ಸಿದ್ದರಾಮಯ್ಯ ನಡೆಗೆ ಭೇಷ್ ಎನ್ನುತ್ತಿದೆ ‘ಕೈ’ ಕಮಾಂಡ್ !
Recommended Video

ಮೈಸೂರು, ಮಾರ್ಚ್ 22: ಬಹುಶಃ ಇದುವರೆಗೆ ರಾಜ್ಯವಾಳಿದ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿಗಳ ಪೈಕಿ ಯಾರಿಗೂ ಇಲ್ಲದ ವರ್ಚಸ್ಸನ್ನು ಸಿದ್ದರಾಮಯ್ಯ ಹೊರಗೆಡವುತ್ತಿದ್ದಾರೆ. ಇದನ್ನು ಪ್ರಧಾನಿ ಮೋದಿಯೇ ನಿಬ್ಬೆರಗಾಗಿ ನೋಡುತ್ತಿದ್ದರೆ, ಕಾಂಗ್ರೆಸ್ ಹೈಕಮಾಂಡ್ ಭೇಷ್ ಎನ್ನುತ್ತಿದೆ.
ಎಲ್ಲ ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡು ಸೋತು ಸುಣ್ಣವಾಗಿರುವ ಕಾಂಗ್ರೆಸ್ಗೆ ಆಶಾಭಾವನೆ ಅಂತ ಉಳಿದಿದ್ದರೆ ಅದು ಕರ್ನಾಟಕದಲ್ಲಿ ಮಾತ್ರ. ಇದೀಗ ಸಿದ್ದರಾಮಯ್ಯರವರು ಚುನಾವಣೆ ಸಂದರ್ಭ ಮಾಡುತ್ತಿರುವ ತಂತ್ರ ಮತ್ತು ವೇಗ ಪಕ್ಷದಲ್ಲಿ ಭರ್ಜರಿ ಹುರುಪನ್ನು ಹುಟ್ಟು ಹಾಕಿದೆ.
ಹಾಗೆ ನೋಡಿದರೆ ಸಿದ್ದರಾಮಯ್ಯ ಅವರು ಜನತಾ ಪರಿವಾರದಿಂದ ಎದ್ದು ಕಾಂಗ್ರೆಸ್ ಪಕ್ಷಕ್ಕೆ ಹೋದಾಗ ಅವರ ರಾಜಕೀಯ ಭವಿಷ್ಯ ಮುಗಿಯಿತು ಎಂದು ಮಾತನಾಡಿಕೊಂಡವರೇ ಹೆಚ್ಚು. ಆದರೆ ದೇವೇಗೌಡರ ಗರಡಿಯಲ್ಲಿ ಬೆಳೆದಿದ್ದ ಅವರು ರಾಜಕೀಯ ತಂತ್ರವನ್ನು ಬಳಸಿ ಕಾಂಗ್ರೆಸ್ನ ಎಲ್ಲ ನಾಯಕರನ್ನು ಬದಿಗೆ ಸರಿಸಿ ಬೆಳೆದು ಮುಖ್ಯಮಂತ್ರಿಯಾದ ಪರಿ ನಿಜಕ್ಕೂ ಅಚ್ಚರಿ ಹುಟ್ಟಿಸುವಂತಹದ್ದೇ.

