CM Siddaramaiah: ಕಾಂಗ್ರೆಸ್ ಹೈಕಮಾಂಡ್ 'ಸಿದ್ದರಾಮಯ್ಯಗೆ ಸಿಎಂ ಸ್ಥಾನ' ನೀಡಲು ಪ್ರಮುಖ ಕಾರಣಗಳೇನು?
2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 135 ಸ್ಥಾನಗಳನ್ನು ಗೆದ್ದ ಕಾಂಗ್ರೆಸ್ ಪೂರ್ಣ ಬಹುಮತದ ಸರ್ಕಾರ ರಚನೆಗೆ ಸಿದ್ಧವಾಗಿದೆ. ಕಳೆದ ಐದು ದಿನಗಳ ಜಟಾಪಟಿಯ ನಂತರ ಕಾಂಗ್ರೆಸ್ ಹೈಕಮಾಂಡ್ ನೂತನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಿದೆ.
ಕರ್ನಾಟಕ ಸಿಎಂ ಸ್ಥಾನಕ್ಕಾಗಿ ನಡೆದ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ತೀವ್ರ ಪೈಪೋಟಿಯಲ್ಲಿ ಕಾಂಗ್ರೆಸ್ ವರಿಷ್ಠರು ಸಿದ್ದರಾಮಯ್ಯಗೆ ಮಣೆ ಹಾಕಿದ್ದಾರೆ. ಹೈಕಮಾಂಡ್ನ ಸೂತ್ರಕ್ಕೆ ಕೊನೆಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಣಿದಿದ್ದಾರೆ.

ಕಾಂಗ್ರೆಸ್ ಹೈಕಮಾಂಡ್ನ 30:30 ಸೂತ್ರಕ್ಕೆ ಉಭಯ ನಾಯಕರು ಒಪ್ಪಿಗೆ ಸೂಚಿಸಿದ್ದಾರೆ. ಎರಡೂವರೆ ವರ್ಷದ ಬಳಿಕ ಮುಖ್ಯಮಂತ್ರಿ ಸ್ಥಾನವನ್ನು ಡಿ.ಕೆ. ಶಿವಕುಮಾರ್ಗೆ ಬಿಟ್ಟುಕೊಡುವುದಾಗಿ, ಸದ್ಯ ಉಪ ಮುಖ್ಯಮಂತ್ರಿ ಹುದ್ದೆ ಜೊತೆಗೆ ಪ್ರಮುಖ ಖಾತೆಗಳ ಒಪ್ಪಂದದೊಂದಿಗೆ ಸಮ್ಮತಿ ಸೂಚಿಸಿದ್ದಾರೆ.
ಮೊದಲಿಗೆ ಸಿದ್ದರಾಮಯ್ಯಗೆ ಮಣೆ ಕಾರಣಗಳೇನು?
* ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನಗಳೊಂದಿಗೆ ಕಾಂಗ್ರೆಸ್ ಅಭೂತಪೂರ್ವ ಗೆಲುವು ಸಾಧಿಸಿದ ನಂತರ, ಶಾಸಕಾಂಗ ಪಕ್ಷದ ಸಭೆ ಕರೆಯಲಾಯಿತು. ಈ ವೇಳೆ ಸಿಎಲ್ಪಿ ನಾಯಕನನ್ನು ಆಯ್ಕೆ ಮಾಡಲು ವಿಫಲವಾದ ನಂತರ, ಸಿಕ್ರೇಟ್ ವೋಟಿಂಗ್ ನಡೆಸಲಾಯಿತು. ಇದರಲ್ಲಿ ಬಹುತೇಕ ಶಾಸಕರು ಸಿದ್ದರಾಮಯ್ಯ ಪರ ಒಲವು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಈ ಕಾರಣದಿಂದ ಕಾಂಗ್ರೆಸ್ ಹೈಕಮಾಂಡ್ ಕೂಡ ಸಿದ್ದರಾಮಯ್ಯ ಬೆನ್ನಿಗೆ ನಿಂತಿತು.

