ಇಂಟೆಗ್ರೇಟೆಡ್ ಟೌನ್ಷಿಪ್ ಯೋಜನೆ ಜಾರಿಗೆ ಸಿಎಂ ಸಲಹೆ
ಬೆಂಗಳೂರು, ಆಗಸ್ಟ್ 19: ಆಯವ್ಯಯ ಘೋಷಣೆಯಂತೆ ಪ್ರತಿ ವಿಭಾಗದಲ್ಲಿ ಒಂದು ಪರಿಸರ ಸ್ನೇಹಿ ಸ್ಮಾರ್ಟ್ ಇಂಟೆಗ್ರೇಟೆಡ್ ಟೌನ್ಷಿಪ್ ಯೋಜನೆ ಜಾರಿಗೆ ನಗರ ಯೋಜನೆ ವ್ಯಾಪ್ತಿಯಲ್ಲಿ ಪರಿಣಿತಿ ಹೊಂದಿದ ವಿಶ್ವವಿದ್ಯಾಲಯಗಳ ಸಹಯೋಗ ಪಡೆಯುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೂಚಿಸಿದರು.
ಶುಕ್ರವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂಟೆಗ್ರೇಟೆಡ್ ಟೌನ್ಶಿಪ್ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಿದರು. ಸಿಂಗಾಪೂರ್ ವಿಶ್ವವಿದ್ಯಾಲಯ ಮತ್ತು ಇತರ ಕೆಲವು ವಿಶ್ವವಿದ್ಯಾಲಯಗಳು ನಗರ ಯೋಜನೆಯಲ್ಲಿ ವಿಶೇಷ ಪರಿಣತಿ ಹೊಂದಿವೆ. ಅವುಗಳ ನೆರವು ಪಡೆಯುವಂತೆ ಅವರು ತಿಳಿಸಿದರು.
ಈ ಟೌನ್ಷಿಪ್ಗಳು ಪರಿಸರ ಸ್ನೇಹಿ ಹಾಗೂ ಸ್ಮಾರ್ಟ್ ನಗರಗಳಾಗಿವೆ. ವಸತಿ, ಅಗತ್ಯ ಮೂಲ ಸೌಕರ್ಯಗಳು, ಶೈಕ್ಷಣಿಕ ಸೌಲಭ್ಯ, ಆರೋಗ್ಯ ಸೇವೆಗಳು, ವಾಣಿಜ್ಯ ಚಟುವಟಿಕೆಗಳು ಹಾಗೂ ಸಮೀಪದಲ್ಲಿಯೇ ಕೈಗಾರಿಕೆಗಳೂ ಸ್ಥಾಪಿಸುವಂತಿರಬೇಕು. ಅತ್ಯುತ್ತಮ ಸಾರಿಗೆ ಸಂಪರ್ಕ ಹೊಂದಿರಬೇಕು ಎಂದು ಬೊಮ್ಮಾಯಿ ಹೇಳಿದರು.
ವಿವಿಧ ಜಿಲ್ಲೆಗಳಿಂದ ಪ್ರಸ್ತಾವನೆ ಸ್ವೀಕರಿಸಲಾಗಿದೆ
ಈ ಟೌನ್ಷಿಪ್ ನಿರ್ಮಾಣಕ್ಕೆ ಭೂಮಿಯ ಲಭ್ಯತೆಯ ಆಧಾರದಲ್ಲಿ ವಿವಿಧ ಜಿಲ್ಲೆಗಳಿಂದ ಪ್ರಸ್ತಾವನೆಗಳನ್ನು ಸ್ವೀಕರಿಸಲಾಗಿದೆ. ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗುವ ಈ ಯೋಜನೆಗೆ ಕಾನ್ಸೆಪ್ಟ್ ಪೇಪರ್ (ವರದಿ) ಸಿದ್ಧಪಡಿಸಿ ಸಲ್ಲಿಸುವಂತೆ ಸೂಚಿಸಿದರು.
ರಾಜ್ಯ ಸರ್ಕಾರ ಕೈಗಾರಿಕೆ ಅಭಿವೃದ್ಧಿಗೆ, ಕನಾಟಕದಲ್ಲಿ ಉದ್ಯಮ ಸ್ನೇಹಿ ವಾತಾವರಣ ನಿರ್ಮಿಸಲು ಹಲವು ಒಪ್ಪಂದು ಮಾಡಿಕೊಂಡಿದೆ. ಸರ್ಕಾರದ ನೀತಿಗಳಿಂದಾಗಿ ರಾಜ್ಯದಲ್ಲಿ ಕೋಟ್ಯಂತರ ಬಂಡವಾಳ ಹೂಡಿಕೆಗೆ ಅನೇಕ ಕಂಪನಿಗಳು ಮುಂದಾಗಿವೆ. ಉದ್ಯಮಿಗಳಗೆ ಪೂರಕ ವಾತಾವರಣ ನಿರ್ಮಿಸುವ ಜತೆಗೆ ರಾಜ್ಯದಲ್ಲಿ 5 ಹೊಸ ಇಂಟಿಗ್ರೇಟೆಡ್ ಟೌನ್ಷಿಪ್ ಕಟ್ಟುವ ಪ್ರಕ್ರಿಯೆ ಆರಂಭವಾಗಿದೆ. ಈ ಕುರಿತು ಪರಿಶೀಲನೆ ನಡೆಸಲಾಗುವುದು ಎಂದು ಬೊಮ್ಮಾಯಿ ಈ ಹಿಂದೆಯೇ ತಿಳಿಸಿದ್ದರು.
ಪರಿಶೀಲನಾ ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ಐ.ಎಸ್.ಎನ್. ಪ್ರಸಾದ್, ಕೈಗಾರಿಕಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ.ವಿ. ರಮಣರೆಡ್ಡಿ, ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಕಾರ್ಯದರ್ಶಿ ಡಾ. ಅಜಯ್ ನಾಗಭೂಷಣ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.