'ಮೂಢನಂಬಿಕೆ ಆಚರಿಸಿದರೆ ಜೈಲಿಗೆ ತಳ್ತೀವಿ, ಹುಷಾರು'
ಬೆಂಗಳೂರು, ನ. 6: ಅತ್ತ ತಿರುಪತಿ ತಿಮ್ಮಪ್ಪನ ಆಶೀರ್ವಾದ ಪಡೆದು ಇಸ್ರೋದವರು ರಾಕೆಟ್ ಲಾಂಚ್ ಮಾಡಿದ್ದರೆ ಇತ್ತ ಅದೇ ಸುಮೂರ್ಹತ ಘಳಿಗೆಯಲ್ಲಿ (ಸಾರಿ, ಮೂರ್ಹತ ಫಿಕ್ಸ್ ಮಾಡುವುದು ಅಪರಾಧವಾದೀತು) ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೂಢನಂಬಿಕೆ ವಿರುದ್ಧ ದೀಪಾವಳಿ ರಾಕೆಟ್ಟುಗಳನ್ನು ಹಾರಿಸಿಬಿಟ್ಟಿದ್ದಾರೆ. ಮೂಢನಂಬಿಕೆ ಆಚರಣೆ ಮಾಡಿದರೆ ಅಥವಾ ಪ್ರಚೋದಿಸಿದರೆ ಜೈಲು ಕಂಬಿ ಎಣಿಸಬೇಕಾದೀತು ಎಂದು ಎಚ್ಚರಿಸಿದ್ದಾರೆ!
ಏನಪ್ಪಾ ಅಂದರೆ ಅನಾದಿಕಾಲದಿಂದಲೂ ಮೂಢನಂಬಿಕೆ ಆಚರಣೆಗಳನ್ನು ಪೋಷಿಸುತ್ತಾ ಬಂದಿರುವ ನಾಡಿನಲ್ಲಿ ಮೂಢನಂಬಿಕೆ ಆಚರಣೆ ಪ್ರತಿಬಂಧಕ ವಿಧೇಯಕ-2013ರ ಕರಡನ್ನು ಅಂಗೀಕರಿಸಿದ್ದು, ವಿಧೇಯಕವನ್ನು ಇದೇ ತಿಂಗಳ 25ರಿಂದ ಆರಂಭವಾಗುವ ವಿಧಾನಮಂಡಲ ಅಧಿವೇಶನದಲ್ಲೇ ಮಂಡಿಸಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಅಂದಹಾಗೆ ಮಹಾರಾಷ್ಟ್ರದಲ್ಲಿ ಇಂತಹ ಕಾನೂನನ್ನು ಇತ್ತೀಚೆಗೆ ಜಾರಿಗೆ ತರಲಾಗಿದೆ.
ಮೂಢನಂಬಿಕೆಗೆ ಎಳ್ಳುನೀರು ಬಿಡುವ ನಿಟ್ಟಿನಲ್ಲಿ ರಾಷ್ಟ್ರೀಯ ಕಾನೂನು ವಿದ್ಯಾಲಯದ ನಿರ್ದೇಶಕ ಜಾಫೆಟ್ ಮತ್ತು ಕೆಲವು ಪ್ರಗತಿಪರರು ಒಟ್ಟಾಗಿ ಈ ಕರಡು ಮಸೂದೆ ಸಿದ್ಧಪಡಿಸಿದ್ದಾರೆ. ಇದೇ ವೇಳೆ ನಾಡಿನ ಹಲವಾರು ಪ್ರಜ್ಞಾವಂತರು ಸಿದ್ದರಾಮಯ್ಯನವರ ಈ ನಡೆ ಸರ್ವತಾ ಸಾಧುವಲ್ಲ ಎಂದು ತೀವ್ರ ಕಿಡಿಕಾರಿದ್ದಾರೆ. ಅಂದಹಾಗೆ, ಈ ಕರಡನ್ನು ಅಂಗೀಕರಿಸುವ ಮುನ್ನ ಸನ್ಮಾನ್ಯ ಮುಖ್ಯಮಂತ್ರಿಗಳು ಸಪತ್ನೀಕರಾಗಿ ತಮ್ಮ ಕುಟುಂಬ ಪರಿವಾರ ಸಮೇತ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ತೆರಳಿ, ಪೂಜೆ-ಪುನಸ್ಕಾರ ಮಾಡಿಬಂದಿದ್ದಾರೆ.
ಮೂಢನಂಬಿಕೆಗೆ ಬಲಿ
ಅಸಲಿಗೆ ಮೂಢನಂಬಿಕೆಗೆ ಬಲಿಯಾಗುವುದೇ ಈ ಮೂಢ ರಾಜಕಾರಣಿಗಳು. ತಮ್ಮ ಸ್ವಾರ್ಥ ಸಾಧನೆಗಾಗಿ ಮೂಢನಂಬಿಕೆಯನ್ನು ಜಾರಿಯಲ್ಲಿಟ್ಟಿರುವುದೇ ಈ ರಾಜಕಾರಣಿಗಳು. ಅದನ್ನು ಆಚರಣೆ ಮಾಡುವವರೂ ಅವರೇ ಆಗಿರುವಾಗ ರಾಜಕಾರಣಿಗಳೇ ಮೂಢನಂಬಿಕೆ ಆಚರಣೆ ನಿರ್ಬಂಧಿಸಲು ಹೊರಟಿದ್ದಾರೆ. ಇದು ಚೋದ್ಯವೇ ಸರಿ ಎಂದು ತಟಸ್ಥ ವರ್ಗ ಮುಸಿಮುಸಿ ನಗುತ್ತಿದೆ.
ಮೂಢನಂಬಿಕೆ ಆಚರಣೆಗಳ ಪ್ರತಿಬಂಧಕ ವಿಧೇಯಕ-2013ರ ಕರಡು ಪ್ರತಿಯ ಪ್ರಮುಖ ಶಿಫಾರಸುಗಳು ಇಂತಿವೆ. ಒಮ್ಮೆ ನೀವೂ ಪರಾಂಬರಿಸಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಿ.

