ಹೆಲ್ಮೆಟ್ ಕಡ್ಡಾಯ, ಸಿದ್ದರಾಮಯ್ಯ ಸ್ಪಷ್ಟನೆಗಳು
ಬೆಂಗಳೂರು, ಜನವರಿ 20 : 'ದ್ವಿ-ಚಕ್ರ ವಾಹನ ಸವಾರರ ಜೊತೆಗೆ ಹಿಂಬದಿ ಸವಾರರೂ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂಬುದು ಕರ್ನಾಟಕ ಸರ್ಕಾರದ ನಿರ್ಧಾರವಲ್ಲ. ಸುಪ್ರೀಂಕೋರ್ಟ್ ಸೂಚನೆಯನ್ನು ಸರ್ಕಾರ ಪಾಲನೆ ಮಾಡಿದೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದ್ದಾರೆ.
ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯಗೊಳಿಸಿರುವ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ವ್ಯಕ್ತವಾಗುತ್ತಿರುವ ಅಭಿಪ್ರಾಯ, ಆರೋಪ ಮತ್ತು ಸರ್ಕಾರದ ವಿರುದ್ಧದ ಟೀಕೆಗಳ ಹಿನ್ನಲೆಯಲ್ಲಿ ಮುಖ್ಯಮಂತ್ರಿಗಳು ಈ ಸ್ಪಷ್ಟನೆ ನೀಡಿದ್ದಾರೆ. ಕರ್ನಾಟಕ ಸರ್ಕಾರಿ ಈ ನಿಯಮವನ್ನು ಜಾರಿಗೆ ತಂದಿಲ್ಲ ಎಂದು ಅವರು ತಿಳಿಸಿದ್ದಾರೆ. [ನೀವು ಧರಿಸುವ ಹೆಲ್ಮೆಟ್ ಹೀಗಿರಬೇಕು]

ಅಚ್ಚರಿಯನ್ನು ಉಂಟು ಮಾಡಿದೆ : 'ಸಾಮಾಜಿಕ ಜಾಲತಾಣಗಳನ್ನು ಬಳಸುವವರು ಬುದ್ಧಿವಂತ ವರ್ಗದವರು ಎಂದು ಭಾವಿಸಿದ್ದೆ. ಆದರೆ, ಸಾಮಾಜಿಕ ಜಾಲ ತಾಣದಲ್ಲಿ ಹೆಲ್ಮೆಟ್ ತಯಾರಕರು, ವಿತರಕರು ಹಾಗೂ ಮಾರಾಟಗಾರರಿಗೆ ಲಾಭ ಮಾಡಿ ಕೊಡಲು ಈ ನಿಯಮ ಜಾರಿಗೆ ತರಲಾಗಿದೆ ಎಂದು ಆರೋಪಿಸಲಾಗುತ್ತಿದ್ದು, ಇದು ಅಚ್ಚರಿಗೆ ಕಾರಣವಾಗಿದೆ' ಎಂದು ಸಿದ್ದರಾಮಯ್ಯ ಹೇಳಿದ್ದಾರೆ. [ಅಷ್ಟಕ್ಕೂ ಸವಾರರು ಹೆಲ್ಮೆಟ್ ಯಾಕೆ ಧರಿಸಬೇಕು?]
ರಾಜ್ಯದಲ್ಲಿ ರಸ್ತೆ ಅಪಘಾತಗಳಲ್ಲಿ ಮೃತಪಟ್ಟವರಲ್ಲಿ ಶೇಕಡಾ 30 ರಷ್ಟು ಮಂದಿ ಬೈಕ್ ಸವಾರರು ಮತ್ತು ಹಿಂಬದಿ ಸವಾರರಾಗಿದ್ದಾರೆ. ದೇಶದ ಇತರ ರಾಜ್ಯಗಳಲ್ಲಿನ ಅಪಘಾತದ ಅಂಕಿ-ಅಂಶಗಳನ್ನೂ ವೈಜ್ಞಾನಿಕವಾಗಿ ಅಧ್ಯಯನ ಮಾಡಿದ ನಂತರ ಬಂದಿರುವ ವರದಿಯ ಅನ್ವಯ ಸುಪ್ರೀಂಕೋರ್ಟ್ ಹೆಲ್ಮೆಟ್ ಕಡ್ಡಾಯಗೊಳಿಸುವ ನಿರ್ಣಯ ಕೈಗೊಂಡಿದೆ. [ಹೆಲ್ಮೆಟ್ ಕಡ್ಡಾಯ ನಿಯಮಕ್ಕೆ ಬೆಂಗಳೂರು ಮೊದಲ ಚುಂಬನ]
ನ್ಯಾಯಾಲಯದ ಸೂಚನೆಯ ಅನುಷ್ಠಾನಕ್ಕೆ 2014ರ ಮೇ 30 ರಂದು ರಸ್ತೆ ಸುರಕ್ಷತಾ ಸಮಿತಿಯನ್ನು ಕೋರ್ಟ್ ರಚನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಮೋಟಾರು ವಾಹನ ಕಾಯ್ದೆ 1988ರ ಪರಿಚ್ಛೇಧ 129 ಹಾಗೂ ಕರ್ನಾಟಕ ಮೋಟಾರು ವಾಹನ ನಿಯಮಗಳು 1989 ರ ನಿಯಮ 230ರಂತೆ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ.
ಹೆಲ್ಮೆಟ್ ಕಡ್ಡಾಯ ಕಾನೂನು ಅನುಷ್ಠಾನಗೊಳಿಸುವುದು ರಾಜ್ಯ ಸರ್ಕಾರದ ಕರ್ತವ್ಯವಾಗಿದೆ. ಇಲ್ಲವಾದಲ್ಲಿ ನ್ಯಾಯಾಂಗ ನಿಂದನೆಯಾಗುತ್ತದೆ. ಆದಕಾರಣ, ದ್ವಿ-ಚಕ್ರ ವಾಹನಗಳ ಸವಾರರು ಹಾಗೂ ಹಿಂಬದಿ ಸವಾರರು ಹೆಲ್ಮೆಟ್ ಧರಿಸಬೇಕು ಎಂಬುದು ನನ್ನ ಮನವಿಯಾಗಿದೆ ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.












Click it and Unblock the Notifications