ವಿಧಾನಸೌಧದ ಯಡಿಯೂರಪ್ಪ ಕಚೇರಿಗೆ ಬೀಗ!
ಬೆಂಗಳೂರು, ಮೇ 18 : ಬಿಜೆಪಿ ಸರ್ಕಾರಕ್ಕೆ ಅಗ್ನಿ ಪರೀಕ್ಷೆ ಎದುರಾಗಿದೆ. ಶನಿವಾರ 4 ಗಂಟೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿಶ್ವಾಸಮತ ಸಾಬೀತು ಮಾಡಬೇಕಿದೆ. ಇದರ ನಡುವೆಯೇ ವಿಧಾನಸೌಧದಲ್ಲಿನ ಯಡಿಯೂರಪ್ಪ ಕಚೇರಿಗೆ ಬೀಗ ಜಡಿಯಲಾಗಿದೆ.
ಗುರುವಾರ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ವಿಧಾನಸೌಧದ 3ನೇ ಮಹಡಿಯ ಕೊಠಡಿಗೆ ಹೋಗಿ ಪೂಜೆ ಸಲ್ಲಿಸಿ, ತಮ್ಮ ಕಚೇರಿಯನ್ನು ಅಧಿಕೃತವಾಗ ಉದ್ಘಾಟನೆ ಮಾಡಿದ್ದರು.
ಶನಿವಾರ ವಿಶ್ವಾಸಮತ : ಕಾಂಗ್ರೆಸ್-ಜೆಡಿಎಸ್ ತಂತ್ರಗಳೇನು?
ಸಿದ್ದರಾಮಯ್ಯ ಎಂಬ ನಾಮಫಲಕ ತೆಗೆದು ಗುರುವಾರ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಗಳು ಎಂಬ ನಾಮಫಲಕ ಆಳವಡಿಸಲಾಗಿತ್ತು. ಆದರೆ, ಶುಕ್ರವಾರ ಬೆಳಗ್ಗೆ ಸುಪ್ರೀಕೋರ್ಟ್ ತೀರ್ಪಿನ ಬಳಿಕ ಮುಖ್ಯಮಂತ್ರಿಗಳ ಕಚೇರಿಗೆ ಬೀಗ ಹಾಕಲಾಗಿದೆ.
ಶುಕ್ರವಾರ ವಿಶ್ವಾಸಮತದ ಕುರಿತು ತೀರ್ಪು ನೀಡುವಾಗ ಸುಪ್ರೀಂಕೋರ್ಟ್ ಬಿ.ಎಸ್.ಯಡಿಯೂರಪ್ಪ ಅವರು ಯಾವುದೇ ಆಡಳಿತಾತ್ಮಕ ನಿರ್ಧಾರವನ್ನು ವಿಶ್ವಾಸಮತ ಸಾಬೀತು ಆಗುವ ತನಕ ಕೈಗೊಳ್ಳುವಂತಿಲ್ಲ ಎಂದು ಸೂಚನೆ ನೀಡಿದೆ.
ಬಿಜೆಪಿ ಸಂಪರ್ಕದಲ್ಲಿರುವ ಕಾಂಗ್ರೆಸ್ ಜೆಡಿಎಸ್ ಶಾಸಕರು ಯಾರು?
ಆದ್ದರಿಂದ, ವಿಧಾನಸೌಧದ ಸಿಬ್ಬಂದಿಗಳು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಚೇರಿಗೆ ಬೀಗ ಹಾಕಿದ್ದಾರೆ. ಶನಿವಾರ ಸಂಜೆ 4 ಗಂಟೆಗೆ ಬಿಜೆಪಿ ಸರ್ಕಾರ ವಿಧಾನಸಭೆಯಲ್ಲಿ ವಿಶ್ವಾಸಮತವನ್ನು ಸಾಬೀತು ಮಾಡಬೇಕಿದೆ.
ಸುಪ್ರೀಂ ಆದೇಶ : ಶನಿವಾರ ಬಹುಮತ ಸಾಬೀತು ಮಾಡಬೇಕು
ಸಂಖ್ಯಾಬಲ : ಬಿಜೆಪಿ ಬಳಿ 104 ಶಾಸಕ ಬಲವಿದೆ. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದು, ತಮ್ಮ ಬಳಿ 116 ಶಾಸಕರ ಇದ್ದಾರೆ ಎಂದು ಹೇಳುತ್ತಿವೆ. ವಿಶ್ವಾಸಮತ ಗೆಲ್ಲಲು 111 ಶಾಸಕ ಬಲದ ಅಗತ್ಯವಿದೆ.