ಮಿತ್ರ ಪಕ್ಷ ಕಾಂಗ್ರೆಸ್ ವಿರುದ್ಧ ಅಸಮಾಧಾನ ಹೊರಹಾಕಿದ ಕುಮಾರಸ್ವಾಮಿ
Recommended Video

ಬೆಂಗಳೂರು, ಜನವರಿ 30: ಕಾಂಗ್ರೆಸ್ ನವರು ಒತ್ತಾಯ ಮಾಡಿ ನನ್ನಿಂದ ಕೆಲವು ಆದೇಶ ಮಾಡಿಸಿಕೊಂಡರು. ಆದರೆ ಈಗಲೂ ನಾನು ಸಿಎಂ ಸ್ಥಾನದಲ್ಲಿ ಇರುವುದಕ್ಕೆ ಕಾರಣ ನೀವು ಮಾತ್ರ ಎಂದು ಕುಮಾರಸ್ವಾಮಿ ಅವರು ಜೆಡಿಎಸ್ ಕಾರ್ಯಕರ್ತರನ್ನುದ್ದೇಶಿಸಿ ಹೇಳಿದರು.
ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ಹುದ್ದೆಗೇ ರಾಜೀನಾಮೆ ನೀಡಿದ ಕುಟುಂಬ ನಮ್ಮದು, ಇನ್ನು ಸಿಎಂ ಖುರ್ಚಿಗೆ ಅಂಟಿಕೊಂಡು ಕೂರುತ್ತೇವೆಯಾ? ಎಂದು ಅವರು ಪ್ರಶ್ನಿಸಿದರು.
ದೋಸ್ತಿ ಸರ್ಕಾರ ಕಾಂಗ್ರೆಸ್ ಬಗ್ಗೆ ಹಲವು ದೂರುಗಳನ್ನು ಹೇಳಿದ ಕುಮಾರಸ್ವಾಮಿ, ಮೈತ್ರಿ ಪಕ್ಷಗಳ ಭಿನ್ನಾಬಿಪ್ರಾಯಗಳು ಮುಗಿದಿಲ್ಲ ಎಂಬುದನ್ನು ಮತ್ತೆ ಸಾಬೀತು ಮಾಡಿದರು. ಕಾಂಗ್ರೆಸ್ಗೆ ನೇರವಾಗಿ ಬಿಸಿ ಮುಟ್ಟಿಸಿದ ಅವರು, ನಮ್ಮ ಅನಿವಾರ್ಯತೆ ನಿಮಗಿದೆ ಆದರೆ ನಿಮ್ಮ ಅನಿವಾರ್ಯತೆ ನಮಗಿಲ್ಲ ಎಂದರು.
ಕಾಂಗ್ರೆಸ್ ವಿರುದ್ಧ ಕಠಿಣವಾಗಿಯೇ ಮಾತನಾಡಿದ ಕುಮಾರಸ್ವಾಮಿ, ಕಾಂಗ್ರೆಸ್ ನವರು ನನ್ನ ಮೇಲೆ ಒತ್ತಡ ತಂದು ನಿಗಮ ಮಂಡಳಿ ನೇಮಕ ಮಾಡಿಸಿಕೊಂಡಿದ್ದಾರೆ. ಜೆಡಿಎಸ್ನಲ್ಲೂ ನೇಮಕ ಆಗಬೇಕಿದೆ. ಸದ್ಯದಲ್ಲಿ ಮಾಡುತ್ತೇವೆ. ನಿಗಮ, ಮಂಡಳಿ ನೇಮಕ ಮಾಡದೇ ಹಣ ಉಳಿಸಬೇಕು ಅಂದುಕೊಂಡಿದ್ದೆ. ಆದರೆ ಈಗ ಹಾಗೆ ಮಾಡಲು ಸಾಧ್ಯವಿಲ್ಲ ಎಂದರು.

