ಅಲ್ಪಸಂಖ್ಯಾತರ ಮತಕ್ಕಾಗಿ ಕಾಂಗ್ರೆಸ್, ಜೆಡಿಎಸ್ ಕಸರತ್ತು!
ಬೆಂಗಳೂರು, ಜೂನ್ 03; ಸದ್ಯದ ರಾಜ್ಯದ ರಾಜಕೀಯ ಪರಿಸ್ಥಿತಿಯನ್ನು ಗಮನಿಸಿದರೆ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಅಲ್ಪಸಂಖ್ಯಾತ ಮತಕ್ಕೆ ಗಾಳ ಹಾಕುತ್ತಿದ್ದರೆ, ಇತ್ತ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ತನ್ನ ಮತ ಬ್ಯಾಂಕ್ ಅನ್ನು ಭದ್ರವಾಗಿಸಿಕೊಳ್ಳುವತ್ತ ಹೆಣಗಾಡುತ್ತಿದೆ.
ಇದೆರಡು ಪಕ್ಷಗಳಿಗೆ ಪರ್ಯಾಯವಾಗಿ ಎಸ್ಡಿಪಿಐ ಅಲ್ಪಸಂಖ್ಯಾತರನ್ನು ಸಂಘಟನೆಗೊಳಿಸುವ ಮೂಲಕ ನೆಲೆಕಂಡುಕೊಳ್ಳಲು ಹವಣಿಸುತ್ತಿದೆ. ಈಗ ರಾಜ್ಯದಲ್ಲಿ ಮೂರು ಪಕ್ಷಗಳು ಅಲ್ಪಸಂಖ್ಯಾತ ಮತಗಳಿಗಾಗಿ ಕಾದು ಕುಳಿತಿವೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಅಲ್ಪಸಂಖ್ಯಾತರು ಯಾರನ್ನು ಬೆಂಬಲಿಸಲಿದ್ದಾರೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಸ್ವಾತಂತ್ರ್ಯ ಬಂದಲ್ಲಿಂದ ಇಲ್ಲಿವರೆಗೆ ಕಾಂಗ್ರೆಸ್ಗೆ ಬೆನ್ನೆಲುಬಾಗಿರುವುದು ಅಲ್ಪಸಂಖ್ಯಾತ ಮತಗಳೇ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಬದಲಾದ ಪರಿಸ್ಥಿತಿಯಲ್ಲಿ ಪ್ರಾದೇಶಿಕ ಪಕ್ಷಗಳು ಅಲ್ಪ ಸಂಖ್ಯಾತ ಮತಗಳನ್ನು ಕಸಿದುಕೊಳ್ಳುವ ಮೂಲಕ ಕಾಂಗ್ರೆಸ್ಗೆ ಪೈಪೋಟಿ ನೀಡುತ್ತಿವೆ.
ಅದರಂತೆ ರಾಜ್ಯದಲ್ಲಿ ಜೆಡಿಎಸ್ ಈಗ ಆ ಕೆಲಸಕ್ಕೆ ಕೈಹಾಕಿದೆ. ಮುಸ್ಲಿಂ ಸಮುದಾಯದ ಸಿ. ಎಂ. ಇಬ್ರಾಹಿಂರನ್ನು ಪಕ್ಷದ ರಾಜ್ಯಾಧ್ಯಕ್ಷರಾಗಿ ಮಾಡಿದೆ. ಮುಂದಿನ ಚುನಾವಣೆಯಲ್ಲಿ ಅಲ್ಪಸಂಖ್ಯಾತರು ಪಕ್ಷಕ್ಕೆ ಬೆಂಬಲ ನೀಡಲಿ ಎಂಬ ಲೆಕ್ಕಾಚಾರ ಎಚ್. ಡಿ. ದೇವೇಗೌಡರ ಈ ನಡೆ ಹಿಂದೆ. ಇದೆ. ಮತ್ತೊಂದು ಕಡೆ ಎಚ್. ಡಿ. ಕುಮಾರಸ್ವಾಮಿ ಕಾಂಗ್ರೆಸ್ ಅಲ್ಪಸಂಖ್ಯಾತರನ್ನು ಹೇಗೆ ಕಡೆಗಣಿಸುತ್ತಿದೆ ಎಂದು ಆಗಾಗ ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್ ಟೀಕಿಸುತ್ತಿದ್ದಾರೆ.

