ಎಲ್ಲಾ ಸಚಿವರಿಗೆ ಮಹತ್ವದ ಸೂಚನೆ ನೀಡಿದ ಯಡಿಯೂರಪ್ಪ
ಬೆಂಗಳೂರು, ಡಿಸೆಂಬರ್ 18 : ಆಡಳಿತಕ್ಕೆ ಚುರುಕು ಮುಟ್ಟಿಸಲು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಚಿಂತನೆ ನಡೆಸಿದ್ದಾರೆ. ಆದ್ದರಿಂದ, ಸಚಿವ ಸಂಪುಟದ ಎಲ್ಲಾ ಸದಸ್ಯರಿಗೆ ಸೂಚನೆಯನ್ನು ನೀಡಿದ್ದಾರೆ. ವಾರದಲ್ಲಿ ಎರಡು ದಿನ ಜನರನ್ನು ಭೇಟಿ ಮಾಡಲು ಸಹ ಅವರು ತೀರ್ಮಾನಿಸಿದ್ದಾರೆ.
15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ 12 ಸ್ಥಾನಗಳಲ್ಲಿ ಜಯಗಳಿಸಿದೆ. ಈ ಮೂಲಕ ಕರ್ನಾಟಕದ ಬಿಜೆಪಿ ಸರ್ಕಾರ ಸ್ಪಷ್ಟ ಬಹುಮತ ಪಡೆದಿದೆ. ಈಗ ಉಳಿ ಮೂರುವರೆ ವರ್ಷಗಳಲ್ಲಿ ಜನರಪರ ಆಡಳಿತ ನೀಡಲು ಯಡಿಯೂರಪ್ಪ ಮುಂದಾಗಿದ್ದಾರೆ.
ಸಚಿವರು ಜನರ ಕೈಗೆ ಸಿಗುವುದಿಲ್ಲ ಎಂಬ ದೂರುಗಳಿವೆ. ಆದ್ದರಿಂದ, ಎಲ್ಲಾ ಸಚಿವರು ವಾರದಲ್ಲಿ ಎರಡು ದಿನ ಕಡ್ಡಾಯವಾಗಿ ಸಾರ್ವಜನಿಕರನ್ನು ಭೇಟಿ ಮಾಡಿ ಅಹವಾಲುಗಳನ್ನು ಆಲಿಸಬೇಕು ಎಂದು ಯಡಿಯೂರಪ್ಪ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ವಾರದಲ್ಲಿ ಎರಡು ದಿನ ಜನರನ್ನು ಭೇಟಿ ಮಾಡಲು ತೀರ್ಮಾನಿಸಿದ್ದಾರೆ. ಎರಡು ದಿನ ಸಾಧ್ಯವಾಗದಿದ್ದರೆ ದಿನದ ಕೆಲವು ಗಂಟೆಗಳನ್ನು ಜನರ ಭೇಟಿಯಾಗಿಯೇ ಮೀಸಲಿಡಲು ಚಿಂತನೆ ನಡೆಸಿದ್ದಾರೆ.

ಜನರಿಗೆ ಸಚಿವರು ಸಿಗಬೇಕು
ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಹೊಸ ಸರ್ಕಾರದ ಸಚಿವರು ಜನರ ಕೈಗೆ ಸಿಗುತ್ತಿಲ್ಲ ಎಂಬ ಆರೋಪಗಳಿವೆ. ಆದ್ದರಿಂದ, ಯಡಿಯೂರಪ್ಪ ಎಲ್ಲಾ ಸಚಿವರಿಗೆ ಸೂಚನೆಯೊಂದನ್ನು ನೀಡಿದ್ದಾರೆ. ಜನರ ಭೇಟಿಗೆ ಲಭ್ಯವಿರಬೇಕು ಎಂದು ಮೌಖಿಕ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಎರಡು ದಿನ ವಿಧಾನಸೌಧದ ಕಚೇರಿಯಲ್ಲಿ
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸೋಮವಾರ ಮತ್ತು ಗುರುವಾರ ಸಚಿವರು ವಿಧಾನಸೌಧದ ಕಚೇರಿಯಲ್ಲಿರಬೇಕು. ತಮ್ಮ ಕಚೇರಿಯ ಕೆಲವು ಸಮಯವನ್ನು ಜನರ ಅಹವಾಲು ಸ್ವೀಕಾರ ಮಾಡಲು ಮೀಸಲಾಗಿಡಬೇಕು ಎಂದು ಸೂಚನೆ ನೀಡಿದ್ದಾರೆ.

ಎರಡು ದಿನ ಜನರ ಭೇಟಿ
ಬಿ. ಎಸ್. ಯಡಿಯೂರಪ್ಪ ಸಚಿವರಿಗೆ ಮಾತ್ರ ಸೂಚನೆಯನ್ನು ನೀಡಿಲ್ಲ. ಎರಡು ದಿನ ತಾವು ಸಹ ಜನರನ್ನು ಭೇಟಿಯಾಗಿ ಅಹವಾಲು ಸ್ವೀಕಾರ ಮಾಡಲು ತೀರ್ಮಾನಿಸಿದ್ದಾರೆ. ಈ ಮೂಲಕ ಮುಂದಿನ ಮೂರುವರೆ ವರ್ಷಗಳ ಕಾಲ ಜನಪರ ಆಡಳಿತ ನಡೆಸಲು ಮುಂದಾಗಿದ್ದಾರೆ.

ಯಾವುದೇ ಸೂಚನೆ ಬಂದಿಲ್ಲ
ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ. ಟಿ. ರವಿ ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. "ಮುಖ್ಯಮಂತ್ರಿಗಳಿಂದ ಯಾವುದೇ ಸೂಚನೆ ಬಂದಿಲ್ಲ. ಆದರೆ, ನಾನಂತೂ ವಾರದ ಎಲ್ಲಾ ದಿನಗಳು ವಿಧಾನಸೌಧದಲ್ಲಿ ಇದ್ದು ಕೆಲಸ ಮಾಡುತ್ತೇನೆ" ಎಂದು ಹೇಳಿದ್ದಾರೆ.












Click it and Unblock the Notifications