ಮೈತ್ರಿ ನಾಯಕರ ದಿಢೀರ್ ಸಭೆ: ಸರ್ಕಾರ ಉಳಿಸಿಕೊಳ್ಳಲು ಕಾರ್ಯತಂತ್ರ?
ದೋಸ್ತಿ ನಾಯಕರು ಇಂದು ನಗರದ ತಾಜ್ ಹೊಟೆಲ್ನಲ್ಲಿ ದಿಢೀರ್ ಸಭೆ ನಡೆಸಿದ್ದು, ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ಕಾರ್ಯತಂತ್ರಗಳನ್ನು ಹೆಣೆದಿದ್ದಾರೆ ಎನ್ನಲಾಗಿದೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಸಿದ್ದರಾಮಯ್ಯ, ಸಿಎಂ ಕುಮಾರಸ್ವಾಮಿ, ಪರಮೇಶ್ವರ್ ಅವರುಗಳು ಇಂದು ರಾತ್ರಿ ಹೊಟೆಲ್ನಲ್ಲಿ ಸಭೆ ನಡೆಸಿದ್ದಾರೆ, ಒಂದೂವರೆ ತಾಸು ನಡೆದ ಸಭೆಯಲ್ಲಿ ಹಲವು ರಾಜ್ಯ ಸರ್ಕಾರ ಉಳಿಸಿಕೊಳ್ಳುವ ಬಗ್ಗೆ ಮಹತ್ವದ ಚರ್ಚೆ ಮತ್ತು ಸೂಚನೆಗಳ ವಿನಿಮಯ ಆಗಿದೆ.
ಚುನಾವಣೆ ಫಲಿತಾಂಶಕ್ಕೆ ಇನ್ನೊಂದು ದಿನ ಇದ್ದಾಗ ಕೆ.ಸಿ.ವೇಣುಗೋಪಾಲ್ ಅವರು ರಾಜ್ಯಕ್ಕೆ ಬಂದಿರುವುದು ಅತ್ಯಂತ ಮಹತ್ವದ ಬೆಳವಣಿಗೆಯಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಸಮೀಕ್ಷೆಗಳು ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಗೆ ಹಿನ್ನಡೆಯನ್ನು ಸಾರಿ ಹೇಳುತ್ತಿರುವ ಕಾರಣ ಮೈತ್ರಿ ಸರ್ಕಾರ ಅಲುಗಾಡುತ್ತಿದೆ, ಹಾಗಾಗಿಯೇ ಈ ದಿಢೀರ್ ಸಭೆ ನಡೆದಿದೆ.

ಆಪರೇಷನ್ ಕಮಲ ಆರಂಭಿಸಿದೆ ಬಿಜೆಪಿ?
ಬಿಜೆಪಿಯು ಈಗಾಗಲೇ ಆಪರೇಷನ್ ಕಮಲ ಆರಂಭಿಸಿದೆ ಎನ್ನಲಾಗಿದ್ದು, ಅದರ ಭಾಗವಾಗಿಯೇ ರಮೇಶ್ ಜಾರಕಿಹೊಳಿ ದೆಹಲಿಗೆ ತೆರಳಿದ್ದಾರೆ, ಇಂದೂ ಸಹ ಶಾಸಕ ರೋಷನ್ ಬೇಗ್ ಬಿಜೆಪಿ ಸೇರುವ ಮಾತನ್ನಾಡಿದ್ದಾರೆ ಎರಡು ಉಪಚುನಾವಣೆ ಫಲಿತಾಂಶಗಳೂ ಸಹ ಡೋಲಾಯ-ಮಾನಾಯವಾಗಿವೆ ಹಾಗಾಗಿ ಸರ್ಕಾರಕ್ಕೆ ಹಿಂದಿಗಿಂತಲೂ ಹೆಚ್ಚಿನ ಆತಂಕ ಇದೆ.

ವೇಣುಗೋಪಾಲ್ ಮೂಲಕ ಹೈಕಮಾಂಡ್ ಸಂದೇಶ
ಈ ಎಲ್ಲ ವಿಷಯಗಳನ್ನು ಇಂದಿನ ಸಭೆಯಲ್ಲಿ ಚರ್ಚಿಸಿದ್ದು, ವೇಣುಗೋಪಾಲ್ ಮೂಲಕ ಹೈಕಮಾಂಡ್ ರಾಜ್ಯದ ಕೈ-ಜೆಡಿಎಸ್ ನಾಯಕರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದು, ಯಾವುದೇ ಕಾರಣಕ್ಕೂ ಸರ್ಕಾರ ಉರುಳುದಂತೆ ನೋಡಿಕೊಳ್ಳುವಂತೆ ಆದೇಶ ರವಾನಿಸಿದ್ದಾರೆ.

ಲೋಕಸಭೆ ಚುನಾವಣೆ ಫಲಿತಾಂಶದ ಚರ್ಚೆ
ಇಂದಿನ ಸಭೆಯಲ್ಲಿ ಲೋಕಸಭೆ ಚುನಾವಣೆ ಫಲಿತಾಂಶದ ಬಗ್ಗೆಯೂ ಚರ್ಚೆ ನಡೆದಿದೆ ಎನ್ನಲಾಗಿದ್ದು, ಗುಪ್ತಚರ ಇಲಾಖೆ ವರದಿ, ರಾಜ್ಯ ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಆಂತರಿಕ ಸಮೀಕ್ಷೆಗಳ ಬಗ್ಗೆಯೂ ಚರ್ಚೆ ನಡೆದಿದೆ.

ಚಂದ್ರಬಾಬು ನಾಯ್ಡು-ದೇವೇಗೌಡ ಭೇಟಿ
ಇದೇ ದಿನ ಚಂದ್ರಬಾಬು ನಾಯ್ಡು ಅವರು ದೇವೇಗೌಡ ಹಾಗೂ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಫಲಿತಾಂಶ ಅತ್ತ-ಇತ್ತ ಆದರೆ ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸುವಲ್ಲಿ ದೇವೇಗೌಡ ಅವರು ಮಹತ್ವದ ಪಾತ್ರ ವಹಿಸಲಿದ್ದಾರೆ, ಹಾಗಾಗಿಯೇ ನಾಯ್ಡು ಅವರು ದೇವೇಗೌಡ ಅವರನ್ನು ಭೇಟಿಯಾಗಿದ್ದಾರೆ.












Click it and Unblock the Notifications