'ವರ್ಗಾವಣೆ ಮಾಡಬೇಕೋ ಆಡಳಿತ ಮಾಡಬೇಕೊ?'
ಒಂದೂ ವರ್ಗಾವಣೆ ಆಗುತ್ತಿಲ್ಲ ಎಂದು ವಾಟ್ಸಾಪ್ನಲ್ಲಿ ಸಂದೇಶ ಹರಿಬಿಟ್ಟಿದ್ದಾರೆ. ರಾಜ್ಯಕ್ಕೆ ಏನಾದರೂ ಒಳ್ಳೆಯದಾಗುವ ಕೆಲಸ ಮಾಡಬೇಕೋ ಅಥವಾ ಇವರ ವರ್ಗಾವಣೆ ಕೆಲಸ ಮಾಡಬೇಕೋ ನಾನು? ಎಂದು ಪ್ರಶ್ನೆ ಮಾಡಿದ ಎಚ್ಡಿಕೆ, ಇವರ ವರ್ಗಾವಣೆ ದಂಧೆ ಮಾಡಿಕೊಂಡು ಕೂತರೆ ರಾಜ್ಯದ ಜನ ನನ್ನ ಬಗ್ಗೆ ಏನು ತಿಳಿದುಕೊಳ್ಳುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

'ಎಷ್ಟು ದಿನ ಸಹಿಸಿಕೊಳ್ಳಲು ಸಾಧ್ಯ?'
ಸಿದ್ದರಾಮಯ್ಯ ಸಿಎಂ ಎಂದು ಕಾಂಗ್ರೆಸ್ ಶಾಸಕರು ಹೇಳಿದ ವಿಷಯದ ಬಗ್ಗೆ ಪರೋಕ್ಷವಾಗಿ ಉತ್ತರಿಸಿದ ಸಿಎಂ, ಕೆಲವರು ನನ್ನ ಬಗ್ಗೆ ಪದೇ ಪದೇ ಚರ್ಚೆ ಮಾಡುತ್ತಾರೆ. ಎಷ್ಟು ದಿನ ಇದನ್ನೆಲ್ಲಾ ಸಹಿಸಿಕೊಳ್ಳಲು ಸಾಧ್ಯ. ಅಧಿಕಾರ ಏನು ಶಾಶ್ವತವೇ? ಈ ರೀತಿ ಕೆಲಸ ಮಾಡೋದಕ್ಕಿಂತ ಅಧಿಕಾರ ಬಿಡಲು ಸಿದ್ದ ಎಂದಿದ್ದೇನೆ ಎಂದರು.

ಸೋಮಶೇಖರ್ಗೆ ತಿರುಗೇಟು
ಬೆಂಗಳೂರಲ್ಲಿ ಕೆಲಸಗಳೇ ಆಗಿಲ್ಲ ಎಂದಿದ್ದ ಸೋಮಶೇಖರ್ ಅವರ ಮಾತಿಗೆ ಉತ್ತರಿಸಿದ ಕುಮಾರಸ್ವಾಮಿ, ಈಗಾಗಲೇ ನಗರದಲ್ಲಿ ₹1 ಲಕ್ಷ ಕೋಟಿಯಷ್ಟು ಕೆಲಸದ ಆದೇಶವಾಗಿದೆ. 12 ವರ್ಷದಿಂದ ಆಗದ ಕೆಲಸ ಈಗ ಆರಂಭವಾಗುತ್ತಿದೆ ಎಂದರು. ಅಲ್ಲದೆ ಈ ಬಜೆಟ್ನಲ್ಲಿ 44 ಲಕ್ಷ ರೈತರ ಸಾಲಮನ್ನಾ ಆಗಲಿದೆ ಎಂದರು.

ಕೇಂದ್ರದ ವಿರುದ್ಧವೂ ಟೀಕಾಪ್ರಹಾರ
ಕೇಂದ್ರ ಸರ್ಕಾರದ ವಿರುದ್ಧವೂ ಟೀಕಾಪ್ರಹಾರ ನಡೆಸಿದ ಕುಮಾರಸ್ವಾಮಿ, ಕೇವಲ 900 ಕೋಟಿ ಬರಪರಿಹಾರ ಕೊಟ್ಟಿದ್ದಾರೆ ಆದರೆ ನಾವು ಕೇಳಿದ್ದು 4500 ಕೋಟಿ. ಇವರೇನು ಭಿಕ್ಷೆ ಹಾಕುತ್ತಿದ್ದಾರಾ? ಎಂದರು. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ 10 ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ ಸಾಕು ಕೇಂದ್ರ ಸರ್ಕಾರ ನಿಮ್ಮ ಮನೆ ಬಾಗಿಲಿಗೆ ಬರುವಂತೆ ಮಾಡುತ್ತೇವೆ ಎಂದು ಕುಮಾರಸ್ವಾಮಿ ಹೇಳಿದರು.












Click it and Unblock the Notifications