ದೆಹಲಿಯಲ್ಲಿ ಸಿಕ್ಕ ಹಣ ಡಿಕೆಶಿಗೆ ಸೇರಿದ್ದು : ಹೆಚ್ಚುವರಿ ಸಾಲಿಟರ್ ಜನರಲ್
ಬೆಂಗಳೂರು, ಜೂನ್ 03 : ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಇತರರ ವಿರುದ್ಧ ಜಾರಿ ನಿರ್ದೇಶನಾಲಯ ದಾಖಲು ಮಾಡಿರುವ ದೂರು ಕಾನೂನು ಬದ್ಧವಾಗಿದೆ ಎಂದು ಹೆಚ್ಚುವರಿ ಸಾಲಿಟರ್ ಜನರಲ್ ಪ್ರಭುಲಿಂಗ ಕೆ.ನಾವಡಗಿ ಹೇಳಿದರು.
ಬೆಂಗಳೂರು ಮತ್ತು ನವದೆಹಲಿಯಲ್ಲಿ 2017ರಲ್ಲಿ ನಡೆದ ಐಟಿ ದಾಳಿ ಕುರಿತು ಸಚಿವ ಡಿ.ಕೆ.ಶಿವಕುಮಾರ್ ಮತ್ತು ಇತರರ ವಿರುದ್ಧ ಇಡಿ ದೂರು ದಾಖಲು ಮಾಡಿಕೊಂಡಿದೆ. ಪ್ರಕರಣದಿಂದ ನಮ್ಮನ್ನು ಕೈ ಬಿಡಬೇಕು ಎಂದು ಕೋರಿ ಡಿ.ಕೆ.ಶಿವಕುಮಾರ್ ಮತ್ತು ಇತರರು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಸೋಮವಾರ ಅರ್ಜಿಯ ವಿಚಾರಣೆಯನ್ನು ನ್ಯಾಯಾಧೀಶ ರಾಮಚಂದ್ರ ಡಿ.ಹುದ್ದಾರ ಅವರು ನಡೆಸಿದರು. ಜಾರಿ ನಿರ್ದೇಶನಾಲಯದ ಪರವಾಗಿ ಹೆಚ್ಚುವರಿ ಸಾಲಿಟರ್ ಜನರಲ್ ಪ್ರಭುಲಿಂಗ ಕೆ.ನಾವಡಗಿ ವಾದ ಮಂಡನೆ ಮಾಡಿದರು.
ಆರೋಪಿಗಳು ಆದಾಯ ತೆರಿಗೆ ಕಾಯ್ದೆ 1961 ರ ಕಲಂ 276 ಸಿ (1) ಮತ್ತು 277ರ ಪ್ರಕಾರ ದಂಡನೀಯ ಅಪರಾಧ ಎಸಗಿದ್ದಾರೆ. ಹವಾಲಾ ಮೂಲಕ ಬೆಂಗಳೂರಿನಿಂದ ನವದೆಹಲಿಯ ಸಫ್ದರ್ ಜಂಗ್ ಎನ್ಕ್ಲೇವ್ಗೆ ಹಣ ಸಾಗಣೆ ಮಾಡಲಾಗಿದೆ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.

ದೆಹಲಿ ನಿವಾಸದಲ್ಲಿ ಸಿಕ್ಕ ಹಣ ಡಿ.ಕೆ.ಶಿವಕುಮಾರ್ ಅವರಿಗೆ ಸೇರಿದ್ದು, ಹಣ ಸಾಗಣೆಗೆ ಕೆ.ಜಿ.ಎಂದು ಕೋಡ್ ವರ್ಡ್ ಬಳಕೆ ಮಾಡಿದ್ದಾರೆ. ಜಾರಿ ನಿರ್ದೇಶನಾಲಯ ದಾಖಲು ಮಾಡಿರುವ ದೂರು ಕಾನೂನು ಬದ್ಧವಾಗಿದೆ ಎಂದು ವಾದ ಮಂಡಿಸಿದರು.
ದಾಳಿ ವೇಳೆ ಸಚಿವರಿಗೆ ಸೇರಿದ ನಿವಾಸಗಳಲ್ಲಿ ಸಿಕ್ಕಿದ 8.59 ಕೋಟಿಗೂ ಹೆಚ್ಚಿನ ಮೊತ್ತದ ಹಣಕ್ಕೆ ಲೆಕ್ಕ ನೀಡುವಲ್ಲಿ ಆರೋಪಿಗಳು ವಿಫಲರಾಗಿದ್ದಾರೆ. ಎಲ್ಲಾ ಆರೋಪಿಗಳು ಐಪಿಸಿ ಕಲಂ 120 ಬಿ ಅಡಿ ಒಳಸಂಚು ರೂಪಿಸಿದ್ದಾರೆ ಎಂದರು.
ಈ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್, ಎನ್.ರಾಜೇಂದ್ರ ಮತ್ತು ಆಂಜನೇಯ ಹನುಮಂತಯ್ಯ ಅವರು ಪ್ರಕರಣದಿಂದ ನಮ್ಮನ್ನು ಕೈ ಬಿಡಬೇಕು ಎಂದು ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯ ವಿಚಾರಣೆಯನ್ನು ಜೂನ್ 4ಕ್ಕೆ ಮುಂದೂಡಲಾಗಿದೆ.












Click it and Unblock the Notifications