ಕರಡು ಸಮಿತಿಯಲ್ಲಿ ಯಾರೆಲ್ಲಾ ಇದ್ದಾರೆ?:
ವರದಿ ನಿರೂಪಣೆಯ ತಜ್ಞರ ನಿಯೋಗದಲ್ಲಿ ವರದಿ ಸಂಯೋಜಕ, ಪ್ರೊ. ಜಾಫೆಟ್, ಶಿಕ್ಷಣ ತಜ್ಞ ಹಾಗೂ ವಿಚಾರವಾದಿ ಡಾ. ಜಿ ರಾಮಕೃಷ್ಣ, ಪ್ರೊ. ಬರಗೂರು ರಾಮಚಂದ್ರಪ್ಪ, ಡಾ. ಕೆ ಮರುಳಸಿದ್ದಪ್ಪ, ಡಾ. ಸಿದ್ದಲಿಂಗಯ್ಯ, ಡಾ. ಅರವಿಂದ ಮಾಲಗತ್ತಿ, ಎಎಸ್ ನಟರಾಜ್, ಡಾ. ಎಲ್ ಹನುಮಂತಯ್ಯ, ಡಾ. ವಿಎಸ್ ಶ್ರೀಧರ್, ಡಾ. ವಡ್ಡಗೆರೆ ನಾಗರಾಜಯ್ಯ, ಡಾ.ಬಾಲಗುರುಮೂರ್ತಿ, ದಸಂಸ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಮತ್ತಿತರರು ಇದ್ದಾರೆ.

13 ಆಚರಣೆಗಳು ಮಹಾಪರಾಧಗಳು
ಸಮಿತಿ ಸಲ್ಲಿಸಿರುವ 108 ಪುಟಗಳ ಕರಡು ಪ್ರತಿಯಲ್ಲಿ ಧಾರ್ಮಿಕ ಅಂಧಶ್ರದ್ಧೆಯ 13 ಆಚರಣೆಗಳನ್ನು ಅಪರಾಧಗಳೆಂದು ಗುರುತಿಸಲಾಗಿದೆ. 'ವಿವಾದದಿತ ಮಡೆ ಮಡೆಸ್ನಾನ, ಸ್ವಾಮೀಜಿಗಳ ಅಡ್ಡಪಲ್ಲಕ್ಕಿ ಉತ್ಸವ, ಪಂಕ್ತಿಭೇದ ಹಾಗೂ ಮಾಧ್ಯಮಗಳಲ್ಲಿ ಮೌಡ್ಯ ಬಿತ್ತುವ ಕಾರ್ಯಕ್ರಮಗಳಿಗೆ ನಿರ್ಬಂಧ ವಿಧಿಸಬೇಕು. ಶಾಲಾ ಹಂತದಿಂದಲೇ ಜಾತ್ಯತೀತ-ವೈಚಾರಿಕತೆ ಬಿತ್ತುವ ಸಲುವಾಗಿ ಅದನ್ನು ಪಠ್ಯಕ್ರಮವಾಗಿ ಅಳವಡಿಸಬೇಕು

