ವಸ್ತ್ರ ಸಂಹಿತೆ ಸಮರ್ಥಿಸಿಕೊಂಡ ಸಿಎಂ ಸಿದ್ದು
ಬೆಂಗಳೂರು, ಸೆ.16: ಸರ್ಕಾರಿ ನೌಕರರಿಗೆ ವಸ್ತ್ರ ಸಂಹಿತೆ ಜಾರಿಗೆ ತರುವ ಮೂಲಕ ಹೊಸ ವಿವಾದಕ್ಕೆ ನಾಂದಿ ಹಾಡಿರುವ ರಾಜ್ಯ ಸರ್ಕಾರ ತನ್ನ ನೌಕರರ ಮನ ಒಲಿಸಲು ತೊಡಗಿದೆ. ಸರ್ಕಾರದ ಹೊಸ ನಿಯಮಕ್ಕೆ ಸರ್ಕಾರಿ ನೌಕರರ ಒಕ್ಕೂಟ ತೀವ್ರ ವಿರೋಧ ವ್ಯಕ್ತಪಡಿಸಿದ್ದರೆ, ಸಿಎಂ ಸಿದ್ದರಾಮಯ್ಯ ಅವರು ಡ್ರೆಸ್ ಕೋಡ್ ಇರಲಿ ಒಳ್ಳೆಯದು ಎಂದಿದ್ದಾರೆ.
ಡ್ರೆಸ್ ಕೋಡ್ ಆದೇಶವನ್ನು ತಕ್ಷಣವೇ ವಾಪಸ್ ಪಡೆಯಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಅಧ್ಯಕ್ಷ ನರಸಿಂಹಯ್ಯ ಅವರು ಸೋಮವಾರ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ವಾಟಾಳ್ ಪ್ರತಿಭಟನೆ: ಸರ್ಕಾರದ ಈ ನಿರ್ಧಾರ ಮಿಲಿಟರಿ ಆಡಳಿತ ತರುವ ಮುನ್ಸೂಚನೆ, ಇದು ತಾಲಿಬಾನಿ ಸರ್ಕಾರ ಎಂದು ಮಾಜಿ ಶಾಸಕ ವಾಟಾಳ್ ನಾಗರಾಜ್ ಲೇವಡಿ ಮಾಡಿದ್ದಾರೆ. ಡ್ರೆಸ್ ಕೋಡ್ ವಿರೋಧಿಸಿ ವಿಧಾನಸೌಧದ ಮುಂದೆ ಕಂಬಳಿ ಹೊದ್ದು ಪ್ರತಿಭಟನೆ ನಡೆಸಿದ್ದಾರೆ. ಸರ್ಕಾರ ಕೂಡಲೇ ಡ್ರೆಸ್ ಕೋಡ್ ನಿಯಮವನ್ನು ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಸಿಎಂ ಸಮರ್ಥನೆ: ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಶಿಸ್ತಿಗಾಗಿ ಡ್ರೆಸ್ ಕೋಡ್ ಜಾರಿಗೆ ತರಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಕಚೇರಿಗಳಿಗೆ ಬರುವ ನೌಕರರು ಸಭ್ಯ ಉಡುಗೆ ಧರಿಸಿಯೇ ಬರಬೇಕು ಎಂದು ಕಳೆದ ಶನಿವಾರ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸುತ್ತೋಲೆ ಹೊರಡಿಸಲಾಗಿತ್ತು.
ಕಾರ್ಯದರ್ಶಿಗಳು, ನೌಕರ ಸಂಘಟನೆಗಳ ಜತೆ ಸಮಾಲೋಚನೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದ ಬಳಿಕ ವಸ್ತ್ರ ಸಂಹಿತೆ ಜಾರಿಗೊಳಿಸಲಾಗಿದೆ. ಹೊಸ ನಿಯಮ ಜಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸಮ್ಮತಿಸಿದ್ದಾರೆ ಎಂದು ಆಡಳಿತ ಸುಧಾರಣೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಹೇಳಿದ್ದರು.
ಪುರುಷರು ಪ್ಯಾಂಟ್, ಶರ್ಟ್, ಕುರ್ತಾ, ಪೈಜಾಮ, ಮಹಿಳೆಯರು ಸೀರೆ, ಚೂಡಿದಾರ ಧರಿಸಿ ಬರಬೇಕು. ಪುರುಷರು ಟೀ ಷರ್ಟ್ ಧರಿಸುವಂತಿಲ್ಲ. ಅದೇ ರೀತಿ ಮಹಿಳೆಯರು ಸ್ಕರ್ಟ್, ಟೀ ಷರ್ಟ್ ಮತ್ತು ಜೀನ್ಸ್ ಪ್ಯಾಂಟ್, ಸ್ಲೀವ್ ಲೆಸ್ ಶರ್ಟ್ ಧರಿಸುವಂತಿಲ್ಲ ಎಂದು ವಸ್ತ್ರಸಂಹಿತೆ ನಿಯಮ ಹೇಳುತ್ತದೆ.
ಸರ್ಕಾರದ ಹಾಲಿ ನಿಯಮದಂತೆ ವಾಹನ ಚಾಲಕರು ಹಾಗೂ ಗ್ರೂಪ್ 'ಡಿ' ಸಿಬ್ಬಂದಿ ಮಾತ್ರ ಸಮವಸ್ತ್ರ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಆದರೂ ಬಹುತೇಕರು ಈ ನಿಯಮ ಪಾಲನೆ ಮಾಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಡಿ ದರ್ಜೆ ನೌಕರರು ಸಹ ಇನ್ನು ಮುಂದೆ ನಿಗದಿಪಡಿಸಿರುವ ಸಮವಸ್ತ್ರ ಧರಿಸಲೇಬೇಕು ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿತ್ತು.












Click it and Unblock the Notifications