ಕಾಂಗ್ರೆಸ್ ನಾಯಕರೆಲ್ಲ ನವೆಂಬರ್ 6ಕ್ಕೆ ದೆಹಲಿಗೆ: ಏನಿದರ ಗುಟ್ಟು?
Recommended Video

ಬೆಂಗಳೂರು, ಅಕ್ಟೋಬರ್ 23: ರಾಜ್ಯದ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭೆ ಉಪ ಚುನಾವಣೆಯ ಫಲಿತಾಂಶ ಏನೇ ಆದರೂ ಕೂಡ ರಾಜ್ಯ ಕಾಂಗ್ರೆಸ್ನಲ್ಲಿ ಉದ್ಭವಿಸಿರುವ ಆಂತರಿಕ ಜಗಳಕ್ಕೆ ಇತಿಶ್ರೀ ಹಾಡಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ.
ಈ ಹಿನ್ನೆಲೆಯಲ್ಲಿ ಉಪಚುನಾವಣೆಯ ಫಲಿತಾಂಶ ಪ್ರಕಟವಾಗುವ ನವೆಂಬರ್ 6ರಂದೇ ರಾಜ್ಯದ ಎಲ್ಲಾ ಪ್ರಮುಖ ಕಾಂಗ್ರೆಸ್ ನಾಯಕರಿಗೆ ದೆಹಲಿ ಬುಲಾವ್ ಬಂದಿದ್ದು, ಈ ವೇಳೆ ರಾಜ್ಯದ ಇತ್ತೀಚಿನ ರಾಜಕೀಯ ವಿದ್ಯಮಾನಗಳ ಕುರಿತು ಸಮಗ್ರ ಚರ್ಚೆ ನಡೆಯುವ ಸಾಧ್ಯತೆಗಳಿವೆ.
ಮೂಲಗಳ ಪ್ರಕಾರ ಐದು ಉಪಚುಣಾವಣೆಯಲ್ಲಿ ಕಾಂಗ್ರೆಸ್ ಕೇವಲ ಒಂದು ಸ್ಥಾನವನ್ನು ಗೆಲ್ಲುತ್ತದೆ ಎಂಬ ವರದಿ ಈಗಾಗಲೇ ಹೈಕಮಾಂಡ್ ಅಂಗಳವನ್ನು ತಲುಪಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪಕ್ಷ ಸಂಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಹೈಕಮಾಂಡ್ ಎಲ್ಲಾ ನಾಯಕರಿಗೆ ಬುದ್ಧಿ ಹೇಳಲು ಮುಂದಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ ಕುರಿತಂತೆ ಮೂರು ದಿನಗಳ ಹಿಂದಷ್ಟೆ ಸಚಿವ ಡಿಕೆ ಶಿವಕುಮಾರ್ ನೀಡಿರುವ ಹೇಳಿಕೆ ಕಾಂಗ್ರೆಸ್ ನಲ್ಲಿ ಅಲ್ಲೋಲ ಕಲ್ಲೋಲ ಉಂಟು ಮಾಡುದ್ದು, ಇಡೀ ಪಕ್ಷವೇ ಸಿದ್ದರಾಮಯ್ಯ ಹಾಗೂ ಸಿದ್ದರಾಮಯ್ಯ ವಿರೋಧಿ ಬಣ ಎಂಬಂತಾಗಿದೆ.
ಈ ಹಿನ್ನೆಲೆಯಲ್ಲಿ ನವೆಂಬರ್ 6ರಂದು ದೆಹಲಿಯಲ್ಲಿ ಕರೆಯಲಾಗಿರುವ ಸಭೆ ತುಂಬಾ ಪ್ರಾಮುಖ್ಯತೆ ಪಡೆದಿದೆ. ಈ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ವಿರೋಧಿ ಬಣ, ಡಿಸಿಎಂ ಪರಮೇಶ್ವರ ನಡುವಿನ ಆಂತರಿಕ ಕಲಹಕ್ಕೆ ಇತಿಶ್ರೀ ಹಾಡಲಾಗುತ್ತಾರೆ, ಅಥವಾ ಎರಡೂ ಬಣಗಳು ಮತ್ತಷ್ಟು ಪ್ರಬಲವಾಗಿ ಬಲಗೊಳ್ಳುತ್ತಾ ಎಂಬುದನ್ನು ಕಾದು ನೋಡಬೇಕಿದೆ

