ಫೆಬ್ರವರಿ ಅಂತ್ಯದೊಳಗೆ 7 ಲಕ್ಷ ಮನೆಗಳನ್ನು ಪೂರ್ಣಗೊಳಿಸಲು ಬೊಮ್ಮಾಯಿ ಸೂಚನೆ
ಬೆಂಗಳೂರು, ನವೆಂಬರ್ 21: ಫೆಬ್ರವರಿ ಅಂತ್ಯದೊಳಗೆ 7 ಲಕ್ಷ ಮನೆಗಳನ್ನು ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ. ಸೋಮವಾರ ಗೃಹ ಕಚೇರಿ ಕೃಷ್ಣದಲ್ಲಿ ವಸತಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ''ನಿರ್ಮಾಣದ ವಿವಿಧ ಹಂತಗಳಲ್ಲಿರುವ ಮನೆಗಳನ್ನು ಪೂರ್ಣಗೊಳಿಸಲು ಕ್ರಮ ವಹಿಸಬೇಕು. ಇದೊಂದು ಆಂದೋಲನದ ರೀತಿಯಲ್ಲಿ ಕೈಗೊಂಡು ಅಗತ್ಯವಿರುವ ಸಿಬ್ಬಂದಿ ಪೂರೈಸುವುದಾಗಿ ತಿಳಿಸಿದರು. ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡಿ ಸಭೆ ನಡೆಸಿ ಸ್ಥಳದಲ್ಲಿಯೇ ಸಮಸ್ಯೆಗಳನ್ನು ಇತ್ಯರ್ಥಗೊಳಿಸಬೇಕು'' ಎಂದು ಸೂಚಿಸಿದರು.
ಎಲ್ಲಾ ಕೆಡಿಪಿ ಸಭೆಗಳಲ್ಲಿ ವಿವಿಧ ವಸತಿ ಯೋಜನೆಗಳಡಿ ಗೃಹ ನಿರ್ಮಾಣ ಪ್ರಮುಖ ವಿಷಯವಾಗಬೇಕು. ಹಿಂದಿನ ವರ್ಷಗಳ ಮನೆಗಳ ಪೈಕಿ 2 ಲಕ್ಷ ಹೆಚ್ಚಿನ ಮನೆಗಳು ಹಾಗೂ ಪ್ರಸಕ್ತ ಸಾಲಿನ 2 ರಿಂದ 3 ಲಕ್ಷ ಮನೆಗಳನ್ನು ಪೂರ್ಣಗೊಳಿಸಲು ಮುಖ್ಯಮಂತ್ರಿಗಳು ಸೂಚಿಸಿದರು. ನಗರ ಪ್ರದೇಶಕ್ಕೆ ಸಂಬಂಧಿಸಿದಂತೆ ಖಾಸಗಿ ಬ್ಯಾಂಕ್ ಗಳ ಮುಖ್ಯಸ್ಥರ ಸಭೆ ಕರೆದು ಸಾಲ ನೀಡುವ ನಿಯಮಗಳ ಬಗ್ಗೆ ಚರ್ಚಿಸಲು ಸೂಚಿಸಿದರು.
20 ಸಾವಿರ ಮನೆ ನಿರ್ಮಾಣ ಮಾಡಲು ಅನುದಾನದ ಕೊರತೆಯಾಗದಂತೆ ಕ್ರಮ ವಹಿಸಲಾಗುವುದು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನ ಒಟ್ಟು 1089 ಕೋಟಿ ಲಭ್ಯವಿದ್ದು, ಫಲಾನುಭವಿಗಳು ನೀಡಬೇಕಿರುವ ಅನುದಾನ ಸರ್ಕಾರವೇ ಸಾಲ ನೀಡಿ, ಫಲಾನುಭವಿಗಳು ಹಣ ಮರುಪಾವತಿ ಮಾಡುವ ಷರತ್ತು ವಿಧಿಸಿ, ಕಂತಿನ ಮೊತ್ತವನ್ನು ಸರ್ಕಾರಕ್ಕೆ ಮರುಪಾವತಿ ಮಾಡುವಂತೆ ಸಿಎಂ ಸೂಚಿಸಿದರು.

18 ಲಕ್ಷ ಮನೆ ನೋಂದಣಿ
ಕರ್ನಾಟಕದಲ್ಲಿ ವಸತಿ ನಿರ್ಮಾಣ, ಗೃಹ ನಿರ್ಮಾಣ ಕಳೆದ 3 ವರ್ಷದಲ್ಲಿ ದೊಡ್ಡ ಮಟ್ಟದಲ್ಲಿ ತೆಗೆದುಕೊಂಡಿದ್ದೇವೆ. 2018 ರಲ್ಲಿ ಸರ್ಕಾರದ ಅವಧಿ ಇನ್ನು 2 ತಿಂಗಳು ಇರುವಾಗಲೇ ಬಜೆಟ್ ನಲ್ಲಿ ಹಿಂದಿನ ಸರ್ಕಾರ ಲಕ್ಷ ಮನೆ ನಿರ್ಮಾಣ ಘೋಷಿಸಿತ್ತು. ಆದರೆ ಹಣ ಮೀಸಲಿಟ್ಟಿರಲಿಲ್ಲ, ಪ್ರಧಾನಮಂತ್ರಿ ವಸತಿ ಯೋಜನೆಯನ್ನೆ ಕಡೆಗಣಿಸಿದ್ರು. ನಮ್ಮ ಸರ್ಕಾರ ಬಂದ ಮೇಲೆ, 18 ಲಕ್ಷ ಮನೆಯನ್ನು ನೋಂದಣಿ ಮಾಡಿದ್ದೇವೆ. ನಾವು ಬಂದ ಮೇಲೆ 5 ಲಕ್ಷ ಮನೆ ನಾವು ಮಾಡಿದ್ದೇವೆ. ಬೆಂಗಳೂರಿನಲ್ಲಿ 1 ಲಕ್ಷ ಮನೆ ನಿರ್ಮಾಣ ಯೋಜನೆ ಇದೆ. ಈಗಾಗಲೇ 20 ಸಾವಿರ ಮನೆ ನಿರ್ಮಾಣ ಆಗಿದೆ. ಕೂಡಲೇ ಅದರ ಉದ್ಘಾಟನೆಯನ್ನು ಮಾಡಲಿದ್ದೇವೆ. ಇದು ಜನಪರ ಸರ್ಕಾರ, ರಾಜ್ಯದ ಹಿತಾಸಕ್ತಿಗೆ ಯಾವ ರೀತಿ ಕೆಲಸ ಮಾಡ್ತಿದ್ದೇವೆ ಎಂದು ತೋರಿಸುತ್ತೆ ಎಂದು ತಿಳಿಸಿದರು

ಸಭೆಯಲ್ಲಿ ವಸತಿ ಸಚಿವ ವಿ.ಸೋಮಣ್ಣ, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್.ಪ್ರಸಾದ್, ವಸತಿ ಇಲಾಖೆ ಕಾರ್ಯದರ್ಶಿ ಡಾ: ಜೆ.ರವಿಶಂಕರ್, ಗೃಹ ಮಂಡಳಿ ಆಯುಕ್ತೆ ಕವಿತಾ.ಎಸ್.ಮಣ್ಣಿಕೇರಿ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಮೊದಲಾದವರು ಉಪಸ್ಥಿತರಿದ್ದರು.












Click it and Unblock the Notifications