ಧರ್ಮದ ಆಧಾರದಲ್ಲಿ ಸಮಾಜ ಒಡೆಯುವವರನ್ನು ಹತ್ತಿಕ್ಕದೇ ಬಿಡೆವು:ಸಿಎಂ
ಚಿಕ್ಕಮಗಳೂರು, ಜನವರಿ 05: ಜನರನ್ನು ಧರ್ಮದ ಆಧಾರದಲ್ಲಿ ಸಮಾಜ ಒಡೆಯುವ ಕೆಲಸಕ್ಕೆ ಕೆಲಸ ಹೇಯಕರ, ಕೋಮುವಾದವನ್ನು ಹತ್ತಿಕ್ಕುವ ಬದ್ಧತೆ ನಮ್ಮ ಸರ್ಕಾರಕ್ಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ಮೂಡಿಗೆರೆಯಲ್ಲಿ ಕೋಟ್ಯಾಂತರ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರ ಜನರ ಆಶೋತ್ತರಗಳಿಗೆ ಸ್ಪಂದಿಸುವ ಕಾರ್ಯ ಮಾಡಿದೆ ಎಂದರು.
ಕಾಫಿ ಬೆಳೆಗಾರರಿಗೆ ವಿಧಿಸಲಾಗುತ್ತಿದ್ದ ಕೃಷಿ ಆದಾಯ ತೆರಿಗೆಯನ್ನು ರದ್ದು ಮಾಡಿರುವುದು ನಮ್ಮ ಸರ್ಕಾರ ಎಂಬುದನ್ನು ನೆನಪಿಸಿದ ಸಿದ್ದರಾಮಯ್ಯ ಅವರು ಕಾಫಿ ಬೆಳೆಗಾರರಿಗೆ ತೊಂದರೆ ಆಗುವ ಯಾವೊಂದು ನಿರ್ಣಯವನ್ನೂ ನಮ್ಮ ಸರ್ಕಾರ ತಳೆದಿಲ್ಲ ಎಂದರು.
ಮೂಡಿಗೆರೆಯಲ್ಲಿ ಅರಣ್ಯ ಇಲಾಖೆ ಭೂಮಿ ಹಾಗೂ ಕಂದಾಯ ಭೂಮಿಗಳನ್ನು ಗುರುತಿಸುವ ಮುಂಚೆ ಕೃಷಿಕರನ್ನು ಒಕ್ಕಲೆಬ್ಬಿಸುವ ಕಾರ್ಯ ಆಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಅರಣ್ಯ ಕಾಯ್ದೆ ಕೇಂದ್ರ ಸರ್ಕಾರದ ಸುಪರ್ದಿಯಲ್ಲಿದೆಯಾದರೂ ಸ್ಥಳೀಯ ಅಧಿಕಾರಿಗಳಿಗೆ ರೈತರನ್ನು ಒಕ್ಕಲೆಬ್ಬಿಸದಂತೆ ಆದೇಶ ನೀಡುವುದಾಗಿ ಹೇಳಿದರು.
ಸಿದ್ದರಾಮಯ್ಯ ಅವರು ಭಾಷಣ ಮುಖ್ಯಾಂಶಗಳನ್ನು ತಿಳಿಯಲು ಮುಂದೆ ಓದಿರಿ...

