ಅಶೋಕ್ ಖೇಣಿ ಬೆಂಬಲಕ್ಕೆ ನಿಂತ ಸಿದ್ದರಾಮಯ್ಯ
ನವ ದೆಹಲಿ, ಮಾರ್ಚ್ 06: ನೈಸ್ ಸಂಸ್ಥೆ ಮಾಲೀಕ, ಬೀದರ್ ದಕ್ಷಿಣ ಕ್ಷೇತ್ರ ಶಾಸಕ ಅಶೋಕ್ ಖೇಣಿ ಅವರನ್ನು ಕಾಂಗ್ರೆಸ್ಗೆ ಸೇರ್ಪಡೆಗೊಳಿಸಿಕೊಂಡಿರುವುದಕ್ಕೆ ಕಾಂಗ್ರೆಸ್ನಲ್ಲೇ ಅಪಸ್ವರ ಕೇಳಿಬಂದಿದೆ ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಶೋಕ್ ಖೇಣಿ ಬೆನ್ನಿಗೆ ನಿಂತಿದ್ದಾರೆ.
ದಿಡೀರ್ನೆ ಇಂದು ಹೈಕಮಾಂಡ್ ಭೇಟಿಗೆ ತೆರಳಿದ ಸಿದ್ದರಾಮಯ್ಯ ಅವರು ಅಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ರೈತರಿಗೆ ಭೂಮಿ ವಿಷಯದಲ್ಲಿ ಮೋಸ ಮಾಡಿರುವ ಆರೋಪ ಹೊತ್ತಿರುವ ಅಶೋಕ್ ಖೇಣಿ ಅವರನ್ನು ಕಾಂಗ್ರೆಸ್ಗೆ ಸೇರ್ಪಡೆಗೊಳಿಸಿಕೊಂಡಿರುವುದನ್ನು ಸಮರ್ಥಿಸಿಕೊಂಡಿದ್ದಾರೆ.
ಕಾಂಗ್ರೆಸ್ ಸೇರಿದ ನೈಸ್ ಮುಖ್ಯಸ್ಥ ಅಶೋಕ್ ಖೇಣಿ
ಭ್ರಷ್ಟಾಚಾರದ ಆರೋಪ ಹೊತ್ತಿರುವವರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದೀರಿ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ ಅವರು 'ಅಶೋಕ್ ಖೇಣಿ ಏನು ಯಡಿಯೂರಪ್ಪ ರೀತಿ ಜೈಲಿಗೆ ಹೋಗಿದ್ದಾರಾ?' ಎಂದು ಪ್ರಶ್ನಿಸಿದರು.
ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯೇ ಜೈಲಿಗೆ ಹೋಗಿದ್ದಾರೆ, ಸಾಮಾನ್ಯ ಶಾಸಕನಿಗೂ ಮುಖ್ಯಮಂತ್ರಿ ಅಭ್ಯರ್ಥಿಗೂ ಒಂದೇ ಹೋಲಿಕೆಯಾ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿಯವರೇ ಭ್ರಷ್ಟರು ಎಂದ ಅವರು ಜನಾರ್ಧನ ರೆಡ್ಡಿ ಅವರಿಗಿಂತಲೂ ದೊಡ್ಡ ಭ್ರಷ್ಟ ರಾಜ್ಯದಲ್ಲಿ ಯಾರೂ ಇಲ್ಲ ಎಂದಿದ್ದಾರೆ. ಆ ಮೂಲಕ ಅಶೋಕ್ ಖೇಣಿ ಅವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿಕೊಂಡಿರುವುದನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡಿದ್ದಾರೆ.
ಅಶೋಕ್ ಖೇಣಿ ಕಾಂಗ್ರೆಸ್ ಪಕ್ಷ ಸೇರುವುದಕ್ಕೆ ಹಲವು ಶಾಸಕರು ವಿರೋಧ ವ್ಯಕ್ತಪಡಿಸಿದ್ದರು. ಯಶವಂತಪುರ ಕ್ಷೇತ್ರದ ಶಾಸಕ ಎಸ್.ಟಿ.ಸೋಮಶೇಖರ್, ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ ಮುನಿರತ್ನ ಖೇಣಿ ಅವರನ್ನು ಸೇರಿಸಿಕೊಳ್ಳುವುದು ಬೇಡ ಎಂದು ಪರಮೇಶ್ವರ ಅವರಿಗೆ ದೂರು ನೀಡಿದ್ದರು. ಮಾಜಿ ಮುಖ್ಯಮಂತ್ರಿ ಧರಂ ಸಿಂಗ್ ಪುತ್ರ ಅಜಯ್ ಸಿಂಗ್ ಸಹ ಖೇಣಿ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಿದ್ದರು. ಧರಂ ಸಿಂಗ್ ಅವರ ಅಳಿಯ ಚಂದ್ರಸಿಂಗ್ ಈ ಬಾರಿಯ ಚುನಾವಣೆಯಲ್ಲಿ ಬೀದರ್ ದಕ್ಷಿಣ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
'ಕೈ' ಹಿಡಿದ ಖೇಣಿ, ಕಾಂಗ್ರೆಸ್ ಕಾಲೆಳೆದ ಟ್ವಿಟ್ಟಿಗರು!