ಶಾಲಾ ಮಕ್ಕಳ ಪೋಷಕರಿಂದ ದೇಣಿಗೆ ಸಂಗ್ರಹ: ಕಾಂಗ್ರೆಸ್ ನಾಯಕರಿಂದ ಆಕ್ರೋಶ
ಬೆಂಗಳೂರು, ಅಕ್ಟೋಬರ್ 21: ಮಕ್ಕಳ ಪೋಷಕರಿಂದ ದೇಣಿಗೆ ರೂಪದಲ್ಲಿ ಪ್ರತಿ ತಿಂಗಳು ₹ 100 ಹಣ ಸಂಗ್ರಹಿಸಲು ಎಸ್ಡಿಎಂಸಿಗೆ ಅನುಮತಿ ನೀಡಿ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ. ಸರ್ಕಾರದ ಈ ನಿರ್ಧಾರದ ವಿರುದ್ಧ ವಿರೋಧ ಪಕ್ಷದ ನಾಯಕರು ಕಿಡಿ ಕಾರಿದ್ದಾರೆ.
ಈ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, 'ಖರ್ಚು ವೆಚ್ಚಗಳನ್ನು ಸರಿದೂಗಿಸಲು ಸರ್ಕಾರಿ ಶಾಲೆ ಮಕ್ಕಳು ಪ್ರತಿ ತಿಂಗಳು ಪೋಷಕರಿಂದ ₹100 ಸಂಗ್ರಹಿಸಿ ಶಾಲಾಭಿವೃದ್ಧಿ - ಮೇಲುಸ್ತುವಾರಿ ಸಮಿತಿಗಳಿಗೆ ನೀಡಬೇಕು ಎಂದು ರಾಜ್ಯ ಸರ್ಕಾರ ಹೊರಡಿಸಿರುವ ಸುತ್ತೋಲೆಯು ಅನ್ಯಾಯದ ಪರಮಾವಧಿ. ರಾಜ್ಯ ಬಿಜೆಪಿಗೆ ಸರ್ಕಾರಿ ಶಾಲೆಗಳನ್ನು ನಡೆಸುವ ಯೋಗ್ಯತೆ ಇಲ್ಲ ಎಂಬುದನ್ನು ಈ ನಿರ್ಧಾರ ದೃಢಪಡಿಸಿದೆ' ಎಂದು ವಾಗ್ದಾಳಿ ನಡೆಸಿದ್ದಾರೆ.
'ಕೋವಿಡ್ ನಂತರದ ದಿನಗಳಲ್ಲಿ ರಾಜ್ಯದಲ್ಲಿ ಸಾವಿರಾರು ಸರ್ಕಾರಿ ಶಾಲೆಗಳು ದುಸ್ಥಿತಿಯಲ್ಲಿದ್ದು, ಪೋಷಕರು ಆರ್ಥಿಕ ಸಂಕಷ್ಟದಲ್ಲಿರುವಾಗ ಶಾಲೆಯ ಖರ್ಚು ವೆಚ್ಚಗಳನ್ನು ಅವರ ಮೇಲೆ ಹೊರಿಸುವುದು ಯಾವ ನ್ಯಾಯ? ಸಂವಿಧಾನ ವಿಧಿ 21ಎ ಹಾಗೂ ಶಿಕ್ಷಣದ ಹಕ್ಕಿನ ನಿಯಮಗಳನ್ನೂ ಉಲ್ಲಂಘಿಸಿ ಈ ರೀತಿಯ ಅವೈಜ್ಞಾನಿಕ ನಿರ್ಧಾರ ಹೊರಡಿಸಿರುವುದು ಸರಿಯಲ್ಲ' ಎಂದು ಹೇಳಿದ್ದಾರೆ.
'ಸರ್ಕಾರ ಹೊರಡಿಸಿರುವ ಸುತ್ತೋಲೆಯು ಸರ್ಕಾರಿ ಶಾಲೆಗಳನ್ನು ಶಾಶ್ವತವಾಗಿ ಮುಚ್ಚಿಸುವ ಒಂದು ಹುನ್ನಾರ. ಸರ್ಕಾರಿ ಶಾಲೆ ಮಕ್ಕಳಿಗೆ ಅನ್ಯಾಯವಾಗುವುದನ್ನು ಕಾಂಗ್ರೆಸ್ ಪಕ್ಷವು ಎಂದಿಗೂ ಸಹಿಸುವುದಿಲ್ಲ. 2023ಕ್ಕೆ ಅಧಿಕಾರಕ್ಕೆ ಬಂದನಂತರ ಇಂಥ ಶಿಕ್ಷಣ ವಿರೋಧಿ ನೀತಿಗಳನ್ನು ಹಿಂಪಡೆಯುತ್ತೇವೆ' ಎಂದೂ ಡಿಕೆಶಿ ಭರವಸೆ ನೀಡಿದ್ದಾರೆ.
ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಆಕ್ರೋಶ
'ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಪೋಷಕರಿಂದ ಮಾಸಿಕ ₹100 ದೇಣಿಗೆ ಪಡೆಯಲು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಇದು ಅಸಹ್ಯಕರ ಮತ್ತು ನಾಚಿಕೆಗೇಡು.ಸರ್ಕಾರಿ ಶಾಲೆಯಲ್ಲಿ ಓದುತ್ತಿರುವವರು ಬಹುತೇಕ ಬಡವರ ಮಕ್ಕಳು. ಸರ್ಕಾರ ಅವರಿಂದಲೂ ಪ್ರತಿ ತಿಂಗಳು ದುಡ್ಡು ಪೀಕಲು ಹೊರಟಿರುವುದು ಅಸಹ್ಯವಲ್ಲದೆ ಮತ್ತೇನು' ಎಂದು ಕಾಂಗ್ರೆಸ್ ಶಾಸಕ ದಿನೇಶ್ ಗಂಡೂರಾವ್ ಕೇಳಿದ್ದಾರೆ.
'40 ಪರ್ಸೆಂಟ್ ಕಮೀಷನ್ ತಿಂದು ಕೊಬ್ಬಿದ ಗೂಳಿಗಳಾಗಿರುವ ಈ ಸರ್ಕಾರಕ್ಕೆ ಕಮೀಷನ್ ಹಣ ಸಾಕಾಗಲಿಲ್ಲವೆ? ಈಗ ಬಡ ಮಕ್ಕಳ ಪೋಷಕರ ಹಣಕ್ಕೂ ಕನ್ನ ಹಾಕಿ ಜೇಬು ತುಂಬಿಸಿಕೊಳ್ಳಲು ಈ ಆದೇಶವೆ? ಪೋಷಕರಿಂದಲೇ ಹಣ ಪೀಕುವ ಈ ಸರ್ಕಾರ, ಇನ್ನು ಮಕ್ಕಳಿಗೆ ಶೂ,ಸಾಕ್ಸ್, ಸಮವಸ್ತ್ರ, ಹಾಲು, ಬಿಸಿಯೂಟ ಹಾಗೂ ಪುಸ್ತಕ ಕೊಡುತ್ತಾರಾ? ಇದು ಮಾನಗೆಟ್ಟ ಸರ್ಕಾರವಲ್ಲವೆ ಎಂದು ಪ್ರಶ್ನಿಸಿದ್ದಾರೆ.
'ಬಡ ಮಕ್ಕಳ ಪೋಷಕರಿಂದ ದುಡ್ಡು ತೆಗೆದುಕೊಳ್ಳುವ ಸ್ಥಿತಿಗೆ ಸರ್ಕಾರ ತಲುಪಿದೆ ಎಂದರೆ ಅರ್ಥವೇನು? ಈ ಸರ್ಕಾರಕ್ಕೆ ದರಿದ್ರ ಬಡಿದಿದೆಯೆ? ಉಚಿತ ಹಾಗೂ ಗುಣಮಟ್ಟದ ಶಿಕ್ಷಣ ಕೊಡುವುದು ಸರ್ಕಾರದ ಕರ್ತವ್ಯ. ಆದರೆ ಮರ್ಯಾದೆಯಿಲ್ಲದ ಈ ಸರ್ಕಾರ ಪೋಷಕರಿಂದಲೇ ಹಣದ ವಸೂಲಿಗೆ ಇಳಿದಿದೆ. ಶಾಲೆಗಳಿಗೂ ಅನುದಾನ ಕೊಡದಷ್ಟು ಪಾಪರ್ ಆಗಿದೆಯೇ ಈ ಸರ್ಕಾರ' ಎಂದು ಕೇಳಿದ್ದಾರೆ.
'ಬಡ ಮಕ್ಕಳ ಪೋಷಕರಿಂದ ಪ್ರತಿ ತಿಂಗಳು ₹100ಗೆ ಕೈ ಚಾಚುವ ದೈನೇಸಿ ಸ್ಥಿತಿಗೆ ಈ ಸರ್ಕಾರ ಬಂದಿದೆ. ಈ ಸರ್ಕಾರ ದಿವಾಳಿಯೆದ್ದು ಹೋಗಿರುವ ಸ್ಪಷ್ಟ ಲಕ್ಷಣವಿದು. ಬೊಮ್ಮಾಯಿಯವರೆ ಧಮ್-ತಾಕತ್ತು ಎಂದು ಭಾಷಣ ಬಿಗಿದರೆ ಸಾಲದು. ನಿಮ್ಮ ಧಮ್-ತಾಕತ್ತು ತೋರಿಸಬೇಕಿರುವುದು ಇಂತಹ ವಿಷಯದಲ್ಲಿ. ನಿಮಗೆ ನಿಜಕ್ಕೂ ತಾಕತ್ತಿದ್ದರೆ ಈ ಆದೇಶ ಹಿಂಪಡೆಯಿರಿ' ಎಂದು ದಿನೇಶ್ ಗುಂಡೂರಾವ್ ಒತ್ತಾಯಿಸಿದ್ದಾರೆ.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿ
ಸರ್ಕಾರಿ ಶಾಲೆಯ ಬಡ ಮಕ್ಕಳ ಪೋಷಕರ ಜೇಬಿಗೂ ಕತ್ತರಿ ಹಾಕುತ್ತಿರುವ ಬಿಜೆಪಿ ಸರ್ಕಾರಕ್ಕೆ ಇಂಥಾ ದೈನೇಸಿ ಸ್ಥಿತಿ ಬರಬಾರದಿತ್ತು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.