ಅಲ್ಪಸಂಖ್ಯಾತ ಮತ ಹಂಚಿಹೋಗುವ ಭಯ
ಇದುವರೆಗೆ ಕಾಂಗ್ರೆಸ್ಗೆ ಮತ ಬ್ಯಾಂಕ್ ಆಗಿದ್ದುದ್ದೇ ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಮತಗಳು ಎಂಬುದು ರಾಜಕೀಯದ ಇತಿಹಾಸವನ್ನು ನೋಡಿದವರಿಗೆ ಗೊತ್ತಾಗುತ್ತದೆ. ಆದರೀಗ ರಾಜ್ಯದಲ್ಲಿ ಅಲ್ಪಸಂಖ್ಯಾತ ಮತಗಳು ಹಂಚಿಹೋಗುವ ಭಯ ಕಾಂಗ್ರೆಸ್, ಜೆಡಿಎಸ್ ಮತ್ತು ಎಸ್ಡಿಪಿಐಯನ್ನು ಕಾಡುತ್ತಿದೆ. ಹೀಗಾಗಿಯೇ ಚುನಾವಣೆಗೆ ದಿನಗಳು ಹತ್ತಿರವಾಗುತ್ತಿದ್ದಂತೆಯೇ ಅಲ್ಪಸಂಖ್ಯಾತ ಮತದಾರರನ್ನು ತಮ್ಮತ್ತ ಸೆಳೆಯಲು ಏನು ಮಾಡಬೇಕು? ಎಂಬುದರ ಕುರಿತಂತೆ ಹೊಸ ತಂತ್ರಗಳನ್ನು ಹೆಣೆಯಲು ನಾಯಕರು ವೇದಿಕೆ ಸೃಷ್ಟಿ ಮಾಡಿಕೊಳ್ಳುತ್ತಿದ್ದಾರೆ.

ಕಳೆದ ಚುನಾವಣೆ ಬಳಿಕ ಮೈತ್ರಿ ಸರ್ಕಾರ
2018ರ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷವೂ ಬಹುಮತ ಪಡೆಯದ ಕಾರಣ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದರು. ಅವತ್ತು ಕಾಂಗ್ರೆಸ್ ನಾಯಕರು ಬಿಜೆಪಿ ಅಧಿಕಾರಕ್ಕೆ ಬರಲೇಬಾರದು ಎಂಬ ಉದ್ದೇಶದಿಂದ ಜೆಡಿಎಸ್ ನಾಯಕರ ಮನೆ ಬಾಗಿಲಿಗೆ ಹೋಗಿ ಸರ್ಕಾರ ರಚಿಸುವ ತೀರ್ಮಾನ ಮಾಡಿದ್ದರಲ್ಲದೆ, ಎಚ್. ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲಿ ತಾವು ಬೆಂಬಲ ನೀಡುವುದಾಗಿ ಘೋಷಿಸಿದ್ದರು. ಆದರೆ ಮುಂದಿನ ದಿನಗಳಲ್ಲಿ ಮೈತ್ರಿ ಸರ್ಕಾರ ಹೇಗೆ? ಪತನಗೊಂಡು ಬಿಜೆಪಿ ಅಧಿಕಾರಕ್ಕೆ ಬಂದಿತು ಎಂಬುದು ಎಲ್ಲರಿಗೂ ತಿಳಿದಿದೆ.

ಅಲ್ಪಸಂಖ್ಯಾತರ ಓಲೈಸಲು ಹೋರಾಟ
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಆಸ್ತಿತ್ವಕ್ಕೆ ಬಂದಾಗ ಬಿಜೆಪಿಯನ್ನು ವಿರೋಧಿಸುವ ಎಲ್ಲರಿಗೂ ಸಂತಸವಾಗಿತ್ತು. ಆದರೆ ಆ ಸರ್ಕಾರ ಏನಾಯಿತು ಎಂಬುದು ನಮ್ಮ ಕಣ್ಣ ಮುಂದೆಯೇ ಇದೆ. ಯಾವಾಗ ಸಮ್ಮಿಶ್ರ ಸರ್ಕಾರ ಬಿದ್ದು ಹೋಯಿತೋ ಆ ನಂತರ ದೋಸ್ತಿಯಾಗಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಬದ್ಧ ವೈರಿಗಳಾದರೂ. ಇವತ್ತಿಗೂ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ವೈರತ್ವ ಇದೆ ಎನ್ನುವುದಕ್ಕಿಂತಲೂ ಸಿದ್ದರಾಮಯ್ಯ ಮತ್ತು ಎಚ್. ಡಿ. ಕುಮಾರಸ್ವಾಮಿ ನಡುವಿನ ದ್ವೇಷ ಎರಡು ಪಕ್ಷಗಳು ಹೊಂದಾಣಿಕೆಯಿಂದ ರಾಜಕೀಯ ಮಾಡದಂತೆ ತಡೆಯುತ್ತಿದೆ.
