ರಾಜ್ಯ ಸಂಪುಟ ರಚನೆ: ಮೂವರ ಕೈಯಲ್ಲಿ 'ಮೂರು ಬೇರೆ ಬೇರೆ' ಪಟ್ಟಿ
ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ ಹತ್ತು ದಿನಗಳಾದರೂ ಅವರ ಏಕ ಚಕ್ರಾಧಿಪತ್ಯ ಮುಂದುವರಿದಿದೆ. ಸಚಿವ ಸಂಪುಟ ರಚನೆಯ ವಿಚಾರದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಂದ ಇನ್ನೂ ರಾಜ್ಯ ನಾಯಕರಿಗೆ ಬುಲಾವ್ ಬಂದಿಲ್ಲ.
ಆಗಸ್ಟ್ ಐದರಂದು ದೆಹಲಿಗೆ ತೆರಳಿ ಅಮಿತ್ ಶಾ ಅವರ ಬಳಿ ಚರ್ಚಿಸುತ್ತೇನೆ ಎಂದಿದ್ದ ಮುಖ್ಯಮಂತ್ರಿಗಳು, ತುರ್ತಾಗಿ ಬರವೀಕ್ಷಣೆಯ ವೈಮಾನಿಕ ಸಮೀಕ್ಷೆ ನಡೆಸಲು ಉತ್ತರ ಕರ್ನಾಟಕದ ಭಾಗಕ್ಕೆ ತೆರಳಿದ್ದಾರೆ.
ಯಡಿಯೂರಪ್ಪನವರ ಸಚಿವ ಸಂಪುಟದಲ್ಲಿ ಯಾರ್ಯಾರು ಸ್ಥಾನ ಪಡೆಯಲಿದ್ದಾರೆ, ಯಾರಿಗೆ ಯಾವ ಖಾತೆ ಸಿಗಲಿದೆ ಎನ್ನುವ ಯಾವ ಸುಳಿವೂ ಯಾರಿಗೂ ಇಲ್ಲ. ಜಮ್ಮು ಮತ್ತು ಕಾಶ್ಮೀರದಲ್ಲಿನ ಆರ್ಟಿಕಲ್ 370 ರದ್ದುಗೊಳಿಸುವ ವಿಚಾರದಲ್ಲಿ ಅಮಿತ್ ಶಾ ಸಂಪೂರ್ಣವಾಗಿ ಬ್ಯೂಸಿಯಾಗಿರುವುದರಿಂದ, ಇನ್ನೊಂದೆರಡು ದಿನ ಸಂಪುಟ ರಚನೆಯ ವಿಚಾರದಲ್ಲಿ ಯಡಿಯೂರಪ್ಪನವರಿಗೆ ಬುಲಾವ್ ಬರುವುದು ಅನುಮಾನ.
ಈ ನಡುವೆ ಯಡಿಯೂರಪ್ಪ ಮತ್ತು ಬಿಜೆಪಿಯ ರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಪ್ರತ್ಯೇಕ, ಪ್ರತ್ಯೇಕವಾಗಿ ತಮ್ಮ ಲಿಸ್ಟುಗಳನ್ನು ರಾಷ್ಟ್ರಾಧ್ಯಕ್ಷರಿಗೆ ಕಳುಹಿಸಿಕೊಟ್ಟಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದರ ಜೊತೆಗೆ, ಅಮಿತ್ ಶಾ ತಮ್ಮದೇ ಮೂಲಗಳಿಂದ ತಮ್ಮದೊಂದು ಪಟ್ಟಿಯನ್ನು ಸಿದ್ದಪಡಿಸಿಕೊಂಡಿದ್ದಾರೆ ಎನ್ನುವ ಸುದ್ದಿಯೂ ಇದೆ.

ಯಡಿಯೂರಪ್ಪ ಮತ್ತು ಸಂತೋಷ್ ಸಿದ್ದಪಡಿಸಿರುವ ಪಟ್ಟಿ
ಯಡಿಯೂರಪ್ಪ ಮತ್ತು ಸಂತೋಷ್ ಸಿದ್ದಪಡಿಸಿರುವ ಪಟ್ಟಿಯಲ್ಲಿನ ಹೆಸರುಗಳು ಬಹುತೇಕ ಕಾಮನ್ ಆಗಿದ್ದರೂ, ಕೆಲವೊಂದು ಹೆಸರುಗಳು ಒಬ್ಬರ ಪಟ್ಟಿಯಲ್ಲಿದ್ದರೆ, ಇನ್ನೊಬ್ಬರ ಪಟ್ಟಿಯಲ್ಲಿ ಇಲ್ಲ. ಇನ್ನು, ಅಮಿತ್ ಶಾ ಅವರ ಪಟ್ಟಿಯಲ್ಲಿ ಯಾವಯಾವ ಹೆಸರು ಇದೆ ಎನ್ನುವ ಮಾಹಿತಿ ಇವರಿಬ್ಬರಿಗೂ ಇಲ್ಲ. ಜಮ್ಮು, ಕಾಶ್ಮೀರದ ವಿಚಾರ ಒಂದು ಹಂತಕ್ಕೆ ಬಂದ ನಂತರವಷ್ಟೇ ಈ ಬಗ್ಗೆ ಅಮಿತ್ ಶಾ ಮುಂದಿನ ನಿರ್ಧಾರಕ್ಕೆ ಬರಬಹುದು.

