ಚೆನ್ನೈನಲ್ಲಿ ಮೋದಿ ಕಾರ್ಯಕ್ರಮ: ನಮ್ಮವರು ಇವರಿಂದ ಕಲಿಯುವುದು ಯಾವಾಗ?
ಕನ್ನಡಕ್ಕಾಗಿ ಕೈ ಎತ್ತು, ನಿನ್ನ ಕೈ ಕಲ್ಪವೃಕ್ಷವಾಗುತ್ತೆ ಎನ್ನುವ ಮಾತಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಪ್ರಮುಖವಾಗಿ ರಾಜಕೀಯ ನಾಯಕರು ಮತ್ತು ಸರಕಾರೀ ಅಧಿಕಾರಿಗಳು ಕನ್ನಡಕ್ಕಾಗಿ ಕೈ ಎತ್ತುವುದು ಹಾಗಿರಲಿ, ಕನ್ನಡಕ್ಕೆ ಅವಮಾನವಾದರೂ ಸುಮ್ಮನಿರುತ್ತಿದ್ದಾರೆ.
ತ್ರಿಭಾಷಾ ಸೂತ್ರದಡಿಯಲ್ಲಿ ನಮ್ಮ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿದ್ದರೂ, ಎನ್ಡಿಎ ಮೈತ್ರಿಕೂಟ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ, ಸ್ಥಳೀಯ ಭಾಷೆಗಳನ್ನು ಕಡೆಗಣಿಸುವ ಕೆಲಸ ನಡೆಯುತ್ತಲೇ ಇದೆ.
ಹಿಂದಿಯನ್ನು ಭಾರತದ ರಾಷ್ಟ್ರಭಾಷೆ ಎಂದು ಬಿಂಬಿಸುವ ಕೆಲಸವನ್ನು ಮತ್ತು ಹಿಂದಿ ಹೇರಿಕೆಯನ್ನು ವ್ಯವಸ್ಥಿತವಾಗಿ ಮಾಡುತ್ತಲೇ ಬರುತ್ತಿರುವ ಕೇಂದ್ರ ಸರಕಾರ, ಸ್ಥಳೀಯರ ಯಾವ ವಿರೋಧಕ್ಕೂ ತಲೆಕೆಡಿಸಿಕೊಳ್ಳದೇ ಇರುವುದು ದುರಂತವೇ ಸರಿ.
ಅದರಲ್ಲೂ ಕರ್ನಾಟಕದಲ್ಲಂತೂ ಹಿಂದಿ ಬಳಕೆ ಎಲ್ಲೆ ಮೀರುತ್ತಿದ್ದರೂ, ಕಿಂಚಿತ್ ಭಾಷಾಭಿಮಾನವಿಲ್ಲದೇ ಸರಕಾರ ಕೈಕಟ್ಟಿ ಕೂತಿರುವುದು ವಿಪರ್ಯಾಸ. ಆದರೆ ಪಕ್ಕದ ತಮಿಳುನಾಡಿನಲ್ಲಿ, ತಮಿಳಿಗರ ಭಾಷಾಭಿಮಾನ ಮತ್ತು ಸ್ವಾಭಿಮಾನಕ್ಕೆ ಕನ್ನಡಿ ಹಿಡಿಯುವಂತಹ ಕಾರ್ಯಕ್ರಮವೊಂದು ನಡೆದಿದೆ. ಅದೂ, ಪ್ರಧಾನಿ ಮೋದಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ.

ಹಿಂದಿ ಬಿಡಿ, ಇಂಗ್ಲಿಷ್ ನಲ್ಲೂ ಒಂದು ಅಕ್ಷರವಿಲ್ಲದೇ ಎಲ್ಲಾ ತಮಿಳು
ವಿವಿಧ ಅಭಿವೃದ್ದಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಮೋದಿ, ತಮಿಳುನಾಡಿಗೆ ಆಗಮಿಸಿದ್ದರು. ಆ ಕಾರ್ಯಕ್ರಮದ ಪೋಸ್ಟರ್ ನಲ್ಲಿ ಹಿಂದಿ ಬಿಡಿ, ಇಂಗ್ಲಿಷ್ ನಲ್ಲೂ ಒಂದು ಅಕ್ಷರವಿಲ್ಲದೇ ಎಲ್ಲಾ ತಮಿಳಿನಲ್ಲಿ ಬರೆಯಲಾಗಿತ್ತು. ಅದು ಕೇಂದ್ರ ಸರಕಾರದ ಸಹಭಾಗಿತ್ವದ ಅಭಿವೃದ್ದಿ ಯೋಜನೆಯ ಕಾರ್ಯಕ್ರಮಗಳು ಎನ್ನುವುದು ಗಮನಿಸಬೇಕಾದ ವಿಚಾರ.

