ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಸಿಎಂ ಮೇಲೆ ದೂರುಗಳ ಸುರಿಮಳೆ
Recommended Video
ಬೆಂಗಳೂರು, ಸೆಪ್ಟೆಂಬರ್ 25: ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವು ಇಂದು ಶಾಸಕಾಂಗ ಸಭೆ ನಡೆಸಿದ್ದು, ಸಭೆಯಲ್ಲಿ ಸಿಎಂ ಮೇಲೆ ದೂರುಗಳ ಸುಳಿಮಳೆಯೇ ಸುರಿದಿದೆ.
ಸಭೆಯಲ್ಲಿ ಬಹುತೇಕ ಶಾಸಕರು, ಕಾಂಗ್ರೆಸ್ ಶಾಸಕರಿಗೆ ಸರ್ಕಾರದಲ್ಲಿ ಸೂಕ್ತ 'ಗೌರವ' ದೊರೆಯುತ್ತಿಲ್ಲ ಎಂದು ಆರೋಪಿಸಿದರು. ಜೆಡಿಎಸ್ ಶಾಸಕರ, ಮುಖಂಡರ ಕೆಲಸಗಳು ಚಕಚಕನೆ ಆಗುತ್ತವೆ ಆದರೆ ಕಾಂಗ್ರೆಸ್ ಶಾಸಕರನ್ನು ಮೂಲೆಗುಂಪು ಮಾಡಲಾಗಿದೆ ಎಂದು ಹಲವರು ಆರೋಪಿಸಿದರು.
ಮೈತ್ರಿ ಸರ್ಕಾರದ ನಾಯಕರಲ್ಲೇ ನಡೆಯುತ್ತಿದೆ ಮುಸುಕಿನ ಗುದ್ದಾಟ!
ಶಾಸಕ ಎಸ್.ಟಿ.ಸೋಮಶೇಖರ್ ಮಾತನಾಡಿ, 'ನಮ್ಮ ಕ್ಷೇತ್ರದಲ್ಲಿ ಗಣಿ ಸಂಬಂಧಿಸಿದಂತೆ ಸಮಸ್ಯೆಯೊಂದನ್ನು ಇತ್ಯರ್ಥ ಪಡಿಸಿರೆಂದು ಸಿಎಂ ಬಳಿ ಕೇಳಿದ್ದೆ ಆದರೆ ಅದು ಆಗಲಿಲ್ಲ, ಆದರೆ ರಾಮಗರದಲ್ಲಿ ಮಾತ್ರ ಎಲ್ಲವೂ ಸುಸೂತ್ರವಾಗಿ ನಡೆಯುತ್ತದೆ, ಸಿಎಂ ಬೇಕೆಂದೆ ಮಲತಾಯಿ ಧೋರಣೆ ಮಾಡುತ್ತಿದ್ದಾರೆ ಎಂದು ಅಬ್ಬರಿಸಿದರು.
ಸಿದ್ದರಾಮಯ್ಯ ಭೇಟಿ ಮಾಡಿದ ಶಾಸಕ ಎಂ.ಟಿ.ಬಿ.ನಾಗರಾಜ್
ನಮ್ಮ ಬೆಂಬಲಿಗರಿಗೆ ಏನು ಹೇಳುವುದು?
ಕ್ಷೇತ್ರದಲ್ಲಿ ಇತ್ತೀಚೆಗೆ ಗಲಾಟೆ ನಡೆಯಿತು, ಸಿಎಂ ನೇರವಾಗಿ ಉನ್ನತ ಪೊಲೀಸ್ ಅಧಿಕಾರಿಗಳ ಬಳಿ ಮಾತನಾಡಿ ಜೆಡಿಎಸ್ ಪರವಾಗಿ ವಕಾಲತ್ತು ವಹಿಸಿದರು, ನನ್ನನ್ನು ನಂಬಿದ್ದ ನನ್ನ ಬೆಂಬಲಿಗರಿಗೆ ಏನಾಗಬೇಕು? ಎಂದು ಅವರು ಕೇಳಿದ್ದಾರೆ. ಪೊಲೀಸ್ ಠಾಣೆಗಳಲ್ಲೂ ಜೆಡಿಎಸ್ನವರದ್ದೇ 'ನಡೆಯುತ್ತದೆ' ಕಾಂಗ್ರೆಸ್ನವರು ಲೆಕ್ಕಕ್ಕಿಲ್ಲದಂತಾಗಿದೆ ಎಂದು ದೂರಿದ್ದಾರೆ.