ವಿದ್ಯಾರ್ಥಿಗಳ ಧಾರ್ಮಿಕ ಪ್ರವಾಸಕ್ಕೂ ನಿರ್ಬಂಧ:
ಕುತೂಹಲಕಾರಿ ಸಂಗತಿಯೆಂದರೆ, ಶಾಲಾ-ಕಾಲೇಜು-ವಿಶ್ವವಿದ್ಯಾಲಯಗಳು ಆಯೋಜಿಸುವ ಪ್ರವಾಸಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಮತ-ಮೌಡ್ಯಗಳನ್ನು ಬಿತ್ತುವ ಧಾರ್ಮಿಕ ಕೇಂದ್ರಗಳಿಗೆ ಒಯ್ಯಬಾರದು. ಐತಿಹಾಸಿಕ ಮಹತ್ವವುಳ್ಳ ಸ್ಥಳಗಳು, ನಿಸರ್ಗ ರಮಣೀಯ ತಾಣಗಳು, ಮ್ಯೂಸಿಯಂಗಳು, ವಸ್ತು ಸಂಗ್ರಹಾಲಯ, ವಿಜ್ಞಾನ ಕೇಂದ್ರ ಮುಂತಾದ ಸ್ಥಳಗಳಿಗೆ ಮಾತ್ರ ಪ್ರವಾಸ ಆಯೋಜಿಸುವಂತೆ ನೋಡಿಕೊಳ್ಳಬೇಕು ಎಂದು ಕರಡು ರಚನಾ ಸಮಿತಿ ಪ್ರತಿಪಾದಿಸಿದೆ.

ಸರ್ಕಾರಿ ಕಚೇರಿಗಳಲ್ಲಿ ಪೂಜೆ-ಪುನಸ್ಕಾರ ಬಂದ್
ಸರ್ಕಾರಿ ಕಚೇರಿಗಳಲ್ಲಿ ಪೂಜೆ-ಪುನಸ್ಕಾರ ನಡೆಸುವ, ಸರ್ಕಾರಿ ಕಟ್ಟಡಗಳನ್ನು ಕಟ್ಟಲು ಗುದ್ದಲಿ ಪೂಜೆ ಮಾಡಿಸುವ, ವಿಧಾನಸೌಧ- ವಿಕಾಸಸೌಧಗಳಂತಹ ಸಾರ್ವಜನಿಕ ಕಟ್ಟಡಗಳಲ್ಲಿರುವ ಕೊಠಡಿಗಳನ್ನು ವಾಸ್ತುದೋಷ ನಿವಾರಣೆಯ ಹೆಸರಿನಲ್ಲಿ ಮನಬಂದಂತೆ ಬದಲಿಸಿ ಕಟ್ಟುವ ಮೌಢ್ಯಾಚರಣೆಗಳನ್ನು ಪ್ರತಿಬಂಧಿಸಬೇಕು.

