ಸ್ಫೋಟಕದೊಂದಿಗೆ ಭಟ್ಕಳ, ಬೆಂಗಳೂರಲ್ಲಿ ಮೂವರ ಬಂಧನ
ಬೆಂಗಳೂರು, ಜ. 8: ನಗರದ ಚರ್ಚ್ ಸ್ಟ್ರೀಟ್ನಲ್ಲಿ ಬಾಂಬ್ ಸ್ಫೋಟ ಪ್ರಕರಣದ ಹಿಂದೆ ಬಿದ್ದಿರುವ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಮತ್ತು ಇಂಟೆಲಿಜೆನ್ಸ್ ಬ್ಯೂರೊ (ಐಬಿ) ತನಿಖಾಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಭಟ್ಕಳದಲ್ಲಿ ಇಬ್ಬರು ಹಾಗೂ ಬೆಂಗಳೂರಿನ ಕಾಕ್ಸ್ ಟೌನ್ ಪ್ರದೇಶದಲ್ಲಿ ಓರ್ವನನ್ನು ಬಂಧಿಸಿದ್ದಾರೆ. ಆದರೆ, ಇವರು ಚರ್ಚ್ ಸ್ಟ್ರೀಟ್ ಬಾಂಬ್ ಸ್ಫೋಟ ಪ್ರಕರಣದೊಂದಿಗೆ ಸಂಬಂಧ ಹೊಂದಿದ್ದಾರೆಯೇ ಎಂಬುದು ದೃಢಪಟ್ಟಿಲ್ಲ.
ಸದ್ದಾಂ ಹುಸೇನ್ (35) ಹಾಗೂ ಸೈಯದ್ ಇಸ್ಮಾಯಿಲ್ ಅಫಾಕ್ (34) ಹಾಗೂ ಎಂಬಿಎ ವಿದ್ಯಾರ್ಥಿ ಅಬ್ದುಸ್ ಸುಬುರ್ (24) ಪೊಲೀಸರಿಗೆ ಸಿಕ್ಕಿಬಿದ್ದವರು. ಈ ಮೂವರನ್ನೂ ತನಿಖೆಗಾಗಿ ಸಿಸಿಬಿ (City Crime Branch) ಪೊಲೀಸರಿಗೆ ಒಪ್ಪಿಸಲಾಗಿದೆ. [ಚರ್ಚ್ ಸ್ಟ್ರೀಟ್ ನಲ್ಲಿ ಬಾಂಬ್ ಇಟ್ಟವ ಬಿಹಾರದಲ್ಲಿ ಸೆರೆ?]
ಸ್ಫೋಟಕಗಳ ವಶ : ಪೊಲೀಸರು ವಶಕ್ಕೆ ಪಡೆದಿರುವ ಶಂಕಿತರಿಗೆ ಸಂಬಂಧಪಟ್ಟ ಸ್ಥಳದಲ್ಲಿ ಹಲವು ಸ್ಫೋಟಕಗಳು ಪತ್ತೆಯಾಗಿವೆ. ಅಮೋನಿಯಂ ನೈಟ್ರೇಟ್, ಡಿಟೋನೇಟರ್ಗಳು ಹಾಗೂ ಟೈಮರ್ಗಳು ಸಿಕ್ಕಿವೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಎಂ.ಎನ್. ರೆಡ್ಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. [ಚರ್ಚ್ ಸ್ಟ್ರೀಟ್ ಸ್ಫೋಟ : ಶಂಕಿತರ ರೇಖಾ ಚಿತ್ರ ಸಿದ್ಧ]
ಬಂಧಿತ ಮೂವರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಇವರು ಅನ್ಸರ್-ಉಲ್-ತವಹಿದ್ ಎಂಬ ಸಂಘಟನೆಯ ಮುಖ್ಯಸ್ಥ ಸುಲ್ತಾನ್ ಅಹಮದ್ ಅರ್ಮರ್ ಎಂಬಾತನ ಸೂಚನೆಯಂತೆ ಕೆಲಸ ಮಾಡುತ್ತಿದ್ದರು. ಅನ್ಸರ್-ಉಲ್-ತವಹಿದ್ ಸಂಘಟನೆಯು ಇಂಡಿಯನ್ ಮುಜಾಹಿದೀನ್, ತೆಹ್ರೀಕ್-ಇ-ತಾಲಿಬಾನ್ ಮತ್ತು ಐಎಸ್ಐಎಸ್ ಸಂಘಟನೆಗಳ ಜೊತೆಗೆ ಸಂಬಂಧ ಹೊಂದಿದೆ ಎಂದು ತಿಳಿಸಿದ್ದಾರೆ. [ಕೊನೆಗೂ ಬೆಂಗಳೂರಿಗೆ ಸಿಕ್ಕಿತು ಎನ್ಎಸ್ ಜಿ]
ಆದರೆ, ಬಂಧಿತರು ಬೆಂಗಳೂರಿನ ಚರ್ಚ್ ಸ್ಟ್ರೀಟ್ನಲ್ಲಿ ಸಂಭವಿಸಿದ ಬಾಂಬ್ ಸ್ಫೋಟದೊಂದಿಗೆ ಸಂಬಂಧ ಹೊಂದಿದ್ದಾರೆಯೇ ಎಂಬುದು ಇನ್ನೂ ಪತ್ತೆಯಾಗಿಲ್ಲ ಎಂದು ಎಂ.ಎನ್. ರೆಡ್ಡಿ ವಿವರಿಸಿದ್ದಾರೆ.