ಪ್ರವಾಹ: ಉತ್ತರ ಕರ್ನಾಟಕ ಬಳಿಕ ಕರಾವಳಿ ಕರ್ನಾಟಕದತ್ತ ಯಡಿಯೂರಪ್ಪ
Recommended Video
ಬೆಂಗಳೂರು, ಆಗಸ್ಟ್ 12: ಮೂರು ದಿನಗಳಿಂದ ಉತ್ತರ ಕರ್ನಾಟಕ ಪ್ರವಾಹ ವೀಕ್ಷಣೆ, ರಕ್ಷಣಾ ಕಾರ್ಯ ಉಸ್ತುವಾರಿ ನೋಡಿಕೊಂಡ ಸಿಎಂ ಯಡಿಯೂರಪ್ಪ ಇಂದು ಕರಾವಳಿ ಕರ್ನಾಟಕದತ್ತ ಗಮನ ಹರಿಸಿದ್ದಾರೆ.
ಇಂದು ದಕ್ಷಿಣ ಕನ್ನಡ, ಉಡುಪಿ, ಕೊಡಗು, ಮಂಗಳೂರು, ಚಿಕ್ಕಮಗಳೂರು, ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಗಳ ಪ್ರವಾಹ ಪರಿಸ್ಥಿತಿ ಸಮೀಕ್ಷೆ ಮಾಡಲಿದ್ದಾರೆ. ಯಡಿಯೂರಪ್ಪ ಇಂದು ಕರಾವಳಿ ಜಿಲ್ಲೆಯಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ.
ಬಾಗಲಕೋಟೆ, ಬೆಳಗಾವಿ, ಯಾದಗಿರಿ, ರಾಯಚೂರು ಇನ್ನೂ ಕೆಲವು ಜಿಲ್ಲೆಗಳಲ್ಲಿ ಕಳೆದ ಮೂರು ದಿನದಿಂದಲೂ ಯಡಿಯೂರಪ್ಪ ಅವರು ಪ್ರವಾಹ ಪರಿಸ್ಥಿತಿಯ ಪರಿವೀಕ್ಷಣೆ ಮಾಡಿ, ಅಧಿಕಾರಿಗಳ ಸಭೆಗಳನ್ನು ಮಾಡಿ ಸಂತ್ರಸ್ತರ ನೆರವಿಗೆ ಸ್ಪಂದಿಸಿದ್ದರು, ಇಂದಿನಿಂದ ಎರಡು ದಿನಗಳ ಕಾಲ ಕರಾವಳಿ ಜಿಲ್ಲೆ ಜನರ ನೆರವಿಗೆ ಧಾವಿಸಿದ್ದಾರೆ.

ಈ ಬಗ್ಗೆ ಇಂದು ಬೆಳಿಗ್ಗೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ದೇವೇಗೌಡ, ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಕೇಂದ್ರದಿಂದ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯ ಹೇರಿದ್ದಾರೆ ಅವರಿಗೆ ಧನ್ಯವಾದಗಳು ಎಂದು ಹೇಳಿದರು.
ಬಹಳಷ್ಟು ಜನ ದಾನಿಗಳು ಪ್ರವಾಹ ಸಂತ್ರಸ್ತರಿಗಾಗಿ ನೆರವು ನೀಡಿದ್ದಾರೆ. ಇನ್ನೂ ಹಲವರು ನೆರವು ನೀಡುತ್ತಿದ್ದಾರೆ ಅವರಿಗೆ ಧನ್ಯವಾದಗಳು ಎಂದು ಯಡಿಯೂರಪ್ಪ ಹೇಳಿದರು.
ಮಳೆಯಿಂದಾಗಿ ರಾಜ್ಯದಲ್ಲಿ 40-50 ಸಾವಿರ ಕೋಟಿ ನಷ್ಟವಾಗಿರುವ ಅಂದಾಜಿದೆ. ಆದರೆ ಜಿಲ್ಲಾವಾರು ಅಂಕಿ-ಅಂಶ ಇನ್ನಷ್ಟು ಬರಬೇಕಿದೆ. ಈ ಕೂಡಲೇ ಪರಿಹಾರ ಕಾರ್ಯಕ್ಕಾಗಿ 3000 ಸಾವಿರ ಕೋಟಿ ಅನುದಾನ ನೀಡುವಂತೆ ಕೇಂದ್ರಕ್ಕೆ ಬೇಡಿಕೆ ಇಟ್ಟಿದ್ದೇವೆ ಎಂದು ಯಡಿಯೂರಪ್ಪ ಹೇಳಿದರು.












Click it and Unblock the Notifications