ಪರಮೇಶ್ವರ್ ವಿರುದ್ಧವೂ ಅಸಮಾಧಾನ
ಸಭೆಯಲ್ಲಿ ಡಿಸಿಎಂ ಪರಮೇಶ್ವರ್ ಅವರ ಮೇಲೆಯೂ ಕೆಲವರು ಅಸಮಾಧಾನ ಹೊರಹಾಕಿದರು. ಸರ್ಕಾರದಲ್ಲಿ ಕಾಂಗ್ರೆಸ್ನ ಪ್ರತಿನಿಧಿ ಆಗಿರುವ ಪರಮೇಶ್ವರ್ ಅವರು ಸಿಎಂ ತಾಳಕ್ಕೆ ಕುಣಿಯುತ್ತಿದ್ದಾರೆ ಎಂದು ಕೆಲವರು ದೂರಿದರು. ಈ ಬಗ್ಗೆ ಸಿಎಂ ಬಳಿ ಮಾತನಾಡುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದರು.
ರಫೆಲ್ ಬಗ್ಗೆ ಚರ್ಚೆ ಹುಟ್ಟುಹಾಕಿ
ಕಾಂಗ್ರೆಸ್ ಹೈಕಮಾಂಡ್ ರಾಜಕೀಯವಾಗಿ ತಳೆಯುತ್ತಿರುವ ನಿಲುವುಗಳ ಬಗ್ಗೆ ಸದಾ ತಿಳಿದುಕೊಂಡಿರಬೇಕು, ಪ್ರಚಲಿತ ರಾಜಕೀಯ ವಿದ್ಯಮಾನಗಳ ಬಗ್ಗೆ ಅರಿವಿರಲಿ ಎಂದ ಸಿದ್ದರಾಮಯ್ಯ ಅವರು, ರಫೆಲ್ ಹಗರಣದ ಬಗ್ಗೆ ರಾಜ್ಯದಲ್ಲಿಯೂ ಚರ್ಚೆಗಳನ್ನು ಹುಟ್ಟುಹಾಕಲು ಶಾಸಕರಿಗೆ ಸಲಹೆ ನೀಡಿದರು.
ಬಿಜೆಪಿ ಆಮೀಷಕ್ಕೆ ಬಲಿ ಆಗಬೇಡಿ
ಬಿಜೆಪಿ ಕೋಮುವಾದಿ ಪಕ್ಷವಾಗಿದ್ದು, ಅವರ ಆಮೀಷಗಳಿಗೆ ಯಾರೂ ಸಹ ಬಲಿಯಾಗಬಾರದು ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು. ಮೈತ್ರಿ ಸರ್ಕಾರದಲ್ಲಿ ಆಗುತ್ತಿರುವ ಹಿನ್ನಡೆಗಳನ್ನು ಘನ ಉದ್ದೇಶಕ್ಕಾಗಿ ಸಹಿಸಿಕೊಳ್ಳಲು ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ಕೊನೆಯ ಸಾಲಿನಲ್ಲಿ ಕೂತಿದ್ದ ರಮೇಶ್ ಜಾರಕಿಹೊಳಿ
ಶಾಸಕಾಂಗ ಸಭೆಗೆ ಬಂದಿದ್ದ ರಮೇಶ್ ಜಾರಕಿಹೊಳಿ ಅವರು ಕೊನೆಯ ಸಾಲಿನಲ್ಲಿ ಕೂತಿದ್ದರು. ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಜೆಡಿಎಸ್ ಮೇಲೆ ದೂರುಗಳನ್ನು ಹೇಳಿದರು. ಎಂಟಿಬಿ ನಾಗರಾಜು ಏನೂ ಮಾತನಾಡಿಲ್ಲ ಎನ್ನಲಾಗಿದೆ. ರಾಮಲಿಂಗಾರೆಡ್ಡಿ ಮಾತ್ರ ಸಭೆಯ ನಡುವೆ ಹೊರನಡೆದರು.