ಅಶ್ವತ್ಥ ನಾರಾಯಣ-ಎಂಬಿ ಪಾಟೀಲ್ ಭೇಟಿ: ಬಳಿಕ ಮಾತಿನ ಚಾಟಿ!
ಬೆಂಗಳೂರು, ಮೇ 10: ಮಾಗಡಿ ಗಂಡು ಹಾಗೂ ರಾಮನಗರ ಹೆಣ್ಣಿನ ಶೀತಲ ಸಮರ ಮುಂದುವರೆದಿದೆ. ಸಚಿವ ಅಶ್ವತ್ಥ್ ನಾರಾಯಣ್ ತಮ್ಮ ಇಲಾಖೆಯಲ್ಲಿ ನಡೆದಿರುವ ಅಕ್ರಮದ ಬಗ್ಗೆ ಧ್ವನಿಯೆತ್ತದಂತೆ ಮನವೊಲಿಸಲು ಕಾಂಗ್ರೆಸ್ ಶಾಸಕ ಎಂ.ಬಿ. ಪಾಟೀಲ್ ಅವರನ್ನು ಭೇಟಿ ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ಇದಕ್ಕೆ ಟಾಂಗ್ ಕೊಟ್ಟಿರುವ ಅಶ್ವತ್ಥ್ ನಾರಾಯಣ್, ಜೈಲು ಹಕ್ಕಿ ಡಿ.ಕೆ. ಶಿವಕುಮಾರ್ ಗೆ ತಿಹಾರ್ ಜೈಲು ಕಾಯಂ ಆಗಬೇಕಿತ್ತು ಎಂದು ಕಾಲೆಳೆದಿದ್ದಾರೆ.
ಡಿಕೆ ಕೊಟ್ಟ ಟಾಂಗ್:
ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ ಅವರು ತಮ್ಮ ಇಲಾಖೆಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಕಾಂಗ್ರೆಸ್ ಧ್ವನಿಯೆತ್ತದಂತೆ ಮನವೊಲಿಸಲು ಶಾಸಕ ಎಂ.ಬಿ. ಪಾಟೀಲ್ ಅವರನ್ನು ಭೇಟಿ ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಟಾಂಗ್ ನೀಡಿದ್ದಾರೆ. ತಮ್ಮನ್ನು ರಕ್ಷಣೆ ಮಾಡಿಕೊಳ್ಳಲು ಪಾಟೀಲರ ಮನೆಗೆ ಹೋಗಿ ಬಂದಿದ್ದಾರೆ. ಈಗ ಬೇರೆ ಸಬೂಬು ಹೇಳಬಹುದು. ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಪಾಟೀಲರ ಸಲಹೆ ಪಡೆಯಲು ಹೋಗಿದ್ದಾಗಿ ಹೇಳಬಹುದು ಎಂದಿದ್ದಾರೆ.

ಅಶ್ವತ್ಥ್ ನಾರಾಯಣ ಟಾಂಗ್:
ಡಿಕೆಶಿ ಹೇಳಿಕೆಗೆ ಟಾಂಗ್ ಕೊಟ್ಟಿರುವ ಸಚಿವ ಡಾ. ಸಿ.ಎನ್. ಅಶ್ವತ್ಥ್ ನಾರಾಯಣ, ಸದ್ಯ ಬೇಲ್ ಮೇಲೆ ಬಂದಿರುವ ಜೈಲು ಹಕ್ಕಿಗೆ ತಿಹಾರ್ ಜೈಲು ಕಾಯಂ ವಿಳಾಸ ಆಗಬೇಕಿತ್ತು ಎಂದು ಟೀಕೆ ಮಾಡಿದ್ದಾರೆ.
ರಾಮನಗರದಲ್ಲಿ ನಡೆದ ಉದ್ಯೋಗ ಮೇಳದ ಉದ್ಘಾಟನೆ ಸಂದರ್ಭದಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅಶ್ವತ್ ನಾರಾಯಣ್, "ಶಿವಕುಮಾರ್ ನೂರು ಜನ್ಮ ಹುಟ್ಟಿ ಬಂದರೂ ನನ್ನ ಮುಖಕ್ಕೆ ಮಸಿ ಬಳಿಯಲು ಸಾಧ್ಯ ಆಗುವುದಿಲ್ಲ. ಸದ್ಯ ಬಿಜೆಪಿಯಲ್ಲಿ ಸಿಎಂ ಹುದ್ದೆ ಖಾಲಿಯಿಲ್ಲ. ನಾನು ರೇಸ್ ನಲ್ಲಿ ಇಲ್ಲ. ಪಕ್ಷದಲ್ಲಿ ನನಗೆ ಯಾರೂ ವಿರೋಧಿಗಳು ಇಲ್ಲ. ಇದೆಲ್ಲವೂ ವಿರೋಧ ಪಕ್ಷಗಳ ಕುತಂತ್ರ,'' ಎಂದರು.

ರಾಮನಗರದ ಕಾರ್ಯಕ್ರಮವೊಂದರಲ್ಲಿ ಡಿ.ಕೆ. ಶಿವಕುಮಾರ್ ಮತ್ತು ಅಶ್ವತ್ಥ್ ನಾರಾಯಣ ನಡುವೆ ಉಂಟಾದ ಮಾತಿನ ಸಮರ ಇಂದಿಗೂ ಮುಂದುವರೆದಿದೆ. ಇತ್ತೀಚೆಗೆ ಡಿಕೆಶಿ ನಾವು ರಾಮನಗರದವ್ರು ಹೆಣ್ಣು, ಮಾಗಡಿ ಗಂಡು ಪಿಎಸ್ಐ ಅಕ್ರಮದಲ್ಲಿ ಶಾಮೀಲಾಗಿದ್ದಾರೆ ಎಂದು ಆರೋಪಿಸಿದ್ದನ್ನು ಸ್ಮರಿಸಬಹುದು.












Click it and Unblock the Notifications