Siddaramaiah: 12ನೇ ಶತಮಾನದಲ್ಲಿಯೇ ಪ್ರಜಾಪ್ರಭುತ್ವದ ಸ್ಥಾಪನೆಯಾಗಿತ್ತು- ಸಿಎಂ ಸಿದ್ದರಾಮಯ್ಯ
ಬಸವ ಜಯಂತಿಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರ ಸರ್ಕಾರ ಕೂಡ ಬಸವ ಜಯಂತಿ ಆಚರಣೆಗೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಹಾಗೇ ಹಲವು ವಿಶೇಷ ಕಾರ್ಯಕ್ರಮ ಹಮ್ಮಿಕೊಂಡು, ಬಸವಣ್ಣನವರ ವಿಚಾರಗಳನ್ನು ಸಮಾಜದ ಜನರಿಗೆ ತಿಳಿಸಲು ಮುಂದಾಗಿದೆ. ಇಂದು ಈ ಮಹತ್ವದ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿದ್ದು, ಸಿಎಂ ಸಿದ್ದರಾಮಯ್ಯ ಬಸವಣ್ಣನವರ ವಿಚಾರಗಳು ಹಾಗೂ ಸಮಾಜದಲ್ಲಿ ಬಸವಣ್ಣನವರು ತಂದ ಬದಲಾವಣೆ ಬಗ್ಗೆ ಮಾತನಾಡಿದ್ದಾರೆ.
'ಅನುಭವ ಮಂಟಪ- ಬಸವಾದಿ ಶರಣರ ವೈಭವ' ಹೆಸರಲ್ಲಿ ಇದೀಗ ರಥಯಾತ್ರೆಯನ್ನ ಇಡೀ ಕರ್ನಾಟಕ ರಾಜ್ಯದಲ್ಲಿ ಸಂಚರಿಸಲು ನಿರ್ಧರಿಸಲಾಗಿದೆ. ಇನ್ನು ಕರ್ನಾಟಕ ಶಕ್ತಿಸೌಧ ಆಗಿರುವ ವಿಧಾನಸೌಧದಲ್ಲಿ ವಿಶೇಷ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ವೇಳೆ ಸಿಎಂ ಸೇರಿ ಹಲವು ಪ್ರಮುಖರು ಕಾರ್ಯಕ್ರಮದ ಭಾಗವಾಗಿದ್ದರು.

ಇದೇ ಸಮಯದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, 12ನೇ ಶತಮಾನದಲ್ಲಿಯೇ ಪ್ರಜಾಪ್ರಭುತ್ವದ ಸ್ಥಾಪನೆಯಾಗಿತ್ತು ಎಂದು ಬಸವಣ್ಣ ಅವರ ಕೊಡುಗೆ ನೆನೆದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ವಿಧಾನಸೌಧದಲ್ಲಿ ಇಂದು ಆಯೋಜಿಸಿದ್ದ 'ಅನುಭವ ಮಂಟಪ- ಬಸವಾದಿ ಶರಣರ ವೈಭವ' ಕಾರ್ಯಕ್ರಮದ ಲಾಂಛನ ಬಿಡುಗಡೆ & ರಥಯಾತ್ರೆಗೆ ಚಾಲನೆ ನೀಡಿ ಸಿಎಂ ಮಾತನಾಡಿದರು.
ಎಲ್ಲಾ ಧರ್ಮ & ಜಾತಿಯವರಿಗೂ ಅವಕಾಶ
ಬಸವಣ್ಣ ಅವರು ಸಮಾಜಕ್ಕಾಗಿ ಬದುಕಿದವರು, ಸಮಾಜ ಬದಲಾವಣೆಗೆ ಬದುಕಿರುವವರೆಗೂ ಪ್ರಯತ್ನಿಸಿದರು. ಬಸವಣ್ಣ ಅವರು ತಮ್ಮ ಅನುಭವ ಮಂಟಪ ಪರಿಕಲ್ಪನೆ ಮೂಲಕ 12ನೇ ಶತಮಾನದಲ್ಲಿಯೇ ಪ್ರಜಾಪ್ರಭುತ್ವದ ಸ್ಥಾಪನೆ ಆಗುವಂತೆ ಮಾಡಿದ್ದರು ಎಂದು ಹೆಮ್ಮೆಯನ್ನ ವ್ಯಕ್ತಪಡಿಸಿದರು.