* 2013ರಿಂದ 2018ರವರೆಗೆ ಸಂಪೂರ್ಣ ಐದು ವರ್ಷಗಳ ಆಡಳಿತ ನೀಡಿದ ಅನುಭವ ಸಿದ್ದರಾಮಯ್ಯ ಅವರಿಗಿದೆ. ಅಲ್ಲದೆ, ಐದು ವರ್ಷದ ಆಡಳಿತದಲ್ಲಿ ತಮ್ಮ ಮೇಲೆ ಯಾವುದೇ ಗುರುತರ ಆರೋಪಗಳು ಬರದಂತೆ ನಿಭಾಯಿಸಿದ್ದಾರೆ. ಇದು ಸಿದ್ದರಾಮಯ್ಯರನ್ನು ಮೊದಲು ಸಿಎಂ ಸ್ಥಾನಕ್ಕೆ ಆಯ್ಕೆ ಮಾಡಲು ಪ್ರಮುಖ ಕಾರಣವಾಗಿದೆ.
* ಸಿದ್ದರಾಮಯ್ಯ ಈ ಬಾರಿಯೂ ಮುಖ್ಯಮಂತ್ರಿಯಾಬೇಕೆಂದು ರಾಜ್ಯದ ಜನರು ಅಪೇಕ್ಷಿಸಿದ್ದರು. ಈ ಕಾರಣಕ್ಕಾಗಿಯೇ ಕೆಲವು ಕ್ಷೇತ್ರಗಳಲ್ಲಿ ಲಿಂಗಾಯತ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಮತಗಳು ಕಾಂಗ್ರೆಸ್ಗೆ ಬಂದಿವೆ. ಕಳೆದ ಬಾರಿಯ ಆಡಳಿತವನ್ನು ಮೆಚ್ಚಿರುವ ರಾಜ್ಯದ ಬಹುತೇಕ ಜನರ ಆಸೆಯೂ ಸಿದ್ದರಾಮಯ್ಯ ಸಿಎಂ ಆಗಬೇಕು ಎನ್ನುವುದಾಗಿತ್ತು.

* ಇನ್ನು ಸಿದ್ದರಾಮಯ್ಯನವರ ವಯಸ್ಸಿನ ಕಾರಣವೂ ಒಂದಾಗಿದೆ. ಈಗಾಗಲೇ 76ರ ಆಸುಪಾಸಿನಲ್ಲಿರುವ ಸಿದ್ದರಾಮಯ್ಯಗೆ ಇನ್ನೆರಡು ವರ್ಷಗಳ ಕಳೆದರೆ, 78 ವರ್ಷಗಳಾಗಲಿವೆ. ಆಗ ಅವರು ರಾಜ್ಯವನ್ನು ಸುತ್ತಾಡಿ ಅಧಿಕಾರ ನಡೆಸುವುದು ಕಷ್ಟಸಾಧ್ಯ. ಈ ಕಾರಣದಿಂದ ಈಗಲೇ ಅವರಿಗೆ ಸಿಎಂ ಸ್ಥಾನ ನೀಡುವುದು ಸೂಕ್ತ ಎಂಬ ನಿರ್ಧಾರಕ್ಕರ ಕಾಂಗ್ರೆಸ್ ಹೈಕಮಾಂಡ್ ಬಂದಿರಬಹುದು.
* ಒಂದು ವೇಳೆ ಸಿದ್ದರಾಮಯ್ಯ ಬದಲಿಗೆ ಡಿ.ಕೆ. ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ನೀಡಿದ್ದರೆ, ಸಿದ್ದರಾಮಯ್ಯನವರ ರಾಜಕೀಯ ಜೀವನವೇ ಅಂತ್ಯವಾಗುವ ಸುಳಿವು ನೀಡಿದಂತಾಗುತ್ತಿತ್ತು. ಈಗಾಗಲೇ ಒಮ್ಮೆ ಸಿಎಂ ಆಗಿರುವ ಸಿದ್ದರಾಮಯ್ಯಗೆ ಅದಕ್ಕೆ ತಕ್ಕನಾದ ಸ್ಥಾನ ಸೃಷ್ಟಿಸಲು ಸಾಧ್ಯವಿಲ್ಲ. ಹೀಗಾಗಿಯೇ ಡಿ.ಕೆ. ಶಿವಕುಮಾರ್ ಅವರಿಗಿಂತ ಮೊದಲು ಸಿದ್ದರಾಮಯ್ಯರನ್ನು ಸಿಎಂ ಮಾಡಲು ಸಾಧ್ಯವಾಗಿದೆ.
