ತುಮಕೂರಿನಲ್ಲಿ 949 ವರ್ಷಗಳ ಹಿಂದಿನ ದೇವಸ್ಥಾನವೇ ಮಂಗಮಾಯ!
ತುಮಕೂರು, ಜುಲೈ 14: ಕರ್ನಾಟಕದ ಆಧುನಿಕ ತುಮಕೂರು ಜಿಲ್ಲೆಯಲ್ಲಿ 949 ವರ್ಷಗಳ ಹಿಂದೆ ಮೊದಲನೇ ರಾಜರಾಜ ಚೋಳನ ವಂಶಸ್ಥರೊಬ್ಬರು ನಿರ್ಮಿಸಿದ ದೇವಸ್ಥಾನವೇ ನಾಪತ್ತೆ ಆಗಿದೆ ಎಂದು ಮಾಜಿ ಪೊಲೀಸ್ ಮಹಾನಿರೀಕ್ಷಕ ಎ.ಜಿ.ಪೊನ್ ಮಾಣಿಕ್ಕವೆಲ್ ದೂಷಿಸಿದ್ದಾರೆ.
ತುಮಕೂರು ಜಿಲ್ಲೆಯ ಗ್ರಾಮವೊಂದರಲ್ಲಿನ ದೇವಸ್ಥಾನದ ಬಗ್ಗೆ ಉಲ್ಲೇಖಿಸಿದ ಅವರು, ಕರ್ನಾಟಕ ಸರ್ಕಾರದೊಂದಿಗೆ ಈ ದೇವಸ್ಥಾನದ ಕುರಿತು ಚರ್ಚೆ ನಡೆಸಬೇಕು ಎಂದು ತಮಿಳುನಾಡು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಒಡಿಶಾದ ಮಹಾನದಿಯೊಳಗೆ ಮುಳುಗಿ ಹೋಗಿದ್ದ 500 ವರ್ಷ ಹಳೆಯ ದೇವಸ್ಥಾನ ಪತ್ತೆ
ತಮಿಳುನಾಡು ದೇವಾಲಯಗಳಿಂದ ನಾಪತ್ತೆಯಾದ ಮತ್ತು ಕಳ್ಳತನವಾದ ವಿಗ್ರಹಗಳು ಮತ್ತು ಕಲಾಕೃತಿಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಭೇದಿಸಲು ಹೈಕೋರ್ಟ್ ನೇಮಿಸಿದ ತನಿಖಾ ತಂಡದಲ್ಲಿ ಮಾಣಿಕ್ಯವೇಲ್ ವಿಶೇಷ ಅಧಿಕಾರಿ ಆಗಿದ್ದಾರೆ. ಈ ಹಿಂದೆ ವಿಗ್ರಹ ಪಡೆಯ ಪೊಲೀಸ್ ಮಹಾ ನಿರೀಕ್ಷಕರಾಗಿಯೂ ಇವರು ಸೇವೆ ಸಲ್ಲಿಸಿದ್ದಾರೆ.
ರಾಜೇಂದ್ರ ಚೋಳಪುರಂನಲ್ಲಿ ದೇವಸ್ಥಾನ:
ತಮಿಳುನಾಡಿನ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ಸಚಿವ ಪಿಕೆ ಶೇಖರ ಬಾಬುಗೆ ಬರೆದ ಪತ್ರದಲ್ಲಿ ಮಾಣಿಕ್ಕವೇಲ್ ಹಲವು ಅಂಶಗಳನ್ನು ಉಲ್ಲೇಖಿಸಿದ್ದಾರೆ. ಮೊದಲನೇ ರಾಜರಾಜ ಚೋಳನ ಮೊಮ್ಮಗ, ಮೊದಲನೇ ರಾಜೇಂದ್ರ ಚೋಳನ ಮಗನಾಗಿರುವ ಉದಯರ್ ರಾಜಾಧಿ ರಾಜ ದೇವರ್ ಎಂಬುವವರು ತುಮಕೂರು ಜಿಲ್ಲೆಯ ಕುಣಿಗಲ್ನಲ್ಲಿ 'ರಾಜೇಂದ್ರ ಚೋಳಪುರಂ' ಎಂಬ ಪಟ್ಟಣವನ್ನು ಸ್ಥಾಪಿಸಿದರು ಎಂದು ಉಲ್ಲೇಖಿಸಿದ್ದಾರೆ.
949 ವರ್ಷಗಳ ಹಿಂದಿನ ದೇವಾಲಯ:
ಕಳೆದ 949 ವರ್ಷಗಳ ಹಿಂದೆ ಕುಣಿಗಲ್ನಿಂದ ಐದು ಕಿಲೋಮೀಟರ್ ದೂರದಲ್ಲಿರುವ ಕೋಟೆಗಿರಿ ಗ್ರಾಮದಲ್ಲಿ ಉದಯರ್ ರಾಜಾಧಿ ರಾಜ ದೇವರ್ ತಮ್ಮ ತಂದೆಯ ನೆನಪಿಗಾಗಿ 'ರಾಜೇಂದ್ರ ಚೋಳೀಶ್ವರಂ' ಎಂಬ ದೇವಾಲಯವನ್ನು ನಿರ್ಮಿಸಿದ್ದರು. ಈ ದೇವಾಲಯಕ್ಕೆ ಅಪರೂಪದ ಕಂಚಿನ ನಟರಾಜ ವಿಗ್ರಹವನ್ನು ಮತ್ತು ಕಲ್ಲಿನ ವಿಗ್ರಹಗಳನ್ನು ('ರಾಜಾಧಿರಾಜ ವಿಂಧಗರ್' ಎಂದು ಕರೆಯುತ್ತಾರೆ) ದಾನ ಮಾಡಿದ್ದರು.
ಗ್ರಾಮದಲ್ಲಿ ದೇವಾಲಯವೇ ಮಂಗಮಾಯ:
ತುಮಕೂರು ಜಿಲ್ಲೆಯಲ್ಲಿ ಪುರಾತನ ದೇವಸ್ಥಾನವೇ ನಾಪತ್ತೆ ಆಗಿರುವ ಬಗ್ಗೆ ತಮ್ಮ ನಿಕಟ ಮೂಲಗಳು ತಿಳಿಸಿರುವ ಬಗ್ಗೆ ಮಾಣಿಕ್ಕವೇಲ್ ಉಲ್ಲೇಖಿಸಿದ್ದಾರೆ. ಪುರಾತನ ದೇವಸ್ಥಾನವು ಗ್ರಾಮದಲ್ಲಿ ಹೆಚ್ಚು ದಿನಗಳ ಕಾಲ ಉಳಿದಂತೆ ತೋರುತ್ತಿಲ್ಲ. ಗ್ರಾಮದಲ್ಲಿ ನಿರ್ಮಿಸುತ್ತಿರುವ ದೇವಸ್ಥಾನದ ಬಳಿಯಲ್ಲಿ ಹಳೆಯ ವಿಗ್ರಹಗಳು ಪತ್ತೆಯಾಗಿದ್ದು, ಈ ಹಿಂದಿನ ವಿಗ್ರಹವನ್ನು ಎಷ್ಟರ ಮಟ್ಟಿಗೆ ನಿರ್ಲಕ್ಷಿಸಲಾಗಿದೆ ಎಂಬುದನ್ನು ತೋರಿಸುತ್ತದೆ. ಪುರಾತನ ದೇವಾಲಯದಿಂದ ಕಂಚಿನ ಪ್ರತಿಮೆ ಮತ್ತು ಕಲ್ಲಿನ ವಿಗ್ರಹಗಳನ್ನು ಕಳ್ಳತನ ಮಾಡಲಾಗಿದೆ ಎಂದು ಹೇಳಿದ್ದಾರೆ.
ಹಳೆ ವಿಗ್ರಹಗಳನ್ನು ವಾಪಸ್ ಪಡೆಯುವಂತೆ ಸಲಹೆ:
ತಮಿಳುನಾಡು ಅಧಿಕಾರಿಗಳು ಶಿಲಾ ಶಾಸನಗಳನ್ನು ವಾಪಸ್ ಪಡೆಯಬೇಕು. ದೇವಸ್ಥಾನ ಮತ್ತು ವಿಗ್ರಹಗಳು ಕಾಣೆಯಾಗಿರುವ ಬಗ್ಗೆ ಸಂಬಂಧಪಟ್ಟ ಪೊಲೀಸರಿಗೆ ದೂರು ನೀಡಬೇಕು ಎಂದು ಮಾಣಿಕ್ಕವೆಲ್ ಹೇಳಿದ್ದಾರೆ. ದೇವಾಲಯ ಇರುವ ಪ್ರದೇಶವನ್ನು ಸಂರಕ್ಷಿತ ಸ್ಮಾರಕ ಎಂದು ಘೋಷಿಸಬೇಕೆಂದು ಒತ್ತಾಯಿಸಿದ್ದಾರೆ.
Recommended Video