Breaking: ರಾಹುಲ್ ಗಾಂಧಿ ಪತ್ರಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಸ್ಪಂದನೆ
ಬೆಂಗಳೂರು, ಅ. 06: ಗಾಯಗೊಂಡಿದ್ದ ಆನೆ ಮರಿಯ ಚಿಕಿತ್ಸೆ ಕುರಿತು ರಾಹುಲ್ ಗಾಂಧಿ ಪತ್ರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಂದಿಸಿದ್ದಾರೆ. ರಾಹುಲ್ ಗಾಂಧಿ ಅವರ ಮಾತನ್ನು ಪರಿಗಣಿಸಲಾಗುವುದು, ಚಿಕಿತ್ಸೆ ನೀಡುವ ಕುರಿತು ಚರ್ಚಿಸಲಾಗುವುದು ಎಂದು ಹೇಳಿದರು.
ಸಫಾರಿ ವೇಳೆ ಗಾಯಗೊಂಡಿದ್ದ ಆನೆ ಮರಿ ಕಂಡು ಮರುಗಿದ ಕಾಂಗ್ರೆಸ್ನ ರಾಹುಲ್ ಗಾಂಧಿ ಅವರು ತುರ್ತು ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಈ ಹಿಂದೆ ಪತ್ರ ಬರೆದಿದ್ದರು.
ಕರ್ನಾಟಕ: ಗಾಯಗೊಂಡ ಆನೆ ಮರಿಗೆ ಚಿಕಿತ್ಸೆ ಕೊಡಿಸುವಂತೆ ಸಿಎಂಗೆ ರಾಹುಲ್ ಗಾಂಧಿ ಪತ್ರ
ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಹಾಗೂ ರಾಹುಲ್ ಗಾಂಧಿ ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಸಫಾರಿಗೆ ಬುಧವಾರ ತೆರಳಿದ್ದರು. ಈ ವೇಳೆ ಗಾಯಗೊಂಡಿದ್ದ ಆನೆ ಮರಿ ಕಂಡು ಮರುಗಿದ್ದಾರೆ. ಸಫಾರಿ ಮುಗಿಸಿ ಬಂದ ಬಳಿಕ ರಾಹುಲ್ ಗಾಂಧಿ ಕೂಡಲೇ ಮುಖ್ಯಮಂತ್ರಿಗಳಿಗೆ ಪತ್ರ ಬರೆದು, ಆನೆ ಮರಿಗೆ ಸೂಕ್ತ ಚಿಕಿತ್ಸೆ ಕಲ್ಪಿಸುವಂತೆ ಒತ್ತಾಯಿಸಿದ್ದರು.
ಮರಿ ಆನೆಗೆ ಬಾಲ ಹಾಗೂ ಸೊಂಡಿಲಿನಲ್ಲಿ ಗಾಯಗಳು ಆಗಿವೆ. ನೋವಿನಿಂದ ಅದು ನರಳಾಡುತ್ತಿದ್ದು, ಜೀವ ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದೆ. ನಿಸರ್ಗದತ್ತವಾಗಿ ಗುಣವಾಗಬಹುದು ಎಂದು ಅಭಿಪ್ರಾಯವು ಇದೆ. ಆದರೆ ಅಳಿವಿನಂಚಿನಲ್ಲಿರುವ ಪ್ರಭೇದಗಳ ಹಾಗೂ ಮೂಕ ಪ್ರಾಣಿಗಳು ಕ್ಲಿಷ್ಟ ಪರಿಸ್ಥಿತಿಯಲ್ಲಿದ್ದಾಗ ನೈಸರ್ಗಿಕ ಪ್ರಕ್ರಿಯೆ ಹೊರತಾಗಿ ಯೋಚಿಸಬೇಕಾಗುತ್ತದೆ. ಹೀಗಾಗಿ ಈ ಆನೆ ಮರಿಗೆ ತುರ್ತಾಗಿ ವೈದ್ಯಕೀಯ ನೆರವು ಬೇಕಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದರು.
ಪತ್ರಕ್ಕೆ ಸ್ಪಂದಿಸಿರುವ ಸಿಎಂ ಬಸವರಾಜ ಬೊಮ್ಮಾಯಿ, ಗುರುವಾರ ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡುವ ವೇಳೆ ಅರಣ್ಯ ಅಧಿಕಾರಿಗಳ ಜೊತೆಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
"ರಾಹುಲ್ ಗಾಂಧಿ ಪತ್ರ ಬರೆದಿದ್ದಾರೆ. ನಾನು ಈಗ ತಾನೇ ಬೆಂಗಳೂರಿಗೆ ಬಂದಿದ್ದೇನೆ. ಇನ್ನು ಅರ್ಧ ಗಂಟೆಯಲ್ಲಿ ಎಲ್ಲಾ ವರದಿ ತರಿಸಕೊಂಡು, ಹಿರಿಯ ಅರಣ್ಯ ಅಧಿಕಾರಿಗಳ ಜೊತೆ ಮಾತನಾಡಿ ಕೂಡಲೆ ಏನೇನು ಮಾಡಬೇಕು ಎಂದು ಚರ್ಚಿಸುತ್ತೇನೆ" ಎಂದರು.
"ಗಾಯಗೊಂಡಿರುವ ಆನೆ ಮರಿ ಚಿಕಿತ್ಸೆಗೆ ಏನೇನು ಕ್ರಮ ಕೈಗೊಳ್ಳಬೇಕು ಎಂಬುದನ್ನು ನೋಡುತ್ತೇನೆ. ರಾಹುಲ್ ಗಾಂಧಿಯವರ ಪತ್ರಕ್ಕೆ ಪ್ರತಿಕ್ರಿಯೆ ನೀಡುತ್ತೇನೆ" ಎಂದು ತಿಳಿಸಿದರು.
ಈ ವೇಳೆ ಸೋನಿಯಾ ಗಾಂಧಿ ಭಾರತ ಐಕ್ಯತಾ ಯಾತ್ರೆಯಲ್ಲಿ ಪಾಲ್ಗೊಂಡ ಬಗ್ಗೆ ಪ್ರಶ್ನಿಸಿದ ಪತ್ರಕರ್ತರಿಗೆ, "ಎಲ್ಲಾ ಪಕ್ಷದ ನಾಯಕರು ಅವರ ಪಕ್ಷದ ಪರವಾಗಿ ಕೆಲಸ ಮಾಡುತ್ತಾರೆ. ಸೋನಿಯಾ ಗಾಂಧಿಯವರು ಪಾದಯಾತ್ರೆಯಲ್ಲು ಭಾಗವಹಿಸಿದ್ದು, ನಮ್ಮ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ" ಎಂದರು.