ಭದ್ರಾವತಿಯಲ್ಲಿ ನಡೆದ ಕಾರ್ಯಕ್ರಮ
ಆದರೆ ಇತ್ತ ನಮ್ಮ ಕರ್ನಾಟಕದಲ್ಲಿ ಇದಕ್ಕೆ ತದ್ವಿರುದ್ದವಾದ ಕಾರ್ಯಕ್ರಮವೊಂದು ನಡೆದದ್ದು ಇನ್ನೂ ಕನ್ನಡಿಗರ ಮನಸ್ಸಿನಿಂದ ಮಾಸಿಲ್ಲ. ಭದ್ರಾವತಿಯಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ ಭಾಗವಹಿಸಿದ್ದ ಕ್ಷಿಪ್ರ ಕಾರ್ಯಾಚರಣೆ ಪಡೆಯ 97ನೇ ಬೆಟಾಲಿನ್ ಗೆ ಶಂಕುಸ್ಥಾಪನೆ ಕಾರ್ಯಕ್ರಮದ ಅಡಿಗಲ್ಲಿನಲ್ಲಿ ದುರ್ಬಿನ್ ಹಾಕಿ ಹುಡುಕಿದರೂ ಒಂದಕ್ಷರ ಕನ್ನಡವಿರಲಿಲ್ಲ. ಬರೀ, ಇಂಗ್ಲಿಷ್ ಮತ್ತು ಹಿಂದಿ ಮಯವಾಗಿತ್ತು.

ಏರೋ ಇಂಡಿಯಾ 2011ರ ಕಾರ್ಯಕ್ರಮ
ಈ ಘಟನೆ ನಡೆದ ಮೇಲಾದರೂ ರಾಜ್ಯ ಸರಕಾರ ಎಚ್ಚೆತ್ತುಕೊಂಡಿತೇ, ಅದೂ ಇಲ್ಲ.. ಏರೋ ಇಂಡಿಯಾ 2011ರ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಕನ್ನಡವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿತ್ತು. ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಿಎಂ ಯಡಿಯೂರಪ್ಪ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆ ಪೋಸ್ಟರ್ ನಲ್ಲೂ ಕನ್ನಡಕ್ಕೆ ಸ್ಥಾನವಿರಲಿಲ್ಲ.
Recommended Video

ಕೇಂದ್ರದ ಉತ್ತರ
ಈ ರೀತಿಯ ಹತ್ತು ಹಲವು ಘಟನೆಗಳು ಬಿಜೆಪಿ ಸರಕಾರಕ್ಕೆ ಬಂದಾಗಿನಿಂದ ಹೆಚ್ಚಾಗುತ್ತಿರುವುದು ಅತ್ಯಂತ ಸ್ಪಷ್ಟ. ಕೇಂದ್ರ ಸರಕಾರದ ಕಾರ್ಯಕ್ರಮಗಳಿಗೆ ಸ್ಥಳೀಯ ಭಾಷೆ ಕಡ್ಡಾಯವಲ್ಲ ಎನ್ನುವ ಉಡಾಫೆಯ ಉತ್ತರ ಕೇಂದ್ರದಿಂದ ಬರುತ್ತಿದೆ. ಹಾಗಿದ್ದಲ್ಲಿ ತ್ರಿಭಾಷಾ ಸೂತ್ರದ ಕಾನೂನಿಗೆ ಬೆಲೆಯಿಲ್ಲವೇ ಎಂದು ಕೇಳುವ ಧೈರ್ಯ ನಮ್ಮ ಸರಕಾರಕ್ಕಿಲ್ಲ. ಇದು ಹೀಗೇ ಮುಂದುವರಿದಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗದೇ ಇರುವುದೇ? ಇವೆಲ್ಲಕ್ಕಿಂತ ಹೆಚ್ಚಾಗಿ ನಮ್ಮವರು ಪಕ್ಕದ ರಾಜ್ಯದಿಂದ ಕಲಿಯುವುದು ಯಾವಾಗ? ಮಾತೃಭಾಷೆಗೆ ಬೆಲೆ ಕೊಡದವರು ಇದ್ದರೆಷ್ಟು..ಬಿಟ್ಟರೆಷ್ಟು..












Click it and Unblock the Notifications