ತುಳು ಭಾಷಾ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಿಗೆ ರಾಜ್ಯ ಸಚಿವ ಸ್ಥಾನಮಾನ : ಕಾಂಗ್ರೆಸ್
ಬೆಂಗಳೂರು, ಮೇ 2: ಕರ್ನಾಟಕ ವಿಧಾನಸಭಾ ಚುನಾವಣೆ 2023ರ ಹಿನ್ನೆಲೆಯಲ್ಲಿ ಕಾಂಗ್ರೆಸ್ ರಾಜ್ಯ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಗ್ಯಾರಂಟಿ ಘೋಷಣೆಯ ಮೂಲಕ ಹಲವು ಭರವಸೆಯನ್ನು ರಾಜ್ಯದ ಜನರಿಗೆ ನೀಡಿದ್ದ ಕಾಂಗ್ರೆಸ್ ಇಂದು ಪ್ರಣಾಳಿಕೆ ಮೂಲಕ ಮತ್ತಷ್ಟು ಭರವಸೆಗಳನ್ನು ನೀಡಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಖಾಸಗಿ ಹೋಟೆಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿಂದು ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ಈ ವೇಳೆ ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಜಿ. ಪರಮೇಶ್ವರ್ ಸೇರಿದಂತೆ ಇತರ ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು.

ಕಾಂಗ್ರೆಸ್ ತನ್ನ ರಾಜ್ಯ ಚುನಾವಣಾ ಪ್ರಣಾಳಿಕೆಯಲ್ಲಿ ಭಾಷೆ, ಸಾಹಿತ್ಯ, ಸಂಪ್ರದಾಯ ಮತ್ತು ಸಂಸ್ಕೃತಿ ಕ್ಷೇತ್ರಕ್ಕೆ ಹಲವು ಭರವಸೆಗಳನ್ನು ನೀಡಿದೆ.
- ಕುವೆಂಪು ಜನ್ಮ ಸ್ಥಳ ಕುಪ್ಪಳ್ಳಿಯನ್ನು ನೈಸರ್ಗಿಕ ಪ್ರವಾಸಿ ಕಲಾ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲು 100 ಕೋಟಿ ರೂಪಾಯಿಗಳ ವಿಶೇಷ ಕ್ರಿಯಾ ಯೋಜನೆ
- ಗಡಿ ಭಾಗದ 63 ತಾಲೂಕುಗಳಲ್ಲಿ ಹಾಗೂ ಕನ್ನಡಿಗರು ದೊಡ್ಡ ಸಂಖ್ಯೆಯಲ್ಲಿರುವ ನೆರೆಯ ಆರು ರಾಜ್ಯಗಳಲ್ಲಿ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಶಿಕ್ಷಣಕ್ಕೆ ಉತ್ತೇಜನ ನೀಡಲು ವಾರ್ಷಿಕ 200 ಕೋಟಿ ರೂಪಾಯಿ.
- ಕೂಡಲ ಸಂಗಮದಲ್ಲಿ ಸಾಮಾಜಿಕ ಒಳಗೊಳ್ಳುವಿಕೆ ಮತ್ತು ಧಾರ್ಮಿಕ ಸಾಮರಸ್ಯ ಸಂಸ್ಥೆ ಸ್ಥಾಪನೆಗಾಗಿಬಸವಪಥ ಸಂಸ್ಥೆಗೆ ರೂ 100 ಕೋಟಿ ಬಿಡುಗಡೆ.
- ಕುವೆಂಪು ಕನ್ನಡ ಸಾಹಿತ್ಯ ಪುರಸ್ಕಾರ ಅಭಿಯಾನ: 500 ಮಂದಿ ಯುವ ಕವಿಗಳು ಮತ್ತು ಬರಹಗಾರರಿಗೆ ತಲಾ 25 ಸಾವಿರ ರೂಪಾಯಿ ಹಣಕಾಸಿನ ನೆರವು ನೀಡುವ ಯೋಜನೆ.
- ಕನ್ನಡದ ಮಾತೆ ತಾಯಿ ಭುವನೇಶ್ವರಿಯ ಏಕೈಕ ದೇವಸ್ಥಾನ ಇರುವ ಸಿದ್ದಾಪುರದ ಭುವನಗಿರಿ 10 ಕೋಟಿ ರೂ ವೆಚ್ಚದಲ್ಲಿ ಪ್ರವಾಸಿ ತಾಣವಾಗಿ ಅಭಿವೃದ್ಧಿ.
- ಪಾರ್ತಿಸುಬ್ಬ ಯಕ್ಷಗಾನ ಅಭಿವೃದ್ಧಿ ಮಂಡಲ ಸ್ಥಾಪನೆಗೆ ವಾರ್ಷಿಕ ರೂ 8 ಕೋಟಿ ಅನುದಾನ.
- ಮೈಸೂರಿನಲ್ಲಿ ಕನ್ನಡಕ್ಕಾಗಿಯೇ ಮೀಸಲಿಡುವ ಬಿಎಂಶ್ರೀ ಸ್ಮಾರಕ ಅತ್ಯಂತ ದೊಡ್ಡ ಗ್ರಂಥಾಲಯ ಸ್ಥಾಪನೆ.
- ಸುಬ್ಬಯ್ಯ ನಾಯ್ಡು ನಿಧಿ: ಜಾನಪದ ಮತ್ತು ಸಾಂಪ್ರದಾಯಿಕ ಕಲೆ/ಕ್ರೀಡೆಗಳ ಪೋಷಣೆಗಾಗಿ ಈ ನಿಧಿಗೆ 500 ಕೋಟಿ ರೂಪಾಯಿ.
- ಕರ್ನಾಟಕದ ಸಾಮಾಜಿಕ ವಿಷಯಗಳು ಮತ್ತು ಪರಂಪರೆಯನ್ನು ಆಧರಿಸಿ ಸಾಕ್ಷ್ಯಚಿತ್ರ ಸಿನಿಮಾ ನಿರ್ದೇಶಿಸುವ 10 ಯುವ ನಿರ್ದೇಶಕರಿಗೆ ದೇವಿಕಾರಾಣಿ ರೋರಿಚ್ ಹೆಸರಲ್ಲಿ ತಲಾ 1 ಲಕ್ಷ ರೂ ಫೆಲೋಶಿಪ್.
- ಯುವ ಸಾಹಿತಿಗಳು ಮತ್ತು ಗಾಯಕರ ಗೌರವಕ್ಕಾಗಿ ಪಿ. ಕಾಳಿಂಗ ರಾವ್ ಸುಗಮ ಸಂಗೀತ ಫೆಲೋಶಿಪ್ ನಿಧಿಗೆ 30 ಕೋಟಿ ರೂ.
- ಕನ್ನಡವನ್ನು ಸಶಕ್ತವಾಗಿ ಗಣಕೀಕರಣಗೊಳಿಸಲು ಅಲೂರು ವೆಂಕಟರಾವ್ ನಿಧಿಗೆ 100 ಕೋಟಿ ರೂ ಅನುದಾನ
- ಚಿತ್ರದುರ್ಗದಲ್ಲಿ ಅತ್ಯಾಧುನಿಕ ವೀರ ಮದಕರಿ ನಾಯಕ ಮ್ಯೂಸಿಯಂ ಮತ್ತು ಥೀಂ ಪಾರ್ಕ್ ಸ್ಥಾಪನೆ.
- ತಾಯಿ ಭುವನೇಶ್ವರಿ ಸ್ಮಾರಕ ನಿಧಿ: ರಾಜ್ಯದಲ್ಲಿರುವ ಎಲ್ಲಾ ಎಎಸ್ಐ ತಾಣಗಳಲ್ಲಿನ ಸ್ಮಾರಕಗಳ ಸೂಕ್ತ ನಿರ್ವಹಣೆಗಾಗಿ ಈ ನಿಧಿಗೆ 500 ಕೋಟಿ ರೂ.
- ಶಿವರಾಮ ಕಾರಂತ ಸಾಹಿತ್ಯ ನಿಧಿ: 8ರಿಂದ 12ನೇತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಕನ್ನಡ ಕವಿತೆ, ಗದ್ಯ ಬರೆಯುವುದಕ್ಕೆ ಉತ್ತೇಜನ ನೀಡಲು 100 ಕೋಟಿ ರೂ ಅನುದಾನ.
- ಜಿ.ಎಸ್.ಶಿವರುದ್ರಪ್ಪ ಕನ್ನಡ ಭಾಷಾ ಅಧ್ಯಯನ ಪುರಸ್ಥಾರ ನಿಧಿ: ಕನ್ನಡ ಸಾಹಿತ್ಯದಲ್ಲಿ ಪಿಎಚ್ಡಿ ಮಾಡುವವರಿಗೆ ವಾರ್ಷಿಕ ರೂ 1 ಲಕ್ಷ ಅನುದಾನ ಹಾಗೂ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ವ್ಯಾಸಂಗ ಮಾಡುವವರಿಗೆ ವಾರ್ಷಿಕ ರೂ 25 ಸಾವಿರ ಅನುದಾನ
- ಸಂಖ್ಯಾ ಮಿತಿಗಳನ್ನು ನಿಗಡಿಪಡಿಸಿ ರಾಜ್ಯೋತ್ಸವ, ಮತ್ತಿತರ ಅಕಾಡೆಮಿಗಳ ಪ್ರಶಸ್ತಿ ಮೊತ್ತ ದುಪ್ಪಟ್ಟು.
- ಕನ್ನಡ ರಂಗಭೂಮಿ, ಜನಪದ ಕಲೆ, ಜನಪದ ಹಾಡುಗಳ ಉತ್ತೇಜನಕ್ಕೆ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಗುಬ್ಬಿ ವೀರಣ್ಣ ಬಯಲು ರಂಗಮಂದಿರಗಳ ಸ್ಥಾಪನೆ.
- ಕರ್ನಾಟಕ ಅರುಣೋದಯ ದ.ರಾ.ಬೇಂದ್ರೆ ಸಮಾವೇಶ: ಸ್ಥಳೀಯ ಜನಪದ ಕಲೆ, ಸಂಗೀತ ಸಉತ್ತೇಜನಕ್ಕೆ ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಾಂಸ್ಕೃತಿಕ ಉತ್ಸವಗಳ ಆಯೋಜನೆ.
- ತುಳು ಸಾಹಿತ್ಯ ಅಕಾಡೆಮಿಗೆ ತುಳು ಭಾಷಾ ಅಭಿವೃದ್ಧಿ ಪ್ರಾಧಿಕಾರದ ಸ್ಥಾನಮಾನ ನೀಡಿ ಪ್ರಾಧಿಕಾರದ ಅಧ್ಯಕ್ಷರಿಗೆ ರಾಜ್ಯ ಸಚಿವ ಸ್ಥಾನಮಾನ, ವಾರ್ಷಿಕ 5 ಕೋಟಿ ರೂ ಅನುದಾನ.
- ವಿಶಿಷ್ಟವಾದ ಕೊಡವ ಸಂಸ್ಕೃತಿಯ ಅಭಿವೃದ್ಧಿಗಾಗಿ ಕೊಡವ ಅಕಾಡೆಮಿಗೆ 1 ರೂ ಕೋಟಿ ಅನುದಾನ ನೀಡುವುದಾಗಿ ಕಾಂಗ್ರೆಸ್ ಭರವಸೆ ನೀಡಿದೆ.












Click it and Unblock the Notifications