ರಾಜ್ಯ ಬಜೆಟ್ ಕುರಿತು ದೆಹಲಿಯ ಪಂಚತಾರಾ ಹೋಟೆಲ್ನಲ್ಲಿ ಸಂಸದರೊಂದಿಗೆ ಸಿಎಂ ಚರ್ಚೆ
ಬೆಂಗಳೂರು, ಫೆ.7: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಮವಾರ (ಫೆ.7) ಬೆಳಗ್ಗೆ ದೆಹಲಿಗೆ ಪ್ರಯಾಣಿಸುತ್ತಿದ್ದು, ರಾಜ್ಯದ ಸಂಸದರೊಂದಿಗೆ ಬಜೆಟ್ ಪೂರ್ವಭಾವಿ ಸಭೆ ನಡೆಸಲಿದ್ದಾರೆ.
ಸಿಎಂ ಬೊಮ್ಮಾಯಿ ಎರಡು ದಿನಗಳ ದೆಹಲಿ ಪ್ರವಾಸ ಹಮ್ಮಿಕೊಂಡಿದ್ದಾರೆ. ಬಜೆಟ್ಗೆ ಪೂರ್ವಭಾವಿಯಾಗಿ ರಾಜ್ಯದ ಸಂಸದರನ್ನು ಭೇಟಿ ಮಾಡಲಿರುವ ಮುಖ್ಯಮಂತ್ರಿಗಳು ರಾಜ್ಯದ ಹಲವು ಯೋಜನೆಗಳ ಕುರಿತು ಚರ್ಚೆ ಮಾಡಲಿದ್ದಾರೆ.
ನವದೆಹಲಿಯ ಹೋಟೆಲ್ ತಾಜ್ ಮಾನ್ಸಿಂಗ್ನಲ್ಲಿ ಸಂಸದರೊಂದಿಗೆ ಭೇಟಿ ನಿಗದಿಯಾಗಿದೆ. ಮಧ್ಯಾಹ್ನ ಒಂದು ಗಂಟೆಗೆ ಈ ಹೋಟೆಲ್ನಲ್ಲಿ ಭೋಜನ ವ್ಯವಸ್ಥೆಯ ಸಮೇತ ರಾಜ್ಯ ಬಜೆಟ್ ಕುರಿತು ಚರ್ಚೆ ನಡೆಯುತ್ತದೆ.

ಕೇಂದ್ರ ಬಜೆಟ್ ಆಗಿದ್ದು, ಮುಂದಿನ ತಿಂಗಳು ರಾಜ್ಯ ಬಜೆಟ್ ಇರುವ ಹಿನ್ನೆಲೆಯಲ್ಲಿ ಹಲವಾರು ಯೋಜನೆಗಳ ಬಗ್ಗೆ ಚರ್ಚಿಸಲು ರಾಜ್ಯದ ಸಂಸದರೊಂದಿಗೆ ಸಭೆ ನಡೆಸಲಿದ್ದೇನೆ. ಕೇಂದ್ರ ಹಣಕಾಸು ಸಚಿವರ ಭೇಟಿಗೆ ಸಮಯ ಕೋರಲಾಗಿದೆ. ರಾಜ್ಯ ಬಜೆಟ್, ಹಣಕಾಸಿನ ಪರಿಸ್ಥಿತಿ, ಜಿಎಸ್ಟಿ ಸಹಿತ ಇನ್ನಿತರ ವಿಷಯಗಳ ಬಗ್ಗೆ ಚರ್ಚಿಸಲು ಉದ್ದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಎರಡು ದಿನಗಳ ದೆಹಲಿ ಪ್ರವಾಸ ಹಮ್ಮಿಕೊಂಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ರಾತ್ರಿ ಕರ್ನಾಟಕ ಭವನದಲ್ಲಿಯೇ ತಂಗಲಿದ್ದಾರೆ. ಅಂತರರಾಜ್ಯ ಜಲವಿವಾದವನ್ನು ಪ್ರತಿನಿಧಿಸುತ್ತಿರುವ ವಕೀಲರ ತಂಡದೊಂದಿಗೆ ಮಂಗಳವಾರ (ಫೆ.8) ಚರ್ಚಿಸಿ, ರಾಜ್ಯದ ಮುಂದಿನ ನಡೆಯ ಬಗ್ಗೆ ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲಿದ್ದಾರೆ.
ಸಂಪುಟ ವಿಸ್ತರಣೆ ಕುರಿತು ಚರ್ಚೆ:
Recommended Video
ಮುಖ್ಯಮಂತ್ರಿ ದೆಹಲಿ ಭೇಟಿ ಸಂದರ್ಭದಲ್ಲಿಯೇ ಪಕ್ಷದ ವರಿಷ್ಠರ ಭೇಟಿಗೂ ಸಮಯಾವಕಾಶ ಕೇಳಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆಯ ಬಗ್ಗೆಯೂ ಚರ್ಚೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಸಂಕ್ರಾಂತಿ ಬಳಿಕ ಸಂಪುಟದಲ್ಲಿ ಖಾತೆ ಬದಲಾವಣೆ, ಕೆಲವರನ್ನು ಸಂಪುಟದಿಂದ ಕೈಬಿಟ್ಟು ಪಕ್ಷದ ಸಂಘಟನೆಗೆ ಬಳಸಿಕೊಳ್ಳುವುದು ಹಾಗೂ ಕೆಲವು ಕಿರಿಯರಿಗೆ ಸಚಿವ ಸ್ಥಾನದ ಜವಾಬ್ದಾರಿ ನೀಡಿ ಮುಂದಿನ ಚುನಾವಣೆಗೆ ಉತ್ಸಾಹ ತುಂಬುವಂತಹ ಬದಲಾವಣೆ ನಡೆಯಲಿದೆ ಎಂದು ಹೇಳಲಾಗಿತ್ತು. ಆದರೆ, ಇದಕ್ಕೆ ಕೇಂದ್ರ ನಾಯಕರು ಇನ್ನೂ ಒಪ್ಪಿಗೆ ಸೂಚಿಸಿರಲಿಲ್ಲ. ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಈಗ ಸಚಿವ ಸಂಪುಟ ವಿಸ್ತರಣೆ ಬಗ್ಗೆಯೂ ಚರ್ಚೆ ನಡೆಸುವ ಸಾಧ್ಯತೆ ಇದೆ ಎಂದು ಎನ್ನಲಾಗಿದೆ. ಒಂದು ವೇಳೆ ಅನುಮತಿ ದೊರೆತರೆ ರಾಜ್ಯದಲ್ಲಿ ಶೀಘ್ರ ಸಚಿವ ಸಂಪುಟ ವಿಸ್ತರಣೆಯೂ ಆಗಬಹುದು ಎಂದು ನಿರೀಕ್ಷಿಸಲಾಗುತ್ತಿದೆ.












Click it and Unblock the Notifications