ನಮಗೇ ನೀರಿಲ್ಲ, ತಮಿಳುನಾಡಿಗೆ ಹೇಗೆ ಬಿಡೋಣ: ಸಿಎಂ
Recommended Video
ದಾವಣಗೆರೆ, ಮೇ 03: ತಮಿಳುನಾಡಿಗೆ 4 ಟಿಎಂಸಿ ನೀರು ಬಿಡಬೇಕೆಂದು ಸುಪ್ರೀಂ ಕೋರ್ಟ್ ಆದೇಶ ನೀಡಿರುವ ಬಗ್ಗೆ ಮಾತನಾಡಿರುವ ಸಿಎಂ ಸಿದ್ದರಾಮಯ್ಯ ಅವರು 'ನಮಗೇ ನೀರಿಲ್ಲ, ಹೇಗೆ ತಮಿಳುನಾಡಿಗೆ ನೀರು ಕೊಡಲು ಸಾಧ್ಯ' ಎಂದಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ನಮ್ಮ ರೈತರಿಗೇ ಕೊಡಲು ನೀರಿಲ್ಲದಿದ್ದ ಸಮಯದಲ್ಲಿ ತಮಿಳುನಾಡಿಗೆ ನೀರು ಹರಿಸುವುದು ಕಷ್ಟ, ಸುಪ್ರೀಂ ಆದೇಶದ ಬಗ್ಗೆ ಕಾನೂನು ತಜ್ಞರೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.
ತಮಿಳುನಾಡಿಗೆ 4 ಟಿಎಂಸಿ ನೀರು ಬಿಡುವಂತೆ ಸುಪ್ರಿಂ ಆದೇಶ
ಸುಪ್ರೀಂ ಕೋರ್ಟ್ ಮುಖ್ಯ ಪೀಠವು ಇಂದು, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕರ್ನಾಟಕವು ತಮಿಳುನಾಡಿಗೆ ಬಿಡಬೇಕಿದ್ದ 5 ಟಿಎಂಸಿ ಅಡಿ ನೀರಿನಲ್ಲಿ 4 ಟಿಎಂಸಿ ನೀರನ್ನು ಈ ತಿಂಗಳ ಒಳಗಾಗಿ ತಮಿಳುನಾಡಿಗೆ ಬಿಡುವಂತೆ ಆದೇಶ ಹೊರಡಿಸಿದೆ.
ವೈಚಿತ್ರವೆಂದರೆ ನಿನ್ನೆಯ (ಮೇ 02)ರ ಲೆಕ್ಕದಂತೆ ಕೆಆರ್ಎಸ್ನಲ್ಲಿ ಈಗ ಪ್ರಸ್ತುತ ಲಭ್ಯವಿರುವುದೇ 3.52 ಟಿಎಂಸಿ ಅಡಿ ನೀರು ಮಾತ್ರ. ಅಲ್ಲದೆ ಬೇಸಿಗೆ ಆಗಿರುವ ಕಾರಣ ರಾಜ್ಯದ ಹಲವು ಅಣೆಕಟ್ಟೆಗಳು ನೀರಿಲ್ಲದೆ ಬಣಗುಡುತ್ತಿವೆ. ಇಂತಹಾ ಸಮಯದಲ್ಲಿ ತಮಿಳುನಾಡಿಗೆ ನೀರು ಬಿಡುವಂತೆ ಆದೇಶ ಹೊರಡಿಸಿರುವುದು ಕಾವೇರಿ ಕಣಿವೆ ರೈತರಿಗೆ ಗಾಯದ ಮೇಲೆ ಉಪ್ಪು ಸವರಿದಂತಾಗಿದೆ.