ಕಾಂಗ್ರೆಸ್ ವಲಯದಲ್ಲಿ ಹೊಸ ಸಂಚಲನ
ರಾಜ್ಯ ನಾಯಕರಿಗೆ ನವೆಂಬರ್ 6ಕ್ಕೆ ದೆಹಲಿಗೆ ಬರುವಂತೆ ವರಿಷ್ಠರು ಸೂಚನೆ ನೀಡಿರುವುದು ಕಾಂಗ್ರೆಸ್ ವಲಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಉಪ ಚುನಾವಣೆ ಫಲಿತಾಂಶ ಸಹ ಅಂದೇ ಪ್ರಕಟವಾಗಲಿದೆ.

ರಾಜ್ಯದ ಯಾವ್ಯಾವ ವಿಷಯಗಳ ಕುರಿತು ಚರ್ಚೆ
ಫಲಿತಾಂಶದ ಆಧಾರದಲ್ಲಿ ರಾಜ್ಯದಲ್ಲಿ ಪಕ್ಷ ಸಂಘಟನೆ, ಲೋಕಸಭಾ ಚುನಾವಣೆಗೆ ಮೈತ್ರಿ ಮುಂದುವರಿಕೆ, ಸಂಪುಟ ವಿಸ್ತರಣೆ, ನಿಗಮ-ಮಂಡಳಿಗಳ ನೇಮಕ ಸೇರಿ ವಿವಿಧ ವಿಚಾರಗಳ ಚರ್ಚೆ ನಡೆಯಲಿದೆ.

ದೆಹಲಿಗೆ ತೆರಳಲಿರುವ ನಾಯಕರು
ದಿನೇಶ್ ಗುಂಡೂರಾವ್, ಈಶ್ವರ ಖಂಡ್ರೆ, ಸಿದ್ದರಾಮಯ್ಯ, ಡಾ. ಜಿ. ಪರಮೇಶ್ವರ, ಮಲ್ಲಿಕಾರ್ಜುನ ಖಗೆ ಅವರೊಂದಿಗೆ ರಾಹುಲ್ ಗಾಂಧಿ ಹಾಗೂ ಕೆಸಿ ವೇಣುಗೋಪಾಲ್ ಚರ್ಚೆ ನಡೆಸಲಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಗೆ ಮೈತ್ರಿ ಮಾಡಿಕೊಳ್ಳಲು ಉಪಚುನಾವಣೆಯಲ್ಲಿ ಪ್ರಯೋಗ ಮಾಡಲಾಗಿದೆ. ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದರ ಮಾಹಿತಿ ಪಡೆಯಲಾಗುತ್ತದೆ.

ಕೆಪಿಸಿಸಿಗೆ ಪದಾಧಿಕಾರಿಗಳ ನೇಮಕ ಇಲ್ಲ
ಕೆಪಿಸಿಸಿಗೆ ಹೊಸದಾಗಿ ಪದಾಧಿಕಾರಿಗಳನ್ನು ನೇಮಕ ಮಾಡಲು ಅಧ್ಯಕ್ಷ ದಿನೇಶ್ ಗುಂಡರಾವ್ ಸಿದ್ಧರಾಗಿದ್ದಾರೆ. ಲೋಕಸಭಾ ಚುನಾವಣೆ ಮುಗಿಯುವವರೆಗೆ ಹೊಸ ಪದಾಧಿಕಾರಿಗಳ ನೇಮಕ ಬೇಡ ಎಂಬ ಸಲಹೆ ನೀಡಲಾಗಿದೆ. ಈಗ ಇರುವ ಪದಾಧಿಕಾರಿಗಳ ವಿವಿಧ ಮುಖಂಡರ ಶಿಫಾರಸಿನಂತೆ ನೇಮಕವಾಗಿದ್ದಾರೆ. ಅವರನ್ನು ಬದಲಾವಣೆ ಮಾಡಿದರೆ ಕಷ್ಟ ಎಂದು ಹೈಕಮಾಂಡ್ ಸೂಚನೆ ನೀಡಿದೆ.












Click it and Unblock the Notifications