ಎರಡು ನಾಯಕರು ಟ್ವೀಟ್ ವಾರ್ನಲ್ಲಿಯೇ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ. ಇದು ಮುಂದೆ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಅತಿರೇಖಕ್ಕೆ ಹೋದರೂ ಅಚ್ಚರಿಪಡಬೇಕಾಗಿಲ್ಲ. ಇಬ್ಬರು ನಾಯಕರು ಅಲ್ಪಸಂಖ್ಯಾತ ಮತಗಳನ್ನು ಹೇಗೆ ಪಡೆದುಕೊಳ್ಳಬಹುದು? ಎಂಬುದರ ಬಗ್ಗೆಯೇ ಹಗಲಿರುಳು ತಂತ್ರ ಹೆಣೆಯುತ್ತಾ ಒಬ್ಬರ ಮೇಲೆ ಒಬ್ಬರು ಹರಿಹಾಯುತ್ತಾ ಜತೆಗೆ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳನ್ನು ದ್ವೇಷಿಸುತ್ತಾ ಮತಬ್ಯಾಂಕ್ ಗಟ್ಟಿ ಮಾಡಿಕೊಳ್ಳುವತ್ತ ದೃಷ್ಟಿ ನೆಟ್ಟಿದ್ದಾರೆ.

ಅಲ್ಪಸಂಖ್ಯಾತ ಮತಗಳಿಗೆ ಕಣ್ಣಿಟ್ಟ ಜೆಡಿಎಸ್
ಈ ನಡುವೆ ಹಿಜಾಬ್, ಹಲಾಲ್ ವಿಚಾರಗಳು ಮುನ್ನಲೆಗೆ ಬಂದಾಗ ಮೊದಲು ಹಿಂದೂ ಪರ ಸಂಘಟನೆಗಳ ವಿರುದ್ಧ ತಿರುಗಿ ಬಿದ್ದಿದ್ದು ಎಚ್. ಡಿ. ಕುಮಾರಸ್ವಾಮಿ. ಹಿಂದೂಪರ ಸಂಘಟನೆಗಳನ್ನು ಹಿಗ್ಗಾಮುಗ್ಗಾ ಜಾಡಿಸಿದರು. ಯಾವಾಗ ಕುಮಾರಸ್ವಾಮಿ ಹಿಂದೂಪರ ಸಂಘಟನೆಗಳ ವಿರುದ್ಧ ಮಾತನಾಡಲು ಶುರು ಮಾಡಿದರೋ ಸಿದ್ದರಾಮಯ್ಯ ತಮ್ಮ ವರಸೆ ಆರಂಭಿಸಿದರು. ಈ ನಡುವೆ ಕುಮಾರಸ್ವಾಮಿ ಮುಂದಿನ ವಿಧಾನಸಭಾ ಚುನಾವಣೆಯನ್ನು ಮುಂದಿಟ್ಟುಕೊಂಡು ಅಲ್ಪ ಸಂಖ್ಯಾತ ಮತಗಳನ್ನು ಕಾಂಗ್ರೆಸ್ನಿಂದ ಕಸಿದುಕೊಳ್ಳಲು ಮತ್ತು ಸಿದ್ದರಾಮಯ್ಯಗೆ ಟಕ್ಕರ್ ಕೊಡಲೆಂದೇ ಕಾಂಗ್ರೆಸ್ ನಲ್ಲಿದ್ದ ಸಿ. ಎಂ. ಇಬ್ರಾಹಿಂರನ್ನು ಜೆಡಿಎಸ್ಗೆ ಕರೆ ತಂದು ಅಧ್ಯಕ್ಷ ಸ್ಥಾನ ನೀಡಿದ್ದಾರೆ. ಆ ಮೂಲಕ ಅಲ್ಪ ಸಂಖ್ಯಾತ ಮತಗಳನ್ನು ಸೆಳೆಯುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.
ಇದೀಗ ಕುಮಾರಸ್ವಾಮಿಗೆ ಟಕ್ಕರ್ ಕೊಡುವಂತೆ ಸಿದ್ದರಾಮಯ್ಯ ರಾಜ್ಯಸಭೆಗೆ ಕಾಂಗ್ರೆಸ್ನಿಂದ ಮನ್ಸೂರ್ ಖಾನ್ರನ್ನು ಕಣಕ್ಕಿಳಿಸಿದ್ದಾರೆ. ಇದೀಗ ಜೆಡಿಎಸ್ ಅಡಕತ್ತರಿಯಲ್ಲಿ ಸಿಲುಕುವಂತಾಗಿದೆ. ಜೆಡಿಎಸ್ ಕುಪೇಂದ್ರ ರೆಡ್ಡಿಯನ್ನು ಕಣಕ್ಕಿಳಿಸಿದ್ದು, ಹೆಚ್ಚುವರಿ ಅಭ್ಯರ್ಥಿಯಾಗಿ ಒಬ್ಬರನ್ನಷ್ಟೆ ಗೆಲ್ಲಿಸಿಕೊಳ್ಳಲು ಅವಕಾಶವಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಈಗ ಸಂಕಷ್ಟಕ್ಕೆ ಸಿಕ್ಕಿ ಬಿದ್ದಿದ್ದಾರೆ.

ಜೆಡಿಎಸ್ ಕಾಂಗ್ರೆಸ್ ಕಿತ್ತಾಟದಿಂದ ಲಾಭ ಯಾರಿಗೆ
ಒಂದು ವೇಳೆ ಜೆಡಿಎಸ್ ರಾಜ್ಯಸಭೆಯಲ್ಲಿ ಮನ್ಸೂರ್ ಖಾನ್ ಬೆಂಬಲಿಸದೆ ಹೋದರೆ ಅದು ಮುಂದಿನ ಚುನಾವಣೆಗೆ ಸಿದ್ದರಾಮಯ್ಯಗೆ ಜೆಡಿಎಸ್ನ ಹಣಿಯಲು ಅಸ್ತ್ರವಾಗುತ್ತದೆ. ಜೆಡಿಎಸ್ ಅಲ್ಪಸಂಖ್ಯಾತರ ಪರ ಎಂಬುದು ಬೋಗಸ್. ಹಾಗೊಂದು ವೇಳೆ ಅವರಿಗೆ ನಿಜವಾದ ಪ್ರೀತಿ ಇದ್ದಿದ್ದರೆ ಮನ್ಸೂರ್ ಖಾನ್ ಬೆಂಬಲಿಸುತ್ತಿದ್ದರು ಎಂಬ ಹೇಳಿಕೆಗಳ ಮೂಲಕ ಜೆಡಿಎಸ್ ಅನ್ನು ಜರೆಯ ಬಹುದು ಮತ್ತು ಅಲ್ಪ ಸಂಖ್ಯಾತರು ಜೆಡಿಎಸ್ ಅನ್ನು ನಂಬದಂತೆ ಮಾಡಬಹುದು ಎಂಬುದು ಸಿದ್ದರಾಮಯ್ಯ ಲೆಕ್ಕಾಚಾರವಾಗಿದೆ.
ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ ಅಲ್ಪಸಂಖ್ಯಾತ ಮತಗಳು ವಿಭಜನೆಯಾಗುವ ಸಾಧ್ಯತೆಗಳಿವೆ. ಒಂದು ವೇಳೆ ಮತಗಳು ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಹಂಚಿ ಹೋದರೆ ಅದರ ಲಾಭ ಬಿಜೆಪಿಗಾಗುತ್ತದೆ. ಹೀಗಾಗಿ ಬಿಜೆಪಿ ಕೂಡ ಕಾಂಗ್ರೆಸ್ ಮತ್ತು ಜೆಡಿಎಸ್ನ ಕಿತ್ತಾಟದ ಲಾಭ ಪಡೆಯಲು ತಯಾರಿ ನಡೆಸಿದೆ. ಮುಂದೇನಾಗುತ್ತದೆಯೋ? ಎಂಬುದನ್ನು ಮಾತ್ರ ಕಾಲವೇ ಹೇಳಬೇಕಾಗುತ್ತದೆ.












Click it and Unblock the Notifications