ಎಲ್ಲರಿಗೂ ಆದ್ಯತೆ, ಆರ್ಥಿಕ ಶಿಸ್ತು ಪಾಲನೆ: ಸಿಎಂ
ಬೆಂಗಳೂರು, ಫೆಬ್ರವರಿ 16: ನಾವು ಆರ್ಥಿಕ ಶಿಸ್ತು ಪಾಲಿಸಿದ್ದೇವೆ, ಈ ಬಜೆಟ್ ರಾಜ್ಯ ಜಿಡಿಪಿ ಹೆಚ್ಚಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬಜೆಟ್ 2018-19 ಮಂಡನೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೃಷಿ, ಆರೋಗ್ಯ, ಶಿಕ್ಷಣ, ಮೂಲಭೂತ ಸೌಕರ್ಯ ಅಭಿವೃದ್ಧಿ, ಮಧ್ಯಮವರ್ಗ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಮಂಡಿಸಿರುವ ಸಮತೋಲಿತ ಬಜೆಟ್ ಇದಾಗಿದೆ ಎಂದರು.
ಸರ್ಕಾರ ಸಾಲ ಮಾಡಿದೆ, ದಿವಾಳಿ ಆಗಿದೆ ಎಂಬ ವಿರೋಧ ಪಕ್ಷಗಳ ಟೀಕೆಗೆ ಉತ್ತರಿಸಿದ ಅವರು ಆರನೇ ವೇತನ ಆಯೋಗ ಜಾರಿ ಮತ್ತು ಸಹಕಾರಿ ಸಂಘಗಳಲ್ಲಿನ ರೈತರ ಸಾಲ ಮನ್ನಾದಿಂದ ಹೊರೆಯಾಗಿರುವುದು ನಿಜವಾದರೂ, ಯಾವುದೇ ಆದ್ಯತೆಯ ಕ್ಷೇತ್ರಕ್ಕೆ ಅನುದಾನವನ್ನು ಕಡಿತ ಮಾಡಲಾಗಿಲ್ಲ ಎಂದರು.

ಆರನೇ ವೇತನ ಆಯೋಗದ ಶಿಫಾರಸ್ಸು ಏಪ್ರಿಲ್ 1 ರಿಂದ ಜಾರಿಗೆ ಬರುತ್ತದೆ ಎಂದು ಹೇಳಿದ ಅವರು, ಈ ಶೀಫಾರಸ್ಸಿನಿಂದ 5.93 ಲಕ್ಷ ಸರ್ಕಾರಿ ನೌಕರರಿಗೆ ಲಾಭವಾಗಲಿದೆ ಎಂದರು.
ಹಣಕಾಸಿನ ಜವಾಬ್ದಾರಿ ಕಾಯಿದೆ (ಪಿಸ್ಕಲ್ ರೆಸ್ಪಾನ್ಸಿಬಲಿಟಿ ಆಕ್ಟ್) ಪ್ರಕಾರ ರಾಜ್ಯಗಳು ತಮ್ಮ ಉತ್ಪಾದನಾ ಸಾಮರ್ಥ್ಯಕ್ಕೆ ಅನುಗುಣವಾಗಿ ಸಾಲವನ್ನು ಪಡೆಯಬಹುದಾಗಿದ್ದು, ಕರ್ನಾಟಕವು ತನ್ನ ಸಾಮರ್ಥ್ಯಕ್ಕಿಂತ ಕಡಿಮೆ ಸಾಲವನ್ನೇ ಪಡೆದಿದೆ ಹಾಗಾಗಿ ವಿರೋಧ ಪಕ್ಷಗಳ ಆರೋಪ ಹುರುಳಿಲ್ಲದ್ದು ಎಂದರು.
ಕಳೆದ ಬಜೆಟ್ಗಿಂಲತೂ ದೊಡ್ಡ ಗಾತ್ರದ ಬಜೆಟ್ ಇದಾಗಿದ್ದು, 2,09,181 ಕೋಟಿ ಖರ್ಚು ಅಂದಾಜು ಮಾಡಲಾಗಿದೆ, ಎಲ್ಲಾ ಮಾನದಂಡಗಳನ್ನು ಪಾಲಿಸಿ ಬಜೆಟ್ ಮಂಡನೆ ಮಾಡಲಾಗಿದ್ದು, ನಾವು ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳಿಗಿಂತ ಹೆಚ್ಚಿನದನ್ನು ರಾಜ್ಯಕ್ಕೆ ನೀಡಿದ್ದೇವೆ ಎಂದು ಅವರು ಹೇಳಿದರು.
ಈ ಬಾರಿಯ ಬಜೆಟ್ನಲ್ಲಿ ಹಲವು ಪ್ರಮುಖ ಯೋಜನೆಗಳನ್ನು ಘೋಷಿಸಿದ್ದು, ಮಳೆ ಆಶ್ರಿತ ರೈತರಿಗೆ ಅವರ ಜಮೀನಿಗೆ ಅನುಗುಣವಾಗಿ ಎಕರೆಗೆ 10000 ಹಣವನ್ನು ವಾರ್ಷಿಕ ಅವರ ಖಾತೆಗೆ ಜಮೆ ಮಾಡಲಾಗುವುದು ಮಳೆ ಆಶ್ರಯಿತ ರೈತರಿಗೆ ವರವಾಗಲಿದೆ ಎಂದರು.












Click it and Unblock the Notifications