ಅಭಿವೃದ್ಧಿ ಹೊಂದಿದ ರಾಜ್ಯ ಮಾಡುತ್ತೇನೆ : ಸಿದ್ದರಾಮಯ್ಯ
ಬೆಂಗಳೂರು, ಮೇ 20 : ಕರ್ನಾಟಕ ರಾಜ್ಯವನ್ನು ಮುಂದಿನ ನಾಲ್ಕು ವರ್ಷಗಳ ಅವಧಿಯಲ್ಲಿ ದೇಶದ ಅಭಿವೃದ್ಧಿ ಹೊಂದಿದ ಐದು ರಾಜ್ಯಗಳ ಸಾಲಿನಲ್ಲಿ ನಿಲ್ಲಿಸುತ್ತೇನೆ, ಇದಕ್ಕೆ ಕೇಂದ್ರ ಸರ್ಕಾರ ನಮಗೆ ಅಗತ್ಯ ಸಹಕಾರ ನೀಡಬೇಕು ಎಂದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸೋಮವಾರ ವಿಧಾನಸೌಧದಲ್ಲಿ ಸರ್ಕಾರದ ಸಾಧನೆಯನ್ನು ತಿಳಿಸುವ 'ನುಡಿದಂತೆ ನಡೆದಿದ್ದೇವೆ' ಎಂಬ ಪುಸ್ತಕವನ್ನು ಸಿದ್ದರಾಮಯ್ಯ ಬಿಡುಗಡೆ ಮಾಡಿದರು. ನಂತರ ಮಾತನಾಡಿದ ಅವರು, ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಪ್ರಮಾಣವನ್ನು ಹೆಚ್ಚಿಸಲಾಗುವುದು. ಪ್ರಣಾಳಿಕೆಯ ಎಲ್ಲ ಅಂಶಗಳನ್ನೂ ಜಾರಿಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ರಾಜ್ಯವನ್ನು ಹಸಿವು ಮುಕ್ತ, ಗುಡಿಸಲು ಮುಕ್ತಗೊಳಿಸುವುದರ ಜತೆಗೆ ನೀರಾವರಿ, ವಿದ್ಯುತ್, ಕೃಷಿ ಹಾಗೂ ಔದ್ಯೋಗಿಕ ಕ್ಷೇತ್ರದಲ್ಲಿ ಆದ್ಯತೆ ಆಧಾರದ ಮೇಲೆ ಬದಲಾವಣೆ ತರಲಾಗುವುದು ಎಂದು ಸಿಎಂ ಹೇಳಿದರು. ದೇಶದ ಅಭಿವೃದ್ಧಿ ಹೊಂದಿದ ಐದು ರಾಜ್ಯಗಳ ಪೈಕಿ ಕರ್ನಾಟಕವೂ ಒಂದಾಗಿರುವ ರೀತಿಯಲ್ಲಿ ನಾಲ್ಕು ವರ್ಷಗಳಲ್ಲಿ ಕೆಲಸ ನಿರ್ವಹಿಸುವುದಾಗಿ ತಿಳಿಸಿದರು.

ಶೇ 97ರಷ್ಟು ತೆರಿಗೆ ಸಂಗ್ರಹ ಮಾಡಿದ್ದೇವೆ
ನಮ್ಮ ಸರ್ಕಾರ ತೆರಿಗೆ ಸಂಗ್ರಹಕ್ಕೆ ಆದ್ಯತೆ ನೀಡಿಲ್ಲ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿವೆ. ತೆರಿಗೆ ಸಂಗ್ರಹಣೆ ಮಾಡದಿದ್ದರೆ, ಅನ್ನಭಾಗ್ಯ, ಕ್ಷೀರಭಾಗ್ಯ, ವಿದ್ಯಾಸಿರಿಯಂಥ ಮಹತ್ವದ ಯೋಜನೆಗಳನ್ನು ಜಾರಿಗೆ ತರಲು ಸಾಧ್ಯವಾಗುತ್ತಿತ್ತೇ? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.