ಅನುಭವ ಮಂಟಪದಲ್ಲಿ ಜನರ ಸಮಸ್ಯೆಗಳ ಚರ್ಚಿಸಿ ಅದಕ್ಕೆ ಪರಿಹಾರವನ್ನು ಕಂಡುಹಿಡಿದು, ಜಾರಿ ಮಾಡುತ್ತಿದ್ದರು. ಜಗತ್ತಿನ ಮೊದಲ ಸಂಸತ್ತು ಇದಾಗಿತ್ತು. ಎಲ್ಲಾ ಧರ್ಮ, ಜಾತಿಯವರಿಗೆ ಭಾಗವಹಿಸಲು ಅವಕಾಶವನ್ನ ಕಲ್ಪಿಸಲಾಗಿತ್ತಲ್ಲದೇ ಅವರ ಅಭಿಪ್ರಾಯವನ್ನು ಮುಕ್ತವಾಗಿಯೇ ವ್ಯಕ್ತಪಡಿಸಲು ಅವಕಾಶ ನೀಡಿದ್ದರು, ಎಂದು ಅನುಭವ ಮಂಟಪ ಪರಿಕಲ್ಪನೆ ಕುರಿತು ಶ್ಲಾಘನೆ ವ್ಯಕ್ತಪಡಿಸಿದರು ಸಿಎಂ ಸಿದ್ದರಾಮಯ್ಯ.
ಹಾಗೇ ಮಾತು ಮುಂದುವರಿಸಿದ ಸಿಎಂ ಸಿದ್ದರಾಮಯ್ಯ ಅವರು, ಕಳೆದ ಬಾರಿ ನಮ್ಮ ಸರ್ಕಾರ ಅವಧಿಯಲ್ಲಿ ಬಸವ ಕಲ್ಯಾಣ ಪುನರುತ್ಥಾನ ಮಾಡಲು ಹಿರಿಯ ಸಾಹಿತಿ ಗೊ.ರು. ಚನ್ನಬಸಪ್ಪ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನೂ ರಚಿಸಲಾಗಿತ್ತು. ಪುನರುತ್ಥಾನದ ಕೆಲಸವನ್ನು ಈ ಬಾರಿ ಪೂರೈಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಅವರು ಇದೇ ವೇಳೆ ಭರವಸೆ ನೀಡಿದರು.
ಸಾಮಾಜಿಕ ರೋಗಗಳಿಗೆ ಪರಿಹಾರ ಸೂಚಿಸಿದ್ದರು
ಬಸವಣ್ಣ ಅವರನ್ನ ಸಾಂಸ್ಕೃತಿಕ ನಾಯಕ ಎಂದು ನಮ್ಮ ಸರ್ಕಾರ ಘೋಷಣೆಯನ್ನ ಮಾಡಿದೆ. ಕೇವಲ ಘೋಷಣೆ ಮಾತ್ರವಲ್ಲ ಬಸವಣ್ಣ ಅವರನ್ನ ಸಾಂಸ್ಕೃತಿಕ ನಾಯಕ ಅಂತ ಒಪ್ಪಿಕೊಂಡು ಜಾರಿ ಮಾಡಿದ್ದು ನಾವು ಎಂದು ತಮ್ಮ ಸರ್ಕಾರದ ಅವಧಿಯಲ್ಲಿ ಕೈಗೊಂಡ ನಿರ್ಧಾರದ ಬಗ್ಗೆ ತಿಳಿಸಿದರು. ಬಸವಣ್ಣನವರು ಸಾಮಾಜಿಕ ಕ್ರಾಂತಿ ಮಾಡಿದವರು. ಸಮಾಜದಲ್ಲಿನ ಸಾಮಾಜಿಕ ರೋಗಗಳಿಗೆ ಪರಿಹಾರ ಸೂಚಿಸಿದ್ದು ಮಾತ್ರವಲ್ಲದೇ ನುಡಿದಂತೆ ನಡೆಯುವ ಹಾಗೂ ನಡೆದಂತೆ ನುಡಿಯುವ ಪ್ರಯತ್ನ ಮಾಡಿದರು ಎಂದು ಸಿಎಂ ಸಿದ್ದರಾಮಯ್ಯ ಹೆಮ್ಮೆ ವ್ಯಕ್ತಪಡಿಸಿದರು.












Click it and Unblock the Notifications