ಲಂಚ ಸ್ವೀಕರಿಸುತ್ತಿದ್ದ ಚಿತ್ರದುರ್ಗದ ಸರ್ವೆ ಅಧಿಕಾರಿಯ ಬಂಧನ
ಚಿತ್ರದುರ್ಗದ ಸರ್ವೆ ಅಧಿಕಾರಿ ಶ್ರೀನಿವಾಸ್ ಜಮೀನಿನ ತತ್ಕಾಲ್ ಪೋಡಿ ಮಾಡಿಕೊಡಲು ರೈತರೊಬ್ಬರ ಬಳಿ 4,000 ಲಂಚ ಕೇಳಿದ್ದರು. ಅದರಂತೆ ಲಂಚ ಸ್ವೀಕರಿಸುತ್ತಿದ್ದ ಸಂದರ್ಭ ಎಸಿಬಿ ಅಧಿಕಾರಿಗಳು ಸರ್ವೆ ಅಧಿಕಾರಿಯನ್ನು ಬಲೆಗೆ ಕೆಡವಿದ್ದಾರೆ.
ಚಿತ್ರದುರ್ಗ, ಏಪ್ರಿಲ್ 26: ಕೃಷಿಕರೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ಚಿತ್ರದುರ್ಗದ ಸರ್ವೆ ಅಧಿಕಾರಿ ಹೆಚ್.ಆರ್ ಶ್ರೀನಿವಾಸ್ ರನ್ನು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಬಲೆಗೆ ಕೆಡವಿದ್ದಾರೆ.
ಎಚ್ ಆರ್ ಶ್ರೀನಿವಾಸ್ ರವರು ಜಮೀನಿನ ತತ್ಕಾಲ್ ಪೋಡಿ ಮಾಡಿಕೊಡಲು ರೈತರೊಬ್ಬರ ಬಳಿ 4,000 ಲಂಚ ಕೇಳಿದ್ದರು. ಅದರಂತೆ ಕೃಷಿಕರಿಂದ 3,500 ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಸಂದರ್ಭ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಅವರನ್ನು ಬಂಧಿಸಿದ್ದಾರೆ.[ಎಸಿಬಿ ಬಲೆಗೆ ಬಿದ್ದ ಯಲಬುರ್ಗಾ ಪಟ್ಟಣ ಪಂಚಾಯತ್ ಅಧಿಕಾರಿಗಳು]
ದೂರು ನೀಡಿದ ರೈತರು ಚಿತ್ರದುರ್ಗ ತಾಲ್ಲೂಕು, ಸಜ್ಜನಕೆರೆ ಗ್ರಾಮದವರಾಗಿದ್ದಾರೆ. ತಮ್ಮ ಜಮೀನು ಮಗನ ಹೆಸರಿನಲ್ಲಿ ಜಂಟಿ ಖಾತೆಯಿದೆ. ಇದರ ಜಮೀನಿನ ತತ್ಕಾಲ್ ಪೋಡಿ ಮಾಡುವ ಸಲುವಾಗಿ ತಾಲ್ಲೂಕು ಸರ್ವೆ ಕಛೇರಿಯಲ್ಲಿ ಅರ್ಜಿಯನ್ನು ಸಲ್ಲಿಸಿದ್ದರು. ಆಗ ಸರ್ವೆ ಅಧಿಕಾರಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.[ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದ ಲಂಚ ಬಾಕರು]
ಶ್ರೀನಿವಾಸ್ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ-1988 ರ ಅಡಿಯಲ್ಲಿ ಎಸಿಬಿ ಚಿತ್ರದುರ್ಗ ಜಿಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಸಂಬಂಧ ತನಿಖೆ ಮುಂದುವರೆದಿದೆ.