ಮಕ್ಕಳ ಹಾಸಿಗೆ ದಿಂಬಿನಲ್ಲಿ ಲೂಟಿ ಹೊಡೆದವರು ಲೆಕ್ಕ ಕೇಳುತ್ತಿದ್ದಾರೆ
ಬೆಂಗಳೂರು, ಜು, 23: ಕಾಂಗ್ರೆಸ್ ಪಕ್ಷದ ಲೆಕ್ಕ ಕೊಡಿ ಬಿಜೆಪಿ ಅಭಿಯಾನಕ್ಕೆ ಬಿಜೆಪಿ ನಾಯಕರೂ ಕೂಡ ಪ್ರತ್ಯುತ್ತರ ಕೊಡುತ್ತಿದ್ದಾರೆ. ಜಂಟಿ ಸುದ್ದಿಗೋಷ್ಠಿಯಲ್ಲಿ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕೋವಿಡ್ ಸಮಯದಲ್ಲಿ ಸರ್ಕಾರ 4,167 ರೂಪಾಯಿಗಳ ಖರೀದಿ ಹಗರಣ ಮಾಡಿದೆ ಎಂಬ ಆರೋಪಕ್ಕೆ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ವಿಧಾನಸೌಧದಲ್ಲಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಮಕ್ಕಳು ಬಳಸುವ ಹಾಸಿಗೆ ದಿಂಬಿನಲ್ಲಿ ಲೂಟಿ ಹೊಡೆದವರು ಈಗ ಲೆಕ್ಕ ಕೇಳುತ್ತಿದ್ದಾರೆ ಎಂದು ರೇಣುಕಾಚಾರ್ಯ ಲೇವಡಿ ಮಾಡಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಅವರು ಐದು ವರ್ಷಗಳ ಕಾಲ ಮುಖ್ಯಮಂತ್ರಿ ಆಗಿದ್ದರು. ಸಮಾಜ ಕಲ್ಯಾಣ ಇಲಾಖೆಯಲ್ಲಿ ಮಕ್ಕಳು ಬಳಸುವ ಹಾಸಿಗೆ ದಿಂಬಿನಲ್ಲಿ ಲೂಟಿ ಮಾಡಿದ್ದರು. ಈಗ ಕೋವಿಡ್-19 ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಸಂಕಷ್ಟ ಕಾಲದಲ್ಲಿಯ ಖರೀದಿಗೆ ಸರ್ಕಾರ ಎಲ್ಲ ದಾಖಲೆಗಳನ್ನೂ ಇಟ್ಟಿದೆ.
ಈಗ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಮಾತನಾಡಲು ಯಾವುದೇ ವಿಚಾರಗಳು ಇಲ್ಲ. ಅದಕ್ಕೆ ಈ ರೀತಿಯ ಆರೋಪಗಳನ್ನು ಮಾಡುತ್ತಿದ್ದಾರೆ. ಸರ್ಕಾರದ ಮೇಲೆ ದಿನನಿತ್ಯ ಆರೋಪಗಳನ್ನು ಮಾಡಲೇಬೇಕು ಎಂದು ಹೀಗೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ವಿರೋಧ ಪಕ್ಷ ನಾಯಕರಾಗಿ ಸರ್ಕಾರಕ್ಕೆ ಕ್ರಿಯಾತ್ಮಕ ಸಲಹೆಗಳನ್ನು ಕೊಡುವ ಕೆಲಸ ಮಾಡಿ ಎಂದು ಸಿದ್ದರಾಮಯ್ಯ ಅವರಿಗೆ ಸಲಹೆ ನೀಡುತ್ತಿದ್ದೇನೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹೇಳಿಕೆ ಕೊಟ್ಟಿದ್ದಾರೆ.












Click it and Unblock the Notifications