ಭಾರಿ ಚಪ್ಪಾಳೆ ಗಿಟ್ಟಿಸಿದ ಸಿಎಂ ಮಾತು
'ಅನ್ನಭಾಗ್ಯ' ಯೋಜನೆ ಅಡಿ ಉಚಿತವಾಗಿ ಅಕ್ಕಿ ನೀಡಲು ಪ್ರಾರಂಭಿಸಿದ ಮೇಲೆ ಕೂಲಿ ಆಳುಗಳೇ ಸಿಗುತ್ತಿಲ್ಲ ಎಂದು ಶಾಸಕರೊಬ್ಬರು ನನ್ನನ್ನು ಪ್ರಶ್ನೆ ಮಾಡಿದ್ದರು, ನಾನು ಅವರಿಗೆ ಹೇಳಿದೆ ಬಸವಣ್ಣ ಹೇಳಿದ್ದಾರೆ ಪ್ರತಿಯೊಬ್ಬರು ದುಡಿದೇ ತಿನ್ನಬೇಕೆಂದು ಆ ಬಡವರು ಇಷ್ಟು ದಿನ ನಿಮ್ಮ ಹೊಲಗಳಲ್ಲಿ ಕೂಲಿ ಮಾಡಿ ದುಡಿದಿದ್ದಾರೆ, ನೀವು ಕೂತು ತಿಂದಿದ್ದೀರಿ, ಇನ್ನು ಮುಂದೆ ನೀವು ಕೆಲಸ ಮಾಡಿ ಅವರು ಕೂತು ತಿನ್ನಲಿ ಎಂದಿದ್ದೆ, ಎಂದು ನೆನಪಿಸಿಕೊಂಡರು. ಸಿದ್ದರಾಮಯ್ಯ ಅವರ ಈ ಮಾತಿಗೆ ಭಾರಿ ಕರತಾಡನ, ಶಿಳ್ಳೆ, ಕೇಕೆಗಳು ವ್ಯಕ್ತವಾದವು.

100% ಸರಿ ಇಲ್ಲ
ನಮ್ಮ ಸರ್ಕಾರ 100% ಫರ್ಫೆಕ್ಟ್ ಎನ್ನಲು ಸಾಧ್ಯವಿಲ್ಲ, ಕೆಲವು ತಪ್ಪುಗಳು ನಮ್ಮಿಂದಲೂ ಆಗಿವೆ, ಆದರೆ ಆ ತಪ್ಪುಗಳನ್ನು ಉದ್ದೇಶಪೂರ್ವಕವಾಗಿ ಮಾಡಿದ್ದಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ಪ್ರಜಾಪ್ರಭುತ್ವದಲ್ಲಿ ಟೀಕೆಗಳು ಅವಶ್ಯಕ ಆದರೆ ಅವು ರಚನಾತ್ಮಕವಾಗಿರಬೇಕು ಎಂದು ವಿರೋಧ ಪಕ್ಷಗಳಿಗೆ ಬುದ್ಧಿಮಾತು ಹೇಳಿದರು.

ತನಿಖೆ ಮುಗಿದ ಬಳಿಕ ನಿರ್ಣಯ
ಕಾರ್ಯಕ್ರಮಕ್ಕೆ ಮುಂಚೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು ದೀಪಕ್ ರಾವ್ ಕೊಲೆ ಹಿಂದೆ ರಾಮಲಿಂಗಾ ರೆಡ್ಡಿ ಕೈವಾಡ ಇದೆ ಎಂದು ಯಡಿಯೂರಪ್ಪ ಮಾಡಿರುವ ಆರೋಪ ಬೇಜವಾಬ್ದಾರಿಯಿಂದ ಕೂಡಿದೆ ಎಂದರು. ಪಿಎಫ್ಐ ಅನ್ನು ನಿಷೇಧಿಸುವ ಬಗ್ಗೆ ಮಾತನಾಡಿದ ಅವರು ಕೊಲೆ ತನಿಖೆ ಮುಗಿದ ಬಳಿಕ ಈ ಬಗ್ಗೆ ನಿರ್ಣಯಿಸಲಾಗುವುದು ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಏಕಾಂಗಿ ಸ್ಪರ್ಧೆ
ಕೋಮುವಾದಿ ಶಕ್ತಿಯನ್ನು ಮಣಿಸಲು ದೇಶದಲ್ಲಿ ಮಹಾಮೈತ್ರಿ ಆಗಲಿದೆ ಎಂದು ಸಿಪಿಎಂನ ಸೀತಾರಾಂ ಯೆಚೂರಿ ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ದೇಶದಲ್ಲಿ ಮಹಾಮೈತ್ರಿ ಆಗಬಹುದೇನೊ ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸಿ ವಿಜಯ ಸಾಧಿಸಲಿದೆ ಎಂದರು.












Click it and Unblock the Notifications