* ಸಿದ್ದರಾಮಯ್ಯ ಈಗ ಮುಖ್ಯಮಂತ್ರಿಯಾಗುವುದರಿಂದ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಲಾಭವಾಗುವ ಸಾಧ್ಯತೆಯನ್ನು ಹೈಕಮಾಂಡ್ ಮನಗಂಡಿದೆ. ಸಿದ್ದರಾಮಯ್ಯ ಕಡೆಗಣಿಸಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಹೆಚ್ಚು ಸ್ಥಾನ ನಿರೀಕ್ಷಿಸಲು ಸಾಧ್ಯವಿಲ್ಲ ಎನ್ನುವುದು ಅರಿತ ಕಾರಣ, ದೇಶದಲ್ಲಿ ನೆಲಕಚ್ಚಿರುವ ಕಾಂಗ್ರೆಸ್ಗೆ ಕರ್ನಾಟಕದಿಂದ ಹೆಚ್ಚು ಸ್ಥಾನ ಗಳಿಸಿ, ಕೇಂದ್ರದಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಸಿದ್ದರಾಮಯ್ಯ ನಾಯಕತ್ವದಲ್ಲಿ ರಾಜ್ಯದಲ್ಲಿ ಚುನಾವಣೆ ಎದುರಿಸಲು ಸಜ್ಜಾಗಿದೆ.
* ಸಿದ್ದರಾಮಯ್ಯ ಬದಲಾಗಿ ಡಿ.ಕೆ. ಶಿವಕುಮಾರ್ ಅವರನ್ನು ಸಿಎಂ ಮಾಡಲು ಹೈಕಮಾಂಡ್ಗೆ ಒಲವಿರಲಿಲ್ಲ ಎನ್ನಲಾಗಿದೆ. ಕಾರಣ, ಡಿ.ಕೆ. ಶಿವಕುಮಾರ್ ಮೇಲಿನ ಪ್ರಕರಣಗಳು ಮತ್ತು ತನಿಖೆಗಳು. ಡಿ.ಕೆ. ಶಿವಕುಮಾರ್ ಸಿಎಂ ಆದ ನಂತರ ಕೇಂದ್ರ ತನಿಖಾ ಸಂಸ್ಥೆಗಳ ವಿಚಾರಣೆ ಎದುರಿಸುವ ಸಾಧ್ಯತೆಯೂ ಇತ್ತು. ಇದು ಕಾಂಗ್ರೆಸ್ಗೆ ಮುಜುಗರ ತಂದೊಡ್ಡುವ ಪರಿಸ್ಥಿತಿ ಉಂಟಾಗುವಂತಿತ್ತು. ಆದರೆ, ಕ್ಲೀನ್ ಇಮೇಜ್ ಹೊಂದಿರುವ ಸಿದ್ದರಾಮಗೆ ಮಣೆ ಹಾಕಲು ಕಾಂಗ್ರೆಸ್ ವರಿಷ್ಠರು ನಿರ್ಧರಿಸಿದ್ದಾರೆ ಎನ್ನಬಹುದು.
* ಎಲ್ಲದಕ್ಕಿಂತ ಹೆಚ್ಚಾಗಿ ಸಿದ್ದರಾಮಯ್ಯ ಅವರನ್ನು ಸಿಎಂ ಮಾಡಲು ಕಾಂಗ್ರೆಸ್ ಹೈಕಮಾಂಡ್ ನಾಯಕರು ಬೆನ್ನಿಗೆ ನಿಂತಿದ್ದರು ಎನ್ನಲಾಗಿದೆ. ಸ್ವತಃ ರಾಹುಲ್ ಗಾಂಧಿಯೇ ಸಿದ್ದರಾಮಯ್ಯ ಬೆನ್ನಿಗೆ ನಿಂತಿದ್ದು ಮೊದಲ ಪ್ಲಸ್ ಪಾಯಿಂಟ್ ಆಗಿದೆ. ಇನ್ನು ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿ ಹುದ್ದೆಗೆ ಏರಲು ಕೆ.ಸಿ. ವೇಣುಗೋಪಾಲ್ ಪಾತ್ರವೂ ದೊಡ್ಡದಿದೆ. ಈ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಕೇರಳದ ಕೆ.ಸಿ. ವೇಣುಗೋಪಾಲ್ ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿದ್ದರು ಎನ್ನುವುದನ್ನು ಸ್ಮರಿಸಬಹುದು.











Click it and Unblock the Notifications