ಇದೀಗ ಮುಂದಿನ ಅವಧಿಗೂ ಮುಖ್ಯಮಂತ್ರಿಯಾಗಿ ಮುಂದುವರೆಯುವ ಅವರ ಬಯಕೆ ಮತ್ತು ಅದನ್ನು ಈಡೇರಿಸಲು ಅವರು ಅನುಸರಿಸುತ್ತಿರುವ ತಂತ್ರ ಎಲ್ಲವೂ ವಿಶಿಷ್ಟ, ವಿಭಿನ್ನವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.
ಸದ್ಯದ ಪರಿಸ್ಥಿತಿಯಲ್ಲಿ ಕರ್ನಾಟಕದ ಕಾಂಗ್ರೆಸ್ ಎಂದರೆ ಅದು ಸಿದ್ದರಾಮಯ್ಯ ಎನ್ನುವಂತಾಗಿದೆ. ಸಿದ್ದರಾಮಯ್ಯರ ಪ್ರತಿ ನಡೆಯೂ ಸ್ವಪಕ್ಷದ ಭಿನ್ನಮತೀಯರ ಬಾಯಿ ಮುಚ್ಚಿಸಿ ಹೈಕಮಾಂಡ್ಗೆ ಹತ್ತಿರವಾಗುವಂತೆ ಮಾಡಿದೆ. ಖುದ್ದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯೇ ರಾಜ್ಯದಲ್ಲಿ ಹಮ್ಮಿಕೊಳ್ಳುತ್ತಿರುವ ಜನಾಶೀರ್ವಾದ ಯಾತ್ರೆಗೆ ಕಂಡು ಬರುತ್ತಿರುವ ಅಭೂತಪೂರ್ವ ಪ್ರತಿಕ್ರಿಯೆಯಿಂದ ಪುಳಕಗೊಂಡಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಇದೆಲ್ಲದರ ನಡುವೆ ಸಿದ್ದರಾಮಯ್ಯ ಅವರು ತಮ್ಮ ತವರು ಜಿಲ್ಲೆ ಮೈಸೂರಿನಲ್ಲಿ ಮಾರ್ಚ್ 25ರಂದು ಭಾನುವಾರ ಬೃಹತ್ ಕಾರ್ಯಕರ್ತರ ಸಮಾವೇಶವನ್ನು ನಡೆಸುತ್ತಿದ್ದು ಅಲ್ಲಿ ತಮ್ಮ ಅಸಲಿ ಶಕ್ತಿಯನ್ನು ಪ್ರದರ್ಶಿಸಲಿದ್ದಾರೆ. ಈ ಸಮಾವೇಶ ಸಿಎಂನ ವರ್ಚಸ್ಸನ್ನು ಇನ್ನಷ್ಟು ಹೆಚ್ಚಿಸಲಿದೆ. ಜತೆಗೆ ಅದು ರಾಷ್ಟ್ರಮಟ್ಟಕ್ಕೂ ಎಳೆದೊಯ್ಯಲಿದೆ.
ರಾಹುಲ್ಗಾಂಧಿಯವರ ಸಮ್ಮುಖದಲ್ಲಿ ಜೆಡಿಎಸ್ನ ಏಳು ಬಂಡಾಯ ಶಾಸಕರನ್ನು, ಜೆಡಿಎಸ್ನಲ್ಲಿ ಗುರುತಿಸಿಕೊಂಡಿದ್ದ ಕೊಡಗಿನ ನಾಯಕ ಎಂ.ಸಿ.ನಾಣಯ್ಯ ಮತ್ತು ಚಾಮರಾನಗರದ ಬಿಜೆಪಿ ನಾಯಕ ಎ.ಆರ್.ಕೃಷ್ಣಮೂರ್ತಿ ಸೇರಿದಂತೆ 11 ಮಂದಿಯನ್ನು ಕಾಂಗ್ರೆಸ್ಗೆ ಅಧಿಕೃತವಾಗಿ ಸೇರ್ಪಡೆ ಮಾಡಿಕೊಳ್ಳುತ್ತಿರುವುದು ಕೂಡ ಸಿದ್ದರಾಮಯ್ಯ ಸಾಧನೆಯಾಗಿದೆ. ಚುನಾವಣೆ ಸಂದರ್ಭದಲ್ಲೇ ಇತರೆ ಪಕ್ಷದ ನಾಯಕರು ಕಾಂಗ್ರೆಸ್ಗೆ ಬರುತ್ತಿರುವುದು ಶಕ್ತಿ ಬಂದಂತಾಗಿದೆ. ಇದರ ಯಶಸ್ಸು ಸಿದ್ದರಾಮಯ್ಯರಿಗೆ ಸಲ್ಲುವಂತೆ ಭಾಸವಾಗುತ್ತಿದೆ.
ರಾಜ್ಯದಲ್ಲಿ ಪ್ರಭಾವಿ ನಾಯಕರಿದ್ದರೂ ಸದ್ಯದ ಮಟ್ಟಿಗೆ ಅವರೆಲ್ಲ ತೆರೆಗೆ ಸರಿದಂತೆ ಕಂಡು ಬರುತ್ತಿದ್ದು, ರಾಹುಲ್ಗಾಂಧಿ ಮುಂದೆ ಸಿದ್ದರಾಮಯ್ಯ ಅವರು ಮಾತ್ರ ಬಿಂಬಿತರಾಗುತ್ತಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಂಡು ಬರುತ್ತಿದೆ. ತವರು ಕ್ಷೇತ್ರದಲ್ಲಿ ನಡೆಯುವ ಸಮಾವೇಶ ಅವರ ಮುಂದಿನ ನಡೆಗೆ ಇನ್ನಷ್ಟು ಪುಷ್ಠಿ ನೀಡುವುದರಲ್ಲಿ ಸಂಶಯವಿಲ್ಲ.












Click it and Unblock the Notifications