ನೆರೆ ಪೀಡಿತ ಉತ್ತರ ಕರ್ನಾಟಕಕ್ಕೆ ಸಿಎಂ ಭೇಟಿ
ಬೆಂಗಳೂರು. ಸೆ. 6: ಉತ್ತರ ಕರ್ನಾಟಕದ ನೆರೆ ಪೀಡಿತ ಪ್ರದೇಶಗಳಿಗೆ ಸಿಎಂ ಸಿದ್ದರಾಮಯ್ಯ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೇವಲ ವೈಮಾನಿಕ ಸಮೀಕ್ಷೆ ನಡೆಸದೆ ಮೊದಲು ಹೆಲಿಕ್ಯಾಪ್ಟರ್ ಮೂಲಕ ತೆರಳಿ ನಂತರ ರಸ್ತೆ ಮಾರ್ಗದಲ್ಲೇ ಸಂಚರಿಸಿ ಮಳೆ ಹಾನಿ ಮಾಹಿತಿ ಪಡೆದರು.
ನಿಗದಿತ ಸಮಯಕ್ಕಿಂತ ಒಂದೂವರೆ ಗಂಟೆ ತಡವಾಗಿ ಗುಲ್ಬರ್ಗಾ ತಲುಪಿದ ಮುಖ್ಯಮಂತ್ರಿ ಅಲ್ಲಿಂದ ರಸ್ತೆ ಮಾರ್ಗವಾಗಿ ಪಯಣಿಸಿದರು. ಕಳೆದ ನಾಲ್ಕೈದು ದಿನಗಳಿಂದ ಉತ್ತರ ಕರ್ನಾಟಕ ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಅಪಾರ ಹಾನಿ ಸಂಭವಿಸಿದೆ.(ದಸರಾ ನಂತರ ಸಚಿವ ಸಂಪುಟ ವಿಸ್ತರಣೆ)

ಅತಿವೃಷ್ಟಿಯಿಂದ ತೊದರೆಗೊಳಗಾಗಿರುವ ಗದಗ, ರಾಯಚೂರು ಮತ್ತು ಗುಲ್ಬರ್ಗ ಜಿಲ್ಲೆಗಳಲ್ಲಿ ಸಿಎಂ ಸಮೀಕ್ಷೆ ನಡೆಸಿದರು. ಆಯಾ ಜಿಲ್ಲೆಯ ಜಿಲ್ಲಾಧಿಕಾರಿ ಮತ್ತು ಇತರ ಅಧಿಕಾರಿಗಳೊಡನೆ ಸಭೆ ನಡೆಸಿ ಪರಿಹಾರ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು.
ರಾಜ್ಯದ ಎಂಡು ಜಿಲ್ಲೆಗಳಲ್ಲಿ ಅತಿವೃಷ್ಟಿ ತಲೆದೋರಿದ್ದು 1.9 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದೆ. 400 ಕೋಟಿ ಪರಿಹಾರ ನೀಡಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಒಂದೆಡೆ ಅತಿವೃಷ್ಟಿ, ಮತ್ತೊಂದೆಡೆ ಅನಾವೃಷ್ಟಿ
ಅಂದಾಜಿನ ಪ್ರಕಾರ ಮಳೆ ಹೊಡೆತಕ್ಕೆ ಸಿಲುಕಿ ಉತ್ತರ ಕರ್ನಾಟಕದಲ್ಲಿ ಎಂಟು ಸಾವಿರ ಮನೆಗಳು ಕುಸಿದಿದ್ದು, 22 ಜನ ಜೀವ ಕಳೆದುಕೊಂಡಿದ್ದಾರೆ. ಒಟ್ಟು 400 ಕೋಟಿ ರೂ. ನಷ್ಟವಾಗಿದೆ. ಇತ್ತ ಕೋಲಾರ, ತೂಮಕೂರು, ಚಿಕ್ಕಬಳ್ಳಾಪುರ, ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಬರದ ಛಾಯೆ ಆವರಿಸಿದೆ. ಒಂದೆಡೆ ಅತಿವೃಷ್ಟಿ ಇನ್ನೊಂದೆಡೆ ಮಳೆ ಕೊರತೆ ರಾಜ್ಯವನ್ನು ಬರಗಾಲದತ್ತ ಮುಖ ಮಾಡುವಂತೆ ಮಾಡಿದೆ.












Click it and Unblock the Notifications