಬರ್ 13: ಕಾಂಗ್ರೆಸ್ ಜನರಿಗೆ ಮರೆವಿದೆ ಎಂದು ತಿಳಿದಂತಿದೆ. ಆದರೆ ಕಾಂಗ್ರೆಸ್ ನ ಪರಿಚಯ ಜನರಿಗಿದೆ. ಮಹದಾಯಿ ಸಮಸ್ಯೆ ಉಂಟಾಗಲು ಕಾಂಗ್ರೆಸ್ ಕಾರಣ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮೈಸೂರಿನಲ್ಲಿ ಕಾಂಗ್ರೆಸ್ ಒಟ್ಟಾಗಿ ಹೋಗುವ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅವರು ಒಟ್ಟಾಗಿ ಹೋಗುವುದು ಅವರಿಗೆ ಸಂಬಂಧಿಸಿದ ಆಂತರಿಕ ವಿಚಾರ. ನಾವು ಹೇಳುವುದೇನೂ ಇಲ್ಲ. ಮಹದಾಯಿ, ಕೃಷ್ಣಾ ಹಾಗೂ ಎಸ್.ಸಿ ಹಾಗೂ ಎಸ್.ಟಿ ವಿಚಾರಗಳಿಗೆ ಸಂಬಂಧಿಸಿದಂತೆ ಎರಡು ಸಮಾವೇಶಗಳನ್ನು ಮಾಡುವುದಾಗಿ ಹೇಳಿದರು.
ಮಹದಾಯಿ ಯೋಜನೆ ಸಮಸ್ಯೆಯಾಗಲು ಕಾಂಗ್ರೆಸ್ ಕಾರಣ. ಅವರ ಅಧಿನಾಯಕಿ ಸೋನಿಯಾ ಗಾಂಧಿ ಗೋವಾಕ್ಕೆ ಚುನಾವಣೆ ಗೆ ಹೋಗಿ ಮಹದಾಯಿಯ ಒಂದು ಹನಿ ನೀರನ್ನೂ ಬೇರೆಡೆಗೆ ತಿರುಗಿಸಲು ಬಿಡುವುದಿಲ್ಲ ಎಂದು ಹೇಳಿದರು. ಅವರಿಗೆ ಯಾವ ನೈತಿಕ ಹಕ್ಕಿದೆ. 5 ವರ್ಷಗಳಿದ್ದಾಗ ಏನೂ ಮಾಡಲಾಗಲಿಲ್ಲ. ಎಸ್.ಸಿ.ಎಸ್.ಟಿ ಗಳ 40 ವರ್ಷಗಳ ಬೇಡಿಕೆಯನ್ನು ತಿರುಗಿ ನೋಡಿರಲಿಲ್ಲ ಎಂದರು.

ಸಿದ್ದರಾಮಯ್ಯ ಅಧಿಕಾರಕ್ಕೆ ಬಂದರೆ ಒಳಮೀಸಲಾತಿಯನ್ನು ನೀಡುವುದಾಗಿ ಟ್ವೀಟ್ ಮಾಡಿದ್ದಾರೆ. 5 ವರ್ಷ ಮುಖ್ಯಮಂತ್ರಿಗಳಾಗಿದ್ದಾಗ ವರದಿಯನ್ನು ಮಂಡಿಸುವ ಸಮಾವೇಶವೊಂದರಲ್ಲಿ ಕೇವಲ ದೀಪ ಹಚ್ಚಿ ಬಂದರು, ಮಾತನಾಡಲೂ ಇಲ್ಲ. ಎಲ್ಲಾ ನಡೆನುಡಿಗಳು ಜನರ ಮನದಾಳದಲ್ಲಿದೆ. ಅದನ್ನು ಮುಚ್ಚಿಹಾಕಲು ಸಮಾವೇಶ ಮಾಡಿದರು. ಜನರನ್ನು ಪದೇ ಪದೇ ಮರಳು ಮಾಡಲು ಸಾಧ್ಯವಿಲ್ಲ. ಹಿಂದೆ ಚುನಾವಣೆ ಸಂದರ್ಭದಲ್ಲಿ ಒಳಮೀಸಲಾತಿ ಕೊಡುವುದಾಗಿ ಭರವಸೆ ನೀಡಿದ್ದರು. ಆದರೆ ಸಮ್ಮಿಶ್ರ ಸರ್ಕಾರದಲ್ಲಿ ಒಮ್ಮೆಯಾದರೂ ಒತ್ತಾಯ ಮಾಡಿದ್ದಾರಾ ಎಂದು ಪ್ರಶ್ನಿಸಿದರು.

ಎಸ್.ಸಿ ಹಾಗೂ ಎಸ್.ಟಿ ಮೀಸಲಾತಿ ಬಗ್ಗೆ ಗೊಂದಲಗಳೇನೂ ಇಲ್ಲ. ಪ್ರಶ್ನೆಗೆ ಉತ್ತರ ನೀಡಲಾಗುತ್ತಿದೆ. ಈಗ ಪ್ರಸ್ತಾವನೆ ಮುಂದಿದೆಯೇ ಎಂದು ಕೇಳಿದ್ದಾರೆ. ಸದ್ಯಕ್ಕಿಲ್ಲ, ನಾಳೆ ಪ್ರಸ್ತಾವನೆ ಹೋಗಲಿದೆ. ಇದನ್ನು ಕಾಂಗ್ರೆಸ್ ಹುಟ್ಟುಹಾಕುತ್ತಿದೆ. ಅವರಿಗೆ ಎಸ್.ಸಿ ಹಾಗೂ ಎಸ್.ಟಿ ಮತಗಳು ತಪ್ಪಿಹೋಗುತ್ತಿವೆ ಎನ್ನುವ ಆತಂಕದಿಂದ ಹೀಗೆ ಮಾಡುತ್ತಿದ್ದಾರೆ ಎಂದರು.












Click it and Unblock the Notifications