60652 ಕೋಟಿ ತೆರಿಗೆ ಸಂಗ್ರಹ
ರಾಜ್ಯದಲ್ಲಿ 62464 ಕೋಟಿ ತೆರಿಗೆ ಸಂಗ್ರಹದ ಗುರಿ ಹೊಂದಲಾಗಿತ್ತು. ಆದರೆ, 60652 ಕೋಟಿ ಸಂಗ್ರಹಿಸಿದ್ದೇವೆ. 1800 ಕೋಟಿ ತೆರಿಗೆ ಸಂಗ್ರಹದಲ್ಲಿ ಕೊರತೆಯಾಗಿದೆ. ರಾಜ್ಯ ತೆರಿಗೆ ಸಂಗ್ರಹದಲ್ಲಿ ಶೇ.97ರಷ್ಟು ಯಶಸ್ಸು ಸಾಧಿಸಿದೆ ಎಂದು ಸಿಎಂ ಹೇಳಿದರು.

ಎರಡು ಬಜೆಟ್ ಮಂಡಿಸಿದ್ದೇವೆ
ರಾಜ್ಯದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದ ಏಳು ತಿಂಗಳವೊಳಗೆ 2 ಬಜೆಟ್ ಮಂಡಿಸುವ ಅನಿವಾರ್ಯತೆ ಎದುರಾಯಿತು. ವಿವಿಧ ಚುನಾವಣೆಗಳ ಕಾರಣದಿಂದ ಮೂರು ತಿಂಗಳು ನೀತಿ ಸಂಹಿತೆ ಜಾರಿಯಲ್ಲಿತ್ತು. ಆದರೂ ಸರ್ಕಾರ ಘೊಷಣೆ ಮಾಡಿದ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೆ ತಂದಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಅನ್ನಭಾಗ್ಯ ಯೋಜನೆ ತೃಪ್ತಿ ತಂದಿದೆ
ಒಂದು ವರ್ಷದ ಅಧಿಕಾರ ತೃಪ್ತಿ ತಂದಿದೆ ಎಂದು ಹೇಳಿದ ಸಿಎಂ ಸಿದ್ದರಾಮಯ್ಯ ಸರ್ಕಾರ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದೆ. ಇದರಿಂದ 1.2 ಕೋಟಿ ಬಿಪಿಎಲ್ ಕುಟುಂಬಕ್ಕೆ ಅಕ್ಕಿ ನೀಡಲಾಗುತ್ತಿದ್ದು, 3 ಕೋಟಿ ಬಡವರಿಗೆ ಈ ಯೋಜನೆ ತಲುಪಿದೆ. 1.4 ಕೋಟಿ ಮಕ್ಕಳಿಗೆ ಕ್ಷೀರ ಭಾಗ್ಯದಡಿ ಹಾಲು ನೀಡಲಾಗುತ್ತಿದೆ ಎಂದು ಸಿಎಂ ಹೇಳಿದರು.

ಅಕ್ರಮ-ಸಕ್ರಮ ಜಾರಿಗೆ ತರುತ್ತೇವೆ
ಸರ್ಕಾರ ಅಕ್ರಮ-ಸಕ್ರಮ ಯೋಜನೆ ಜಾರಿಗೊಳಿಸಲು ಅಗತ್ಯವಾದ ನಿಯಮಾವಳಿ ರೂಪಿಸುತ್ತಿದೆ. ಈ ಕಾರ್ಯ ಪೂರ್ಣಗೊಂಡ ನಂತರ ಯೋಜನೆ ಜಾರಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಈ ಯೋಜನೆ ಜಾರಿಗೆ ಬಂದ ಮೇಲೆ ಸರ್ಕಾರಕ್ಕೆ ಸುಮಾರು 10 ಸಾವಿರ ಕೋಟಿ ರೂ. ಆದಾಯ ಕ್ರೋಡೀಕರಣದ ಗುರಿ ಹೊಂದಲಾಗಿದೆ ಎಂದರು.












Click it and Unblock the Notifications