ಜುಲೈ 26ರಂದು ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ
ಜುಲೈ 26ರಂದು ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ವಿಶ್ವಾಸಮತಯಾಚನೆಯ ನಂತರ ದೆಹಲಿಗೆ ಹೋಗಿ ಪ್ರಧಾನಿ ಮೋದಿ ಮತ್ತು ಪಕ್ಷದ ಅಧ್ಯಕ್ಷ ಆಮಿತ್ ಶಾ ಆವರನ್ನು ಭೇಟಿಯಾಗುವ ಕಾರ್ಯಕ್ರಮವನ್ನು ಬಿಎಸ್ವೈ ಹಾಕಿಕೊಂಡಿದ್ದರು. ಆದರೆ, ಕಾಶ್ಮೀರದ ವಿಚಾರದಲ್ಲಿ ಅಮಿತ್ ಶಾ ಬ್ಯೂಸಿಯಾಗಿದ್ದರಿಂದ, ಇನ್ನೂ ಅವರ ಅಪಾಯಿಂಟ್ಮೆಂಟ್ ಬಿಎಸ್ವೈಗೆ ಸಿಗಲಿಲ್ಲ.

ಹಿರಿಯ ಬಿಜೆಪಿ ಮುಖಂಡ ಜಗದೀಶ್ ಶೆಟ್ಟರ್ ಹೇಳಿಕೆ
ಯಡಿಯೂರಪ್ಪ ಮತ್ತು ಸಂತೋಷ್ ಅವರ ಪಟ್ಟಿಯಲ್ಲಿ ಹಿರಿಯ ನಾಯಕರುಗಳು ಬಹುತೇಕ ಸ್ಥಾನ ಪಡೆದಿದ್ದರೂ, ಮೊದಲ ಬಾರಿಗೆ ಸಚಿವರಾಗುತ್ತಿರುವವರ ಹೆಸರಿನಲ್ಲಿ ಬೇರೆ ಬೇರೆ ಹೆಸರುಗಳಿವೆ ಎಂದು ಹೇಳಲಾಗುತ್ತಿದೆ. ಇದೇ ವಾರಾಂತ್ಯದೊಳಗೆ ಸಚಿವ ಸಂಪುಟ ರಚನೆಯಾಗುತ್ತದೆ ಎಂದು ಹಿರಿಯ ಬಿಜೆಪಿ ಮುಖಂಡ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಕೆ ಎಸ್ ಈಶ್ವರಪ್ಪ, ಶ್ರೀರಾಮುಲು, ಆರ್ ಅಶೋಕ್
ಯಡಿಯೂರಪ್ಪ ಮತ್ತು ಸಂತೋಷ್ ಅವರ ಪಟ್ಟಿಯಲ್ಲಿ ಕಾಮನ್ ಆಗಿರುವ ಹೆಸರುಗಳೆಂದರೆ, ಜಗದೀಶ್ ಶೆಟ್ಟರ್, ಕೆ ಎಸ್ ಈಶ್ವರಪ್ಪ, ಶ್ರೀರಾಮುಲು, ಆರ್ ಅಶೋಕ್, ಗೋವಿಂದ ಕಾರಜೋಳ, ಮಾಧುಸ್ವಾಮಿ, ವಿ ಸೋಮಣ್ಣ, ಅಶ್ವಥ್ ನಾರಾಯಣ, ಅರವಿಂದ್ ಲಿಂಬಾವಳಿ, ಸುರೇಶ್ ಕುಮಾರ್, ಸಿ ಟಿ ರವಿ, ಉಮೇಶ್ ಕತ್ತಿ, ಬಾಲಚಂದ್ರ ಜಾರಕಿಹೊಳಿ, ಹಾಲಾಡಿ ಶ್ರೀನಿವಾಸ ಶೆಟ್ಟಿ, ಕೆ ಜೆ ಬೋಪಯ್ಯ. ರೇಣುಕಾಚಾರ್ಯ.

ಜಮ್ಮು ಮತ್ತು ಕಾಶ್ಮೀರದ ವಿದ್ಯಮಾನ
ಸಂಪುಟ ರಚನೆಯ ಜೊತೆಗೆ, ರಾಜ್ಯಾಧ್ಯಕ್ಷ ಹುದ್ದೆಯನ್ನೂ ಅಮಿತ್ ಶಾ ಅಂತಿಮಗೊಳಿಸುವ ಸಾಧ್ಯತೆಯಿದೆ. ಆದರೆ, ಇವೆಲ್ಲವೂ ಜಮ್ಮು ಮತ್ತು ಕಾಶ್ಮೀರದ ವಿದ್ಯಮಾನ ಒಂದು ಹಂತಕ್ಕೆ ಬಂದ ನಂತರ, ಇದಕ್ಕೆ ಶಾ ಕೈಹಾಕಬಹುದು. ಹಾಗಾಗಿ, ಸದ್ಯದ ಮಟ್ಟಿಗೆ, ಯಡಿಯೂರಪ್ಪನವರ ಚಕ್ರಾಧಿಪತ್ಯ ಮುಂದುವರಿಯುವ ಸಾಧ್ಯತೆಯೇ ಹೆಚ್ಚು.












Click it and Unblock the Notifications