ಹಸ್ತಸಾಮುದ್ರಿಕೆಯೂ ಕಾನೂನುಬಾಹಿರ:
ಯಾವುದೇ ಮತ-ಧರ್ಮದ ಧಾರ್ಮಿಕ ಪಂಥಗಳ ವ್ಯಾಪ್ತಿಯಲ್ಲಿ ಬರುವ ಫಲ ಜ್ಯೋತಿಷ್ಯ, ಜಾತಕ ಫಲ, ಶಕುನ, ಕಾಲ ನಿರ್ಣಯ, ಕಾಲ ಜ್ಞಾನ, ಸಂಖ್ಯಾಶಾಸ್ತ್ರ, ವಾಸ್ತುಶಾಸ್ತ್ರ, ಪವಾಡ, ಯಕ್ಷಿಣಿ ವಿದ್ಯೆ, ಜಾದೂಗಾರಿಕೆ, ಮಾಟ-ಮಂತ್ರ, ಮೋಡಿ-ರಣಮೋಡಿ, ಬಾನಾಮತಿ, ವಶೀಕರಣ, ವಾಮಾಚಾರ, ಕುಂಡಲಿನಿ, ಹಸ್ತಸಾಮುದ್ರಿಕೆ, ಕಣಿ-ಶಕುನ ನುಡಿಯುವುದು/ಕೇಳುವುದು,
ಮಠ-ಮಂದಿರ-ಗುರುಪೀಠ-ಗದ್ದಿಗೆಗಳಲ್ಲಿ ಅತೀಂದ್ರಿಯ ಧಾರ್ಮಿಕ ಶಕ್ತಿಗಳ ಮೈದುಂಬಿ ದೈವ ಪ್ರಶ್ನೆ ಹೇಳುವುದು/ ಕೇಳುವುದು ಮುಂತಾದವುಗಳನ್ನು ನಡೆಸುವವರು, ನಡೆಸುವ ಸಂಘ-ಸಂಸ್ಥೆ, ಟ್ರಸ್ಟ್ಗಳನ್ನು ವಿಧೇಯಕದ ವ್ಯಾಪ್ತಿಗೆ ತಂದು ಧಾರ್ಮಿಕ ವ್ಯಾಪಾರ ಮತ್ತು ಮೂಢಾಚಾರ ಚಟುವಟಿಕೆಗಳು ಕಾನೂನುಬಾಹಿರ ಅಪರಾಧ ಕೃತ್ಯಗಳು.

ವ್ಯಾಪಾರೀಕರಣವೋ!?
ಇದು ತುಸು ಸೋಜಿಗವೇ ಆಗಿದೆ. ಏನಪ್ಪಾ ಅಂದರೆ ಒಂದೆಡೆ ಮೂಢನಂಬಿಕೆಗಳುನ್ನು ನಿಷೇದಿಸಲು ಹೊರಟಿರುವ ಸರಕಾರ ಮತ್ತೊಂದೆಡೆ ಧಾರ್ಮಿಕ ವ್ಯಾಪಾರ ನಿರತ ವ್ಯಕ್ತಿಗಳು ಮತ್ತು ಸಂಘ-ಸಂಸ್ಥೆಗಳು ಸಕ್ಷಮ ನೋಂದಣಿ ಪ್ರಾಧಿಕಾರದಲ್ಲಿ ನಿಯಮಾನುಸಾರ ನೋಂದಣಿ ಮಾಡಿಸಿಕೊಂಡು, ಅನುಮತಿ ಪಡೆದು ಮೂಢನಂಬಿಕೆ ಮುಂದುವರಿಸಬಹುದಂತೆ.

ವೈಜ್ಞಾನಿಕ ಮನೋಭಾವದವರಿಗೆ ಕಾನೂನು ರಕ್ಷಣೆ
ಅಂಧಶ್ರದ್ಧೆಯ ಆಚರಣೆಗಳಾದ ಅಗ್ನಿದಿವ್ಯದ ಮೂಲಕ ಪ್ರಮಾಣ ಮಾಡಿಸುವುದು, ಕಾಫ್ ಪಂಚಾಯತ್ ನ್ಯಾಯ ನಿರ್ಣಯ, ಮರ್ಯಾದಾ ಹತ್ಯೆ, ಗಡೀಪಾರು, ಸಾಮಾಜಿಕ ಬಹಿಷ್ಕಾರ ಮುಂತಾದವುಗಳನ್ನು ಅಪರಾಧ ಮತ್ತು ಶಿಕ್ಷಾರ್ಹ ಎಂದು ಘೋಷಿಸಬೇಕು. ಆರ್ ಟಿಐ ಕಾರ್ಯಕರ್ತರಿಗೆ ರಕ್ಷಣೆ ಒದಗಿಸುವಂತೆಯೇ ಸಮಾಜದಲ್ಲಿ ವೈಜ್ಞಾನಿಕ ಮನೋಭಾವವನ್ನು ಗಂಭೀರವಾಗಿ ನೆಲೆಗೊಳಿಸಲು ಮುಂದಾಗುವವರಿಗೂ ಕಾನೂನಾತ್ಮಕ ರಕ್ಷಣೆ ಒದಗಿಸಬೇಕು ಎಂದು ವಿಧೇಯಕದಲ್ಲಿ ಶಿಫಾರಸು ಮಾಡಲಾಗಿದೆ.

ಸಾಮಾಜಿಕ ಸಾಮರಸ್ಯ ಕದಡುವ ಶಕ್ತಿಗಳಿಗೆ ಕಡಿವಾಣ
ಪ್ರಾಣಿವಧೆ, ಗಾವು ಸಿಗಿಯುವುದು (ಪ್ರಾಣಿಗಳ ರಕ್ತ ಕುಡಿದು ಕೊಲ್ಲುವುದು), ಸಾಮಾಜಿಕ ಸಾಮರಸ್ಯ ಕದಡುವ, ಮೇಲು-ಕೀಳು ಭಾವನೆ ಪ್ರಚೋದಿಸುವ ಅಜಲು ಪದ್ಧತಿ, ಗೆಜ್ಜೆಪೂಜೆ, ಬೆತ್ತಲೆ ಸೇವೆ, ಮಡೆಸ್ನಾನ, ಅಡ್ಡಪಲ್ಲಕ್ಕಿ ಇತ್ಯಾದಿ ಆಚರಣೆಗಳನ್ನು ನಿಷೇಧಿಸಬೇಕು.

ಮಡಿ-ಮೈಲಿಗೆ ನೆಪದಲ್ಲಿ ಅಸ್ಪೃಶ್ಯತೆ ನಿಷಿಧ್ಧ
ಸಾಮೂಹಿಕ ಆಚರಣೆಗಳ ವೇಳೆ ಮಡಿ-ಮೈಲಿಗೆ ನೆಪದಲ್ಲಿ ಯಾವುದೇ ಜಾತಿಯ ಜನರನ್ನು ಹೊರಗಿಡುವ, ಮಾತನಾಡಿಸದಿರುವ, ಮುಟ್ಟದಿರುವ, ಭಕ್ತರಿಂದ ಅರೆ ಬೆತ್ತಲೆ ದೇವದರ್ಶನ ಮಾಡಿಸುವ, ಪ್ರತ್ಯೇಕ ಪಂಕ್ತಿ ಭೋಜನ ಮಾಡುವ ಸಂಪ್ರದಾಯ ನಿಷೇಧವಾಗಬೇಕು. ಸಂತಾನ ಭಾಗ್ಯ ಕರುಣಿಸುವುದಾಗಿ ಹೇಳುವ ಅಥವಾ ನಿಧಿ ಸಂಪಾದನೆ ಮಾಡಿಕೊಡುವುದಾಗಿ ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಳ್ಳುವುದು. ನಿಷಿಧ್ಧ.

ನರಬಲಿಗೆ ಮರಣದಂಡನೆ ಶಿಕ್ಷೆ
ನಿಧಿ ಅಥವಾ ವಾಸ್ತುದೋಷ ಪರಿಹಾರಕ್ಕಾಗಿ ನರಬಲಿ-ಪಶುಬಲಿ ನೀಡುವುದು. ಬೆತ್ತಲೆಸೇವೆ, ಹೆಣ್ಣು ಮಕ್ಕಳಿಗೆ ಮುತ್ತುಕಟ್ಟಿಸಿ ಓಕುಳಿಯಾಡಿ ಬಸವಿ ಬಿಡುವ ಪದ್ಧತಿ ಪಾಲನೆ ಆಥವಾ ಮಳೆ-ಬೆಳೆ ನೆಪದಲ್ಲಿ ಮಹಿಳೆಯರನ್ನು ವ್ಯಭಿಚಾರಕ್ಕೆಳೆಯುವುದು. ಮುಟ್ಟು-ಪ್ರಸವ ಕಾಲದಲ್ಲಿ ಹೆಣ್ಣು ಮಕ್ಕಳನ್ನು ಊರ ಹೊರಗೆ ಇರಿಸುವುದು. ಸಾರ್ವಜನಿಕ ಪೂಜಾ ಸ್ಥಳಗಳಿಗೆ ಮಹಿಳೆ ಅಥವಾ ಪುರುಷರನ್ನು ಬರದಂತೆ ತಡೆಯುವುದು ಸೇರಿದಂತೆ ಸಮಾಜ ವಿರೋಧಿ ಆಚರಣೆಗಳೆಲ್ಲಾ ನಿಷೇಧವಾಗಬೇಕು.

ಪ್ರಾಧಿಕಾರ ರಚನೆಗೆ ಶಿಫಾರಸು:
ಮೌಢ್ಯರಹಿತ ಪ್ರಬುದ್ಧ ಕರ್ನಾಟಕವನ್ನು ಕಟ್ಟಲು ಹಾಗೂ ಅಭಿವೃದ್ಧಿಶೀಲ ಕರ್ನಾಟಕವನ್ನು ರೂಪಿಸಲು ವೈಜ್ಞಾನಿಕ ಪ್ರಾಧಿಕಾರವನ್ನು ಸ್ಥಾಪಿಸಿ, ಸ್ವಾಯತ್ತ ಸ್ಥಾನಮಾನ ನೀಡಬೇಕು. ಕರ್ನಾಟಕ ಹೈಕೋರ್ಟಿನ ನಿವೃತ್ತ ನ್ಯಾಯಾಧೀಶರೊಬ್ಬರನ್ನು ಈ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಿಸಿ, ಮೂಢನಂಬಿಕೆ ಆಚರಣೆ ಮತ್ತು ಅವುಗಳ ದುಷ್ಪರಿಣಾಮಗಳ ಬಗ್ಗೆ ವಿಶೇಷ ಜ್ಞಾನವಿರುವ ಶಿಕ್ಷಣ ತಜ್ಞರು, ಸಾಮಾಜಿಕ ಕಾರ್ಯಕರ್ತರು, ಕಾನೂನು ತಜ್ಞರನ್ನು ಸದಸ್ಯರನ್ನಾಗಿಸಬೇಕು. ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿಯು ಪ್ರಾಧಿಕಾರದ ಸದಸ್ಯರಾಗಿರಬೇಕು. ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಮಾಜಿಸ್ಟ್ರೇಟರ ನೇತೃತ್ವದಲ್ಲಿ ಜಾಗೃತ ಸಮಿತಿ ರಚಿಸಬೇಕು ಎಂದು ಕರಡು ವಿಧೇಯಕದಲ್ಲಿ ಹೇಳಲಾಗಿದೆ.

ವ್ಯಾಪಕ ಪ್ರಚಾರವಾಗಲಿ:
ನಾಟಕ, ಬೀದಿ ನಾಟಕ, ಯಕ್ಷಗಾನ, ಕರಪತ್ರ, ಗೋಡೆ ಬರಹ, ರೇಡಿಯೋ ಅಂತರ್ಜಾಲ ತಾಣ, ಸಿನಿಮಾ, ಪತ್ರಿಕೋದ್ಯಮ, ಪುಸ್ತಕ ಪ್ರಕಾಶನ, ದೂರದರ್ಶನ ಧಾರಾವಾಹಿ, ಸಾಕ್ಷ್ಯ ಚಿತ್ರ- ಕಿರುಚಿತ್ರ ನಿರ್ಮಾಣ, ಸಾರ್ವಜನಿಕ ಜಾಹೀರಾತು, ಪಠ್ಯಕ್ರಮ, ಸಭೆ-ಸಮಾವೇಶ-ವಿಚಾರ ಸಂಕಿರಣ ಮುಂತಾದ ಮಾಧ್ಯಮಗಳನ್ನು ಬಳಸಿಕೊಂಡು ಮೌಡ್ಯಗಳನ್ನು ತೊಡೆದುಹಾಕಲು ಅಭಿಯಾನದ ರೀತಿಯಲ್ಲಿ ವ್ಯಾಪಕ ಪ್ರಚಾರ ಮಾಡಬೇಕು ಎಂದು ಕರಡು ಮಸೂದೆಯಲ್ಲಿ ಶಿಫಾರಸು ಮಾಡಲಾಗಿದೆ.












Click it and Unblock the Notifications