Basavaraja Bommai: ಎಸ್ಸಿ ಹಾಗೂ ಎಸ್ಟಿಗೆ ಮೀಸಲಿಟ್ಟ ಹಣ ಲೂಟಿ: ಕಾಂಗ್ರೆಸ್ ವಿರುದ್ಧ ಬೊಮ್ಮಾಯಿ ಆರೋಪ
ಶಿಗ್ಗಾವಿ ಜುಲೈ 6: ಮಾಜಿ ಸಚಿವ ಬಸವರಾಜ್ ಬೊಮ್ಮಾಯಿ ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಎಸ್ಸಿ ಹಾಗೂ ಎಸ್ಟಿಗೆ ಮೀಸಲಿಟ್ಟಿದ್ದ 14,000 ಕೋಟಿ ಹಣ ರಾಜ್ಯ ಸರ್ಕಾರದಿಂದ ದುರ್ಬಳಕೆ ಮಾಡಲಾಗಿದೆ ಎಂದು ಬಸವರಾಜ್ ಬೊಮ್ಮಾಯಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಇಂದು ಶಿಗ್ಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಸವರಾಜ್ ಬೊಮ್ಮಾಯಿ ಅವರು, 'ಸಿಗ್ಗಾವಿ ಉಪಚುನಾವಣೆ ವಿಚಾರ ಅಶೋಕ ಅವರ ನೇತೃತ್ವದಲ್ಲಿ ಸಮಿತಿ ಮಾಡಿದ್ದೇವೆ. ಪಕ್ಷದಿಂದ ಸರ್ವೆ ಮಾಡಿಸುತ್ತಿದ್ದೇವೆ. ಶಿಗ್ಗಾವಿಯಲ್ಲಿ ಪೋಸ್ಟರ್ ಭರಾಟೆ ನಡೆಯುವುದಿಲ್ಲ' ಎಂದು ತಿಳಿಸಿದರು.

ನಾನು ರಾಜಕೀಯವಾಗಿ ಬೆಳೆಯಲು ಶಿಗ್ಗಾವಿ ಜನರ ಆಶೀರ್ವಾದ ಕಾರಣ, ಜುಲೈ 12ರಿಂದ ಒಂದುವರೆ ತಿಂಗಳುಗಳ ಕಾಲ ಕ್ಷೇತ್ರದಲ್ಲಿ ಧನ್ಯವಾದ ಯಾತ್ರೆ ಆರಂಭ ಮಾಡುತ್ತೇನೆ ಎಂದು ಸಂಸದ, ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಶನಿವಾರ ಹೇಳಿಕೆ ನೀಡಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಅವರು ಗಂಭೀರ ಆರೋಪ ಮಾಡಿದ್ದಾರೆ. ಎಸ್ಸಿ, ಎಸ್ಟಿಗೆ ಮೀಸಲಿಟ್ಟಿರುವ ಹಣವನ್ನು ಚುನಾವಣೆಗಾಗಿ ಜಾರಿಗೆ ತಂದ ಯೋಜನೆಗಳಿಗೆ ದುರ್ಬಳಕೆ ಮಾಡಿಕೊಂಡ ಕಾಂಗ್ರೆಸ್ ಆ ಸಮುದಾಯಗಳಿಗೆ ಮೋಸ ಮಾಡುತ್ತಿದೆ. ರಾಜ್ಯ ಸರ್ಕಾರ ದಿವಾಳಿ ಆಗಿರೋದನ್ನು ಪ್ರತಿ ಹೆಜ್ಜೆಯಲ್ಲೂ ಪ್ರದರ್ಶನ ಮಾಡುತ್ತಿದೆ.
ರಾಜ್ಯದಲ್ಲಿ ಬೆಲೆ ಏರಿಕೆಯಿಂದ ಜನ ತತ್ತರಿಸಿದ್ದಾರೆ. ತರಕಾರಿ, ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಾಗಿದೆ. ಇದರ ಮೂಲಕ ಗ್ಯಾರಂಟಿ ಯೋಜನೆಗಳಿಗೆ ಅನುದಾನ ಒದಗಿಸುತ್ತಿದೆ. ಎಸ್ಸಿ ಹಾಗೂ ಎಸ್ಟಿಗೆ ಮೀಸಲಿಟ್ಟಿದ್ದ 14,000 ಕೋಟಿ ಹಣ ಗ್ಯಾರಂಟಿಗಳಿಗೆ ಹೋಗುತ್ತಿದೆ ಎಂದು ಬೊಮ್ಮಾಯಿ ಆರೋಪಿಸಿದ್ದಾರೆ.
ಕಾಂಗ್ರೆಸ್ ನವರು ಗ್ಯಾರಂಟಿ ಕೊಟ್ಟು ಜನರ ಮುಂದೆ ಒಳ್ಳೆಯವರಾಗಲು ಹೊರಟಿದ್ದಾರೆ. ಆದರೆ ವೋಟಿಗಾಗಿ ಮಾಡಿದ ಯೋಜನೆಗಳಿಗೆ ಆ ಸಮುದಾಯಕ್ಕೆ ಸೇರಬೇಕಿರುವ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಹಣ ಇಲ್ಲ ಅಂದರೆ ಗ್ಯಾರಂಟಿ ಯಾಕೆ ಕೊಡಬೇಕು? ಇದು ಕಾನೂನು ಉಲ್ಲಂಘನೆಯಾಗಿದೆ ಎಂದು ಆಕ್ರೋಶಗೊಂಡರು.
ಡೆಂಗ್ಯೂ ಪ್ರಕರಣದಲ್ಲಿ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ. ಮಂತ್ರಿಗಳು ಕೇವಲ ಸಭೆ ಮಾಡುತ್ತಿದ್ದಾರೆ. ಚಿಕಿತ್ಸೆ ಸಿಗದಿದ್ದರೆ ಸಾವು ನೋವುಗಳಾಗುತ್ತದೆ. ಜನ ಪರದಾಡುತ್ತಿದ್ದಾರೆ. ಆರೋಗ್ಯ ಇಲಾಕೆ ಸಂಪೂರ್ಣ ವಿಫಲವಾಗಿದ್ದು, ಡಿಎಸ್ಓ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು.












Click it and Unblock the Notifications