'ನಮ್ಮ ಕ್ಷೇತ್ರ ನಮ್ಮ ಹೊಣೆ' ಅಭಿಯಾನಕ್ಕೆ ಚಾಲನೆ ಕೊಟ್ಟ ಕಾಂಗ್ರೆಸ್!
ಬೆಂಗಳೂರು, ಜನವರಿ 31 : ವಿಧಾನಸಭೆ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ಕರ್ನಾಟಕ ಕಾಂಗ್ರೆಸ್ 'ನಮ್ಮ ಕ್ಷೇತ್ರ ನಮ್ಮ ಹೊಣೆ' ಎಂಬ ಘೋಷವಾಕ್ಯದಲ್ಲಿ ಅಭಿಯಾನವೊಂದನ್ನು ಆರಂಭಿಸಿದೆ. ಈ ಮೂಲಕ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಆದ್ಯತೆ ನೀಡಿದೆ.
ಮುಖ್ಯಮಂತ್ರಿ, ಸಚಿವರು, ಶಾಸಕರು, ಎಐಸಿಸಿ ಪದಾಧಿಕಾರಿಗಳು ಯಾರೇ ಆಗಿದ್ದರೂ ಅವರ ಕ್ಷೇತ್ರದ ಹೊಣೆ ಅವರ ಮೇಲಿರುತ್ತದೆ. ತಮ್ಮ-ತಮ್ಮ ಬೂತ್ಗಳಲ್ಲಿ ಪಕ್ಷಕ್ಕೆ ಹೆಚ್ಚಿನ ಮತಗಳನ್ನು ತಂದುಕೊಡುವ ಜವಾಬ್ದಾರಿಯನ್ನು ನಾಯಕರಿಗೆ ನೀಡಲಾಗಿದೆ.
ಕೊರಟಗೆರೆಯಲ್ಲಿ ಪರಮೇಶ್ವರ ಗ್ರಾಮ ವಾಸ್ತವ್ಯ, ಪ್ರಚಾರ!
ಮಂಗಳವಾರ ಅರಮನೆ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ 'ನಮ್ಮ ಕ್ಷೇತ್ರ ನಮ್ಮ ಹೊಣೆ' ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ಅಭಿಯಾನಕ್ಕೆ ಚಾಲನೆ ನೀಡಿದರು. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಡಿಕೆಶಿ ನೇತೃತ್ವದ ಪ್ರಚಾರ ಸಮಿತಿಯಲ್ಲಿ ಯಾರು ಯಾರಿದ್ದಾರೆ?
'ನಮ್ಮ ಕ್ಷೇತ್ರದ ಹೊಣೆ ನಮ್ಮದೇ ಹೊರತು ಇನ್ನೊಬ್ಬರದ್ದಲ್ಲ. ಮುಂಬರುವ ಮೂರು ತಿಂಗಳು ಕಷ್ಟ ಪಡದಿದ್ದರೆ ಮುಂದಿನ ಐದು ವರ್ಷ ಕಷ್ಟ ಅನುಭವಿಸಬೇಕಾಗುತ್ತದೆ ಎಂಬ ಸಂಗತಿ ಎಲ್ಲರ ಮನಸ್ಸಿನಲ್ಲಿ ಇರಲಿ' ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಹೇಳಿದರು.
ಏಕೆ ಈ ಅಭಿಯಾನ?
2013ರ ಚುನಾವಣೆಯಲ್ಲಿ 5 ಸಾವಿರಕ್ಕಿಂತ ಕಡಿಮೆ ಮತಗಳ ಅಂತರದಲ್ಲಿ 16 ಕ್ಷೇತ್ರವನ್ನು ಪಕ್ಷ ಕಳೆದುಕೊಂಡಿದೆ. 5 ರಿಂದ 10 ಸಾವಿರ ಮತಗಳ ಅಂತರದಲ್ಲಿ 24 ಸ್ಥಾನದಲ್ಲಿ ಸೋಲು ಉಂಟಾಗಿದೆ. ಆದ್ದರಿಂದ, ಪ್ರತಿ ಬೂತ್ನಲ್ಲಿ ಹೆಚ್ಚು ಮತಗಳನ್ನು ಪಡೆಯಬೇಕು ಎಂದು 'ನಮ್ಮ ಕ್ಷೇತ್ರ ನಮ್ಮ ಹೊಣೆ' ಎಂಬ ಅಭಿಯಾನ ಆರಂಭಿಸಲಾಗಿದೆ.
ಎಲ್ಲಾ ಪದಾಧಿಕಾರಿಗಳಿಗೆ ಗುರಿ
ಪಕ್ಷದ ಎಲ್ಲಾ ಪದಾಧಿಕಾರಿಗಳಿಗೂ ಟಾರ್ಗೆಟ್ ನೀಡಲಾಗಿದೆ. 56,000 ಬೂತ್ ಸಮಿತಿಗಳ ಪದಾಧಿಕಾರಿಗಳ ಭಾವಚಿತ್ರ, ಮೊಬೈಲ್ ಸಂಖ್ಯೆ ಸಂಗ್ರಹಿಸಬೇಕು ಎಂದು ಸೂಚನೆ ನೀಡಲಾಗಿದೆ. ರಾಜ್ಯಮಟ್ಟದ ನಾಯಕರು ನೀಡುವ ಹೇಳಿಕೆಯನ್ನು ಪ್ರಚಾರ ಮಾಡಲು ವಾಟ್ಸಪ್ ಗ್ರೂಪ್ ರಚನೆ ಮಾಡಲು ನಿರ್ದೇಶನ ನೀಡಲಾಗಿದೆ.
ಪದಾಧಿಕಾರಿಗಳಿಗೆ ಎಚ್ಚರಿಕೆ
'ಮತ್ತೆ ಅಧಿಕಾರಕ್ಕೆ ಬರುವುದು ಕಷ್ಟ. ಮುಂದೆ ಸರ್ಕಾರ ರಚನೆ ಮಾಡುವಷ್ಟು ಸ್ಥಾನ ಸಿಗುವುದಿಲ್ಲ ಎಂಬಂತಹ ಹೇಳಿಕೆ ನೀಡಬಾರದು. ಯಾವುದೇ ಮಾಹಿತಿ ನೀಡದೆ ಸಭೆಗೆ ಗೈರಾದ ಪದಾಧಿಕಾರಿಗಳಿಗೆ ನೋಟಿಸ್ ನೀಡಲಾಗುವುದು. ಅನುಮತಿ ಪಡೆಯದೇ ಗೈರಾದರೆ ಪಕ್ಷದಿಂದ ವಜಾ ಮಾಡಲಾಗುವುದು' ಎಂದು ಕೆ.ಸಿ.ವೇಣುಗೋಪಾಲ್ ಎಚ್ಚರಿಕೆ ನೀಡಿದರು.
ಸ್ಟಾರ್ ಪ್ರಚಾರಕರು
'ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪಕ್ಷದ ಸ್ಟಾರ್ ಪ್ರಚಾರಕರು. ಸಿನಿಮಾ ನಟರನ್ನು ಪ್ರಚಾರಕ್ಕೆ ಬಳಸಿಕೊಳ್ಳಲಾಗುತ್ತದೆ. ರಾಹುಲ್ ಗಾಂಧಿ ಮೂರು ತಿಂಗಳ ಕಾಲ ವಿವಿಧ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲಿದ್ದಾರೆ' ಎಂದು ಕೆ.ಸಿ.ವೇಣುಗೋಪಾಲ್ ಹೇಳಿದರು.