ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ ಪಾಠದ ಧಾಟಿಯಲ್ಲಿ ವಾರ್ನಿಂಗ್
Recommended Video

ಚಿಕ್ಕಮಗಳೂರು, ಜನವರಿ 11: ಮಾಧ್ಯಮದವರು ಕೆಲಸ ಮಾಡುವುದಕ್ಕೆ ಒಂದು ಚೌಕಟ್ಟಿದೆ. ಅದರೊಳಗೆ ಕೆಲಸ ಮಾಡಿ ಅನ್ನೋದು ನನ್ನ ವೈಯಕ್ತಿಕ ಮನವಿ. ಧನ್ಯಶ್ರೀ ಆತ್ಮಹತ್ಯೆ ಪ್ರಕರಣದಲ್ಲಿ ಮಾಧ್ಯಮಗಳು ಅದರಲ್ಲೂ ಕೆಲ ಮಾಧ್ಯಮಗಳು ಸಂಬಂಧ ಇಲ್ಲದ ಫೋಟೋಗಳನ್ನು ಪ್ರಸಾರ ಮಾಡುತ್ತಿವೆ ಎಂಬ ದೂರು ಬಂದಿದೆ ಎಂದು ಇಲ್ಲಿನ ಎಸ್ ಪಿ ಅಣ್ಣಾಮಲೈ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣವೊಂದು ವಿಚಾರಣೆ ಹಂತದಲ್ಲಿರುವಾಗ ಲವ್ ಜಿಹಾದ್ ಎಂಬ ವರದಿ ಪ್ರಸಾರ ಮಾಡುವುದು ಸರಿಯಲ್ಲ. ಇನ್ನು ವಾಟ್ಸ್ ಅಪ್ ಸಂಭಾಷಣೆಗಳನ್ನು ಬಯಲು ಮಾಡುವುದು ಕೂಡ ಸರಿಯಲ್ಲ. ಜತೆಗೆ ಈ ಪ್ರಕರಣದಲ್ಲಿ ಇಂಥವರ ಹೆಸರುಗಳಿವೆ ಎಂದು ವರದಿ ಮಾಡುವುದೆಲ್ಲ ತಪ್ಪಾಗುತ್ತದೆ ಎಂದು ಅವರು ಹೇಳಿದ್ದಾರೆ.
ಬೆಂಗಳೂರಿನ ಕೆಲವು ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಉನ್ನತ ಮಟ್ಟದಲ್ಲಿ ಕೆಲಸ ನಿರ್ವಹಿಸುತ್ತಿರುವವರು ಪಬ್ ಗಳಲ್ಲಿ ಇರುವ ಫೋಟೋಗಳನ್ನು ಹಾಕಿ, ಲವ್ ಜಿಹಾದ್ ಸುದ್ದಿ ಎಂದೆಲ್ಲ ಪ್ರಸಾರ ಮಾಡಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ವ್ಯಕ್ತಿಗಳು ಇಮೇಲ್ ಮೂಲಕ ದೂರು ನೀಡಿದ್ದಾರೆ. ಒಬ್ಬರು ಸ್ವತಃ ಬಂದು ದೂರು ನೀಡಿದ್ದಾರೆ ಎಂಬ ಮಾಹಿತಿ ನೀಡಿದರು.

ಮತ್ತೊಬ್ಬರ ಫೋನ್ ರೆಕಾರ್ಡ್ ಮಾಡಿಕೊಳ್ಳುವುದು ವೈಯಕ್ತಿಕ ವಿಚಾರದಲ್ಲಿ ನಾವು ತಲೆದೂರಿಸಿದಂತೆ ಆಗುತ್ತದೆ. ಹಾಗೆ ಮತ್ತೊಬ್ಬರಿಗೆ ಅರಿವಿಲ್ಲದೆ ಕರೆ ರೆಕಾರ್ಡ್ ಮಾಡಿಕೊಳ್ಳಬಾರದು ಹಾಗೂ ಇಂಥಿಂಥವರ ಹೆಸರಿದೆ ಎಂದು ಕೂಡ ವರದಿ ಮಾಡಬಾರದು. ಮಾಧ್ಯಮಗಳು ತಮಗಿರುವ ಹೊಣೆ, ಜವಾಬ್ದಾರಿ ಹಾಗೂ ಮಿತಿಯನ್ನು ತಿಳಿದುಕೊಳ್ಳಬೇಕು ಎಂದಿದ್ದಾರೆ.
ನೀವು (ಮಾಧ್ಯಮದವರು) ಅಟ್ಯಾಕ್ ಮಾಡುವಂತಿದ್ದರೆ ನನ್ನ ಮೇಲೆ ಮಾಡಿ. ನನ್ನ ಸೂಚನೆ ಮೇರೆಗೆ ಕೆಲಸ ಮಾಡುವ ಅಧಿಕಾರಿಗಳ ಮೇಲಲ್ಲ. ಧನ್ಯಶ್ರೀ ಪ್ರಕರಣದಲ್ಲಿ ಜನರನ್ನು ಪ್ರಚೋದಿಸಬೇಡಿ. ಈ ಪ್ರಕರಣದ ಆರೋಪಿ ಎಷ್ಟೇ ದೊಡ್ಡ ಸ್ಥಾನದಲ್ಲಿದ್ದರೂ ನಾನಂತೂ ಬಿಡೋದಿಲ್ಲ ಅಂತ ಮಾತು ಕೊಡ್ತಿದೀನಿ ಎಂದು ಅಣ್ಣಾಮಲೈ ಹೇಳಿದ್ದಾರೆ.












